ಚಿಕ್ಕಮಗಳೂರು: ಚಿಕ್ಕಮಗಳೂರು ಟೌನ್ ಕೋ-ಆಪರೇಟಿವ್ ಸೊಸೈಟಿಯ ಆಡಳಿತ ವ್ಯವಸ್ಥೆಯನ್ನು ಷೇರುದಾರರಿಗೆ ಅನುಕೂಲ ಆಗುವಂತೆ ಡಿಜಿಟಲೀಕರಣಗೊಳಿಸಲಾಗಿದೆ ಎಂದು ಸೊಸೈಟಿ ಅಧ್ಯಕ್ಷ ವರಸಿದ್ದಿ ವೇಣುಗೊಪಾಲ ಹೇಳಿದರು.
ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಹಿಂದೆ ಚೆಕ್ ಮೂಲಕ ಸಾಲವಿತರಣೆ ಮಾಡುತ್ತಿದ್ದು ಇದೀಗ ನೇರವಾಗಿ ಬ್ಯಾಂಕ್ ಖಾತೆಗೆ ಆರ್ಟಿಜಿಎಸ್, ನೆಫ್ಟ್ ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ಸಾಲಗಳ ವಸೂಲಾತಿಯನ್ನು ಮೊಬೈಲ್ ಆಪ್ ಬಳಸಿ ಪಾರದರ್ಶಕವಾದ ವಸೂಲಾತಿ ನಡೆಯುತ್ತಿದೆ. ಕಳೆದ ವರ್ಷ ನಮ್ಮ ಆಡಳಿತ ಮಂಡಳಿ ನೀಡಿದ್ದ ಭರವಸೆಯನ್ನು ಸಂಪೂರ್ಣ ಈಡೇರಿಸಿದೆ ಎಂದು ತಿಳಿಸಿದರು.
ಕಳೆದ ೧೫ ವರ್ಷದಲ್ಲಿ ಬಾಕಿ ಇದ್ದ ೧.೫ ಕೋಟಿ ರೂ ಸಾಲವನ್ನು ವಸೂಲಿ ಮಾಡಲಾಗಿದೆ. ಸುಮಾರು ೧೨೫ ಮಂದಿ ಸಾಲಗಾರರನ್ನು ಕಚೇರಿಗೆ ಕರೆಸಿ ತಿಳಿಹೇಳಿ ಸಾಲ ಕಟ್ಟುವಂತೆ ಮನವೊಲಿಸಿದ್ದೇವೆ. ಪುನಾ ಈ ವರ್ಷ ೧೦೦ ಮಂದಿ ಷೇರುದಾರರಿಗೆ ಸಾಲ ವಿತರಿಸಿದ್ದೇವೆ. ಸಂಘಕ್ಕೆ ೧೫೦ ಕ್ಕೂ ಅಧಿಕ ಸದಸ್ಯರನ್ನು ನೊಂದಾಯಿಸಿಕೊಳ್ಳಲಾಗಿದೆ. ಷೇರುದಾರರಿಂದ ಸಂಘದ ಬಂಡವಾಳ ವೃದ್ದಿಸಿಕೊಳ್ಳಲಾಗಿದೆ ಎಂದರು.
ನಮ್ಮ ಸಂಸ್ಥೆಯಲ್ಲಿ ಸಂಘದ ಹಿರಿಯ ಸದಸ್ಯರಿಗೆ ಅಧಿಕ ಬಡ್ಡಿ ನೀಡಲಾಗುತ್ತಿದೆ. ಸಂಘದ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ ಅವರು, ಸಂಘದ ಷೇರು ೫೦೦ ರೂ.ಗಳಿದ್ದು ಇದನ್ನು ೨ ಸಾವಿರ ರೂ. ಗೆ ಹೆಚ್ಚಿಸಲು ಕಾರ್ಯಕಾರಿ ಮಂಡಳಿ ತೀರ್ಮಾನಿಸಿ ಮಹಾಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ. ಹಿಗಾಗಿ ಎಲ್ಲ ಸದಸ್ಯರು ೨ ಸಾವಿರ ರೂ. ಷೇರು ಹಣವನ್ನು ಭರ್ತಿಮಾಡುವಂತೆ ವಿನಂತಿಸುತ್ತೇನೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಉಪಾಧ್ಯಕ್ಷೆ ಹಾಲಮ್ಮ ರಾಮಚಂದ್ರ, ನಿರ್ದೇಶಕರಾದ ರಘು, ಗಂಗಾಧರ, ಪ್ರಶಾಂತ್, ಕುಮಾರ್, ರವಿ ಕುಮಾರ್, ಈಶ್ವರಪ್ಪ ಕೋಟೆ, ಕೇಶವ ಮೂರ್ತಿ , ಕಾರ್ಯದರ್ಶಿ ಗಾಯತ್ರಿ ಉಪಸ್ಥಿತರಿದ್ದರು.
Digitalization of the governance system for the benefit of shareholders
Leave a comment