ಚಿಕ್ಕಮಗಳೂರು: ಪಾಶ್ಚಾತ್ಯ ಸಂಸ್ಕೃತಿ ಸಂಗೀತದ ಹಾವಳಿಯಿಂದಾಗಿ ನಶಿಸುತ್ತಿರುವ ಅತ್ಯಮೂಲ್ಯ ಜನಪದ ಕಲೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸುವ ಉದ್ದೇಶದೊಂದಿಗೆ ಏ. ೨೬ ರಂದು ಭಾನುವಾರ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಮಟ್ಟದ ೬ನೇ ಜಾನಪದ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಾ. ಜೆ.ಪಿ ಕೃಷ್ಣೇಗೌಡ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಮ್ಮೇಳನಾಧ್ಯಕ್ಷರಾಗಿ ಮಾಜಿ ಸಚಿವೆ ಹಾಗೂ ಹಿರಿಯ ಜಾನಪದ ಕಲಾವಿದೆ ಶ್ರೀಮತಿ ಮೋಟಮ್ಮನವರು ಆಯ್ಕೆಯಾಗಿದ್ದಾರೆ ಎಂದು ಹೇಳಿದ ಅವರು ನಾಡ ಧ್ವಜವನ್ನು ಕಜಾಪ ರಾಜ್ಯಾಧ್ಯಕ್ಷ ಪ್ರೋ. ಹಿ.ಚಿ ಬೋರಲಿಂಗಯ್ಯ ಅನಾವರಣಗೊಳಿಸಲಿದ್ದಾರೆ, ಅಧ್ಯಕ್ಷತೆಯನ್ನು ಕಜಾಪ ಜಿಲ್ಲಾಧ್ಯಕ್ಷ ಜಿ.ಬಿ ಸುರೇಶ್ ವಹಿಸಲಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾಳೇನಹಳ್ಳಿ ಬಸಪ್ಪ, ಗುರುವೇಶ್ ಗೌಡ, ಮುಗುಳಿ ಲಕ್ಷ್ಮೀ ದೇವಮ್ಮ, ಜಿ.ಎಸ್ ತಿಪ್ಪೇಶ್, ಸವಿತಾ ಸತ್ಯನಾರಾಯಣ, ಬಿ.ಪಿ ಪರಮೇಶ್ವರಪ್ಪ, ಗಾಯಿತ್ರಮ್ಮ, ಕೆಸವಿನ ಮನೆ ಬೈರೇಗೌಡ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಸಮ್ಮೇಳನದಂದು ಬೆಳಿಗ್ಗೆ ೯ ಗಂಟೆಗೆ ತಾಲ್ಲೂಕು ಕಛೇರಿ ಆವರಣದಿಂದ ಜಾನಪದ ಕಲಾ ತಂಡಗಳು ಪೂರ್ಣಕುಂಭ ಹಾಗೂ ವಾಧ್ಯಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹೊರಟು ಎಂ.ಜಿ ರಸ್ತೆ ಮೂಲಕ ಸಾಗಿ ಕಲಾಮಂದಿರ ತಲುಪಲಿದೆ, ಕಲಾತಂಡಗಳ ಪ್ರದರ್ಶನವನ್ನು ಮಾಜಿ ಸಚಿವ ಬಿ.ಬಿ ನಿಂಗಯ್ಯ ಉದ್ಘಾಟಿಸುವರು, ಮೆರವಣಿಗೆ ಉದ್ಘಾಟನೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್ ಶೆಟ್ಟಿ ಹಾಗೂ ಮೆರವಣೆಗೆಗೆ ಚಾಲನೆಯನ್ನು ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ ರಾಜೇಗೌಡ ನೆರೆವೇರಿಸುವರು ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಗ್ರಾಮೀಣ ಸಮುದಾಯದ ಕಲೆ, ಸಾಹಿತ್ಯ, ಸಂಸ್ಕೃತಿ ಶಿಥಿಲಗೊಳ್ಳದಂತೆ ಜಾಗೃತಿ ಮೂಡಿಸುವುದು ಗ್ರಾಮೀಣ ಜನರು ಅನಕ್ಷರಸ್ಥರಾಗಿದ್ದು ಪ್ರತಿಭಾವಂತರಾಗಿದ್ದಾರೆ ಅವರಲ್ಲಿ ಸಾಹಿತ್ಯ ಕಲೆಗಳನ್ನು ಕಟ್ಟುವ ಶಕ್ತಿ ಇದೆ ಎಂಬ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ಜಾನಪದ ಗೋಷ್ಠಿಗಳ ಮುಖಾಂತರ ಜನಪದದ ಹಲವು ವಿಸ್ತಾರಗಳನ್ನು ಪರಿಚಯಿಸುವ ಜೊತೆಗೆ ಸ್ಥಳೀಯವಾಗಿರುವ ಗಾದೆ, ಒಗಟು, ಲಾವಣಿ ಗೀತೆ, ಕಥೆ ಮೊದಲಾದವುಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಆಸಕ್ತರನ್ನು ಪ್ರೇರೇಪಿಸಲಾಗುವುದು, ಜಾನಪದದ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಕೆಲಸ ಮಾಡಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೇಳಿದರು.
ಸಮ್ಮೇಳನದ ಉದ್ಘಾಟನೆಯನ್ನು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜಾರ್ಜ್ ನೆರೆವೇರಿಸುವರು, ಕನ್ನಡ ಮತ್ತು ಸಂಸ್ಕೃತಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸುವರು, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ ಪ್ರಾಣೇಶ್ ಜನಪದ ವಾದ್ಯಗಳನ್ನು ಉದ್ಘಾಟಿಸುವರು, ಜನಪದ ವಸ್ತು ಪ್ರದರ್ಶನ ಉದ್ಘಾಟನೆಯನ್ನು ಶಾಸಕ ಹೆಚ್.ಡಿ ತಮ್ಮಯ್ಯ ನೆರೆವೇರಿಸುವರು, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಜನಪದ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ ಎಂದರು.
ಜನಪದ ಸಿರಿಸ್ಮರಣಿಕೆಗಳನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಬೋಜೇಗೌಡ ನೆರೆವೇರಿಸುವರು ಭುವನೇಶ್ವರಿ ಭಾವಚಿತ್ರಕ್ಕೆ ಶಾಸಕಿ ನಯನಮೋಟಮ್ಮ ಪುಷ್ವನಮನ ಸಲ್ಲಿಸುವರು, ಹಿರಿಯ ಸಾಹಿತಿ ಗಿರಿಜಾಶಂಕರ್ ಆಶಯ ನುಡಿಗಳಾಡುವರು ಮುಖ್ಯ ಅತಿಥಿಗಳಾಗಿ ಎಂ.ಆರ್ ದೇವರಾಜ್ ಶೆಟ್ಟಿ, ಎಂ.ಸಿ ಶಿವಾನಂದ ಸ್ವಾಮಿ, ಭಂಡಾರಿ ಶ್ರೀನಿವಾಸ್, ಪಿ.ಎ ರಾಜಣ್ಣ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಜಾನಪದ ಗ್ರಾಮೀಣ ಜನರ ಕೃಷಿಕರ ಅನುಭವ ಸಂಪತ್ತು ಇದೊಂದು ಮೌಖಿಕ ಸಾಹಿತ್ಯ, ಪೂರ್ವಜರ ಸಾಮಾಜಿಕ ಹಾಗೂ ನೈತಿಕ ಬದುಕಿನ ಸಾಂಸ್ಕೃತಿಕ ವ್ಯಕ್ತಿತ್ವದ ಸಂಕೇತವಾಗಿರುವ ಜನಪದ ಸಾಹಿತ್ಯ ಕಲೆಯನ್ನು ಉಳಿಸಿ ನಾಗರೀಕ ಸಮಾಜಕ್ಕೆ ಪರಿಚಯಿಸುವ ಉದ್ದೇಶದೊಂದಿಗೆ ವಿಶ್ವ ವಿದ್ಯಾಲಯಗಳು ಇದನ್ನು ಶಾಸ್ತ್ರೀಯ ಅಧ್ಯಾಯನ ವಿಷಯವನ್ನಾಗಿ ಪರಿಗಣಿಸಿವೆ ಎಂದರು.
ಇದೇ ಸಂದರ್ಭದಲ್ಲಿ ರೈತ ಜಾನಪದ, ಮಹಿಳಾ ಜಾನಪದ, ಜನಪದರ ಜಗುಲಿ ಮತ್ತಿತರೇ ಗೋಷ್ಠಿಗಳನ್ನು ಹಮ್ಮಿಕೊಂಡು ಜನಪದ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಜಾಪ ಜಿಲ್ಲಾಧ್ಯಕ್ಷ ಜಿ.ಬಿ ಸುರೇಶ್, ಪ್ರಧಾನ ಕಾರ್ಯದರ್ಶಿ ಸವಿತಾ ಸತ್ಯನಾರಾಯಣ, ಜಿಲ್ಲಾ ಸಂಚಾಲಕಿ ಗಾಯಿತ್ರಮ್ಮ, ಉಪಾಧ್ಯಕ್ಷ ವಿನಿತ್ ಕುಮಾರ್, ಆಶ್ರಯ ಫೌಂಡೇಶನ್ ಸಂಸ್ಥಾಪಕಿ ವರ್ಷ ಉಪಸ್ಥಿತರಿದ್ದರು.
District level 6th Folklore Conference to be held on April 26
Leave a comment