ಚಿಕ್ಕಮಗಳೂರು: ಡೀಮ್ಡ್ ಫಾರೆಸ್ಟ್ ಮತ್ತು ಅರಣ್ಯ ಸಮಸ್ಯೆಗಳನ್ನು ನಿವಾರಿಸಲು ಎಸ್ಐಟಿ ರಚಿಸಿ ಸರ್ವೆ ಆರಂಭಿಸಿದೆ. ಈ ಸರ್ವೆಯಲ್ಲಿ ಭಾಗವಹಿಸುವ ಅಧಿಕಾರಿಗಳು ಸರಕಾರದ ಸ್ಪಷ್ಟ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾ ನಾಗರೀಕ ಮತ್ತು ರೈತ ಹೋರಾಟ ಸಮಿತಿ ಅಧ್ಯಕ್ಷ ಎಸ್.ವಿಜಯ್ಕುಮಾರ್ ಆಗ್ರಹಿಸಿದರು.
ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಸರ್ವೆಗೆ ಹೋಗುವ ಕಂದಾಯ, ಸರ್ವೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಂಬಂಧಪಟ್ಟ ಪಿಡಿಒ ಮತ್ತು ಗ್ರಾಮಸ್ಥರನ್ನು ಒಳಗೊಂಡು ಸರ್ವೆ ನಡೆಸಬೇಕು. ಈ ಬಾರಿ ನಡೆಸಲಾಗುವ ಎಸ್ಐಟಿ ಸರ್ವೆ ಅರಣ್ಯ ಮತ್ತು ಕಂದಾಯ ಇಲಾಖೆ ಸಮಸ್ಯೆ ಸರಿಪಡಿಸಲು ಅಂತಿಮ ಅವಕಾಶವಾಗಿದೆ ಎಂದರು.
ಇದರಲ್ಲಿ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದಲ್ಲಿ ರೈತರು, ಜನಸಾಮಾನ್ಯರು ಜೀವನ ಪರ್ಯಂತ ಸಮಸ್ಯೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಗ್ರಾಮಸ್ಥರು ಕೂಡ ಈ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಸೆಕ್ಷನ್ ೪(೧) ಪ್ರದೇಶಗಳನ್ನು ಸೆಕ್ಷನ್ ೧೭ ಮಾಡಿ ಮೀಸಲು ಅರಣ್ಯ ಅಂತಿಮಗೊಳಿಸಲು ನೇಮಿಸಲಾಗಿರುವ ಎಫ್ಎಸ್ಒ ಅವರ ಅವಧಿ ಮೀರುತ್ತಿದ್ದು ಬಾಕಿ ಇರುವ ಹಾಗೂ ಸೆಕ್ಷನ್ ೫ ಹೊರಡಿಸಲಾಗಿರುವ ಎಲ್ಲ ಕಡತಗಳನ್ನು ಆದೇಶ ಬರೆದು ಅಂತಿಮಗೊಳಿಸಬೇಕು. ಎಫ್ಎಸ್ಒ ರೈತರ ಮತ್ತು ಅರಣ್ಯ ಇಲಾಖೆ ವಿಚಾರಣೆಯೊಂದಿಗೆ ಬರೆಯಲಾಗಿರುವ ಆದೇಶಗಳ ಮೀಸಲು ಅರಣ್ಯ ಸ್ಕೆಚ್ಗೆ ಡಿಎಫ್ಒ ಸಹಿ ಹಾಕಿ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.
ಸರಕಾರ ಫಾರಂ ೫೭ ನ್ನು ನಮೂನೆ ೫೩ ಕ್ಕೆ ಪರಿವರ್ತಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಅರ್ಹರಿಗೆ ವಿಲೇವಾರಿ ಮಾಡಬೇಕು ಮತ್ತು ಮೀಸಲು ಅರಣ್ಯ ಸಮಸ್ಯೆಯಲ್ಲಿರುವ ಭೂಮಿಗಳಿಗೆ ಪರಿಹಾರವಾಗಿ ಅರಣ್ಯ ಇಲಾಖೆಗೆ ಭೂಮಿ ಒದಗಿಸಿ ರೈತರಿಗೆ ಬದುಕು ಕಟ್ಟಿಕೊಡಬೇಕು ಎಂದು ಆಗ್ರಹಿಸಿದರು.
ಮುಳ್ಳಯ್ಯನಗಿರಿ ಮೀಸಲು ಸಂರಕ್ಷಿತ ಪ್ರದೇಶವನ್ನು ಘೋಷಣೆಗೂ ಮುನ್ನ ಈ ಹಿಂದೆ ಹೋರಾಟಗಾರರು, ಗ್ರಾಮಪಂಚಾಯಿತಿ ಸಭೆಗಳಲ್ಲಿ ಚರ್ಚಿಸಿ ತೆಗೆದುಕೊಂಡಿರುವ ತೀರ್ಮಾನ ಮತ್ತು ಜಿಲ್ಲಾ ಕೆಡಿಪಿ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯಗಳನ್ನು ಆಧರಿಸಿ ಘೋಷಣೆ ಮಾಡುವಂತೆ ಒತ್ತಾಯಿಸಿದರು.
ಈ ಎಲ್ಲ ಸಮಸ್ಯೆಗಳನ್ನು ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಏ.೨೮ ರಂದು ೧೧ ಗಂಟೆಗೆ ನಗರದ ಪ್ರವಾಸಿಮಂದಿರದಲ್ಲಿ ರೈತ ಬೆಳೆಗಾರರು ಮತ್ತು ರಾಜಕೀಯ ಪಕ್ಷಗಳ ಸಭೆ ಕರೆಯಲಾಗಿದೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೆರೆಮಕ್ಕಿ ಮಹೇಶ, ಮುಖಂಡರಾದ ಪೂರ್ಣೇಶ್, ರವಿಕುಮಾರ್, ಶಾಂತಕುಮಾರ್, ಧರ್ಮೇಶ್, ಈಶ್ವರ್ ಮತ್ತಿರರು ಉಪಸ್ಥಿತರಿದ್ದರು.
Discussion on forest issues at the tourist attraction on April 28th
Leave a comment