ಚಿಕ್ಕಮಗಳೂರು: ಸಚಿವರಾದ ಈಶ್ವರಖಂಡ್ರೆ ಮತ್ತು ಕೃಷ್ಣಬೈರೇಗೌಡ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಅರಣ್ಯ ಮತ್ತು ಕಂದಾಯ ಭೂಮಿ ಸಮಸ್ಯೆಗಳಿಗೆ ಪರಿಹಾರ ಸಿಗುವ ನಿಟ್ಟಿನಲ್ಲಿ ಚರ್ಚೆಯಾಗಿದ್ದು, ಅಧಿಕಾರಿಗಳು ಸಚಿವರ ಆದೇಶವನ್ನು ಅನುಷ್ಠಾನ ಮಾಡಬೇಕು ಎಂದು ಜಿಲ್ಲಾ ನಾಗರೀಕ ಮತ್ತು ರೈತ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ವಿಜಯ್ಕುಮಾರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಾನಸೌಧದಲ್ಲಿ ಜು.೩ ರಂದು ನಡೆದ ಸಭೆಯಲ್ಲಿ ಇಬ್ಬರು ಸಚಿವರೊಂದಿಗೆ ಜಿಲ್ಲಾ ಸಚಿವರಾದ ಕೆ.ಜೆ. ಜಾರ್ಜ್ ಮತ್ತು ಜಿಲ್ಲೆಯ ಐವರು ಶಾಸಕರು, ಕಂದಾಯ ಇಲಾಖೆ ಕಾರ್ಯದರ್ಶಿ, ಎಡಿಸಿ, ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ನಾಗರೀಕ ಮತ್ತು ರೈತ ಹೋರಾಟ ಸಮಿತಿ ಮುಖಂಡರು ಭಾಗವಹಿಸಿದ್ದೆವು. ಅಲ್ಲಿ ಜಿಲ್ಲೆಯ ಮೂಲ ಸಮಸ್ಯೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು ಎಂದು ಹೇಳಿದರು.
ಎಮ್ಮೆದೊಡ್ಡಿ, ಚುರ್ಚೆಗುಡ್ಡ, ಕಾಮೇನಹಳ್ಳಿ ರೈತರ ಸಮಸ್ಯೆ, ಸೊಪ್ಪಿನಬೆಟ್ಟ, ಭದ್ರಾ ಮುಳಗಡೆ ರೈತರ ಸಮಸ್ಯೆ, ಜಿಲ್ಲೆಯ ನಮೂನೆ, ೫೦-೫೩, ೫೭ ರ ಜತೆಗೆ ಜಿಲ್ಲೆ ನಿವೇಶನ ರಹಿತರ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಒಟ್ಟಾರೆ ರಾಜ್ಯದಲ್ಲಿ ಇದ್ದ ಸುಮಾರು ೯ ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯ ಪರಿಷ್ಕರಿಸಿ ಸುಮಾರು ೩.೪೦ ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಮಿತಿಗೊಳಿಸಲಾಗಿದೆ. ಈ ಭೂಮಿಯು ಪೂರ್ಣ ಕಂದಾಯ ಭೂಮಿಯಾಗಿದೆ.
ಈಗಾಗಲೆ ರಾಜ್ಯದಲ್ಲಿ ೪(೧) ಸೇರಿದಂತೆ ಅರಣ್ಯ ಸಮಸ್ಯೆಯಲ್ಲಿರುವ ಸುಮಾರು ೪೦ ಸಾವಿರ ಹೆಕ್ಟೇರ್ ಪ್ರದೇಶವನ್ನು ರೈತರಿಗೆ ಮತ್ತು ಗ್ರಾಮ, ಜನವಸತಿ ಪ್ರದೇಶಗಳನ್ನು ಬಿಟ್ಟು ಇದಕ್ಕೆ ಬದಲಿಯಾಗಿ ಸುಮಾರು ೩.೪೦ ಲಕ್ಷ ಹೆಕ್ಟೇರ್ ಕಂದಾಯ ಭೂಮಿಯನ್ನು ಡೀಮ್ಡ್ ಫಾರೆಸ್ಟ್ಗಾಗಿ ಮುಂದುವರಿಸಲು ಮುಂದಿನ ನವೆಂಬರ್ ತಿಂಗಳೊಳಗೆ ಸುಪ್ರೀಂಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಚಿವ ಈಶ್ವರಖಂಡ್ರೆ ಅವರು ಸಭೆಗೆ ಮತ್ತು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಹೇಳಿದರು.
ಡಿಮ್ಡ್ ಫಾರೆಸ್ಟ್ ಅಫಿಡವಿಟ್ ಸಲ್ಲಿಸುವ ಕಾಲಮಿತಿಯೊಳಗೆ ಈಗಾಗಲೆ ಘೋಷಿತವಾಗಿರುವ ಸೆಕ್ಷನ್೪(೧) ಅಧಿಸೂಚನೆಯಲ್ಲಿರುವ ರೈತರ ಸಾಗುವಳಿಯ ನಿಖರ ವಿಸ್ತೀರ್ಣ ಮತ್ತು ಗ್ರಾಮದ ಅಭಿವೃದ್ಧಿ ಮತ್ತಿತರೆ ಉಪಯೋಗಕ್ಕೆ ಅವಶ್ಯಕತೆ ಇರುವ ವಿಸ್ತೀರ್ಣವನ್ನು ಗುರುತಿಸಿ ಸೆಕ್ಷನ್ ೧೭ ಅಂತಿಮ ಅಧಿಸೂಚನೆ ಮಾಡಲು ಎಫ್ಎಸ್ಒಗಳಿಗೆ ಸಚಿವರು ಸೂಚಿಸಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳು ಎಫ್ಎಸ್ಒ ಅವರೊಂದಿಗೆ ಕಂದಾಯ ಅಗತ್ಯತೆಯ ಭೂಮಿಯನ್ನು ಗುರುತಿಸಲು ಎಲ್ಲ ಗ್ರಾಮಲೆಕ್ಕಿಗರು ಮತ್ತು ರಾಜಸ್ವ ನಿರೀಕ್ಷಕರುಗಳಿಗೆ ಸೂಚನೆ ನೀಡಬೇಕು. ಅರಣ್ಯ ೪(೧), ರೈತರ ಸಾಗುವಳಿ ಮಾಹಿತಿಯ ಪಟ್ಟಿಯನ್ನು ಸಲ್ಲಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಸಂಚಾಲಕರಾದ ಕೆ.ಕೆ.ರಘು, ವೀರಭದ್ರಪ್ಪ, ರವಿಕುಮಾರ್, ಈಶ್ವರ್, ಡಿ.ರವಿ ಮತ್ತಿತರರಿದ್ದರು
Farmers’ Struggle Committee demands implementation of Minister’s order
Leave a comment