ಚಿಕ್ಕಮಗಳೂರು: ಮರ್ಲೆಹೊಸಕೋಟೆಯಲ್ಲಿ ಕಂದಾಯ ಜಾಗದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲು ಮುಂದಾಗಿದ್ದಾಗ ಧ್ವಜಗಳನ್ನು ತೆರವುಗೊಳಿಸಿದ ಗ್ರಾಮಲೆಕ್ಕಿಗರು ಮತ್ತು ರಾಜಸ್ವನಿರೀಕ್ಷರನ್ನು ಅಮಾನತುಪಡಿಸಬೇಕು. ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಸವರ್ಣೀಯರ ಮೇಲೆ ದೌರ್ಜನ್ಯಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ದಲಿತ ಸಂಘರ್ಷ ಸಮಿತಿ ಮುಖಂಡ ಮರ್ಲೆ ಅಣ್ಣಯ್ಯ ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಬುಧವಾರ ಮಾತನಾಡಿ, ಏ ೧೪ರಂದು ಬೆಳಿಗ್ಗೆ ಪರಿಶಿಷ್ಟರು ಅಂಬೇಡ್ಕರ್ ಜಯಂತಿ ಆಚರಿಸಲು ಕಂದಾಯ ಇಲಾಖೆಗೆ ಸೇರಿದ ಖಾಲಿಜಾಗದಲ್ಲಿ ಮುಂದಾದಾಗ ಸವರ್ಣೀಯರು ಮಹಿಳೆಯರನ್ನು ಮುಂದೆ ಬಿಟ್ಟು ಜಯಂತಿ ಆಚರಿಸಲು ಅಡ್ಡಿಪಡಿಸಿದ್ದಾರೆಂದು ದೂರಿದರು.
ಕೆಲವು ಸವರ್ಣಿಯರು ಅಂಬೇಡ್ಕರ್ ಭಾವಚಿತ್ರಕ್ಕೆ ಬೆಂಕಿ ಹಚ್ಚಲು ಪ್ರಚೋದಿಸಿದ್ದಾರೆ. ಪರಿಶಿಷ್ಟರಿಗೆ ಬಹಿಷ್ಕಾರ ಹಾಕಬೇಕು. ಊರಿನಿಂದ ಹೊರಹಾಕಬೇಕೆಂದು ನಿಂದಿಸಿದ್ದಾರೆ. ಅಂಬೇಡ್ಕರ್ ಭಾವಚಿತ್ರಕ್ಕೆ ಹಾನಿಪಡಿಸಿದ್ದಾರೆ, ನೀಲಿಬಾವುಟವನ್ನು ಕಿತ್ತುಹಾಕಿದ್ದಾರೆ. ದೀಪದ ಕಂಬವನ್ನು ಬಿಸಾಕಿದ್ದಾರೆಂದು ಆರೋಪಿಸಿದರು.
ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿಗಳು ತಹಸೀಲ್ದಾರ್ ಅವರನ್ನು ಸ್ಥಳಕ್ಕೆ ಕಳುಹಿಸಿ ಜಯಂತಿ ಆಚರಿಸಲು ಅವಕಾಶ ನೀಡಲು ಸೂಚಿಸಿದ್ದಾರೆ. ಅಧಿಕಾರಿ ಸ್ಥಳಕ್ಕೆ ಬಂದಾಗ, ಪೊಲೀಸರು ಇದ್ದರು ಜಯಂತಿ ಆಚರಿಸಲು ಸರ್ವರ್ಣಿಯ ಕೆಲವರು ಅಡ್ಡಿಪಡಿಸಿದ್ದಾರೆ. ಬಳಿಕ ಪೊಲೀಸರು ಜನರನ್ನು ಚದುರಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಹಾರಹಾಕಿ ದೀಪಬೆಳಗಿಸಿದ್ದಾರೆಂದು ತಿಳಿಸಿದರು.
ಗ್ರಾಮದ ವಿದ್ಯಾವಂತ ಯುವಕರನ್ನು ಠಾಣೆಗೆ ಬರುವಂತೆ ದೂರವಾಣಿಯಲ್ಲಿ ಒತ್ತಾಯಿಸುತ್ತಿದ್ದು, ಠಾಣೆ ಮೆಟ್ಟಿಲು ತುಳಿದರೆ ಮುಂದಿನ ವಿದ್ಯಾಭ್ಯಾಸಕ್ಕೆ ಎಲ್ಲಿ ತೊಂದರೆಯಾಗುತ್ತದೆ ಎಂದು ಹೆದರುತ್ತಿದ್ದಾರೆ. ಗ್ರಾಮದಲ್ಲಿ ಶಾಂತಿ ನೆಲಸಲು ಪೊಲೀಸ್ ರಕ್ಷಣೆ ನೀಡಬೇಕೆಂದು ಕೋರಿದರು.
ಮುಖಂಡರಾದ ಟಿ.ಎಲ್.ಗಣೇಶ್, ಭೀಮಯ್ಯ, ರೇವಣ್ಣ,ಗ್ರಾಮಸ್ಥರಾದ ಸಿದ್ದಯ್ಯ,. ಆನಂದ್, ಕುಮಾರ್ ಇದ್ದರು.
Dalit Sangharsh Samiti demands action to disrupt Ambedkar Jayanti
Leave a comment