ಚಿಕ್ಕಮಗಳುರು: ರಾಜ್ಯ ಸರ್ಕಾರ ತಮ್ಮ ಶಾಸಕನ ಸೋಲಿನ ಭಯದಲ್ಲಿ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಸ್ಥಗಿತ ಗೊಳಿಸಿರುವ ಅನುಮಾನವಿದೆ. ಇದೇ ಕಾರಣದಿಂದಲೇ 1,822 ಮತಗಳ ಎಣಿಕೆಗೆ 12 ತಾಸು ಆದರೂ ಮುಗಿದಿಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಐಡಿಎಸ್ ಜಿ ಕಾಲೇಜು ಎದುರು ಪ್ರತಿಭಟಿಸಿದರು.
ನೂರಾರು ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಮತ ಎಣಿಕೆ ಪೂರ್ಣಗೊಳಿಸಲು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ಬೆಳಗ್ಗೆ ಏಳು ಗಂಟೆಗೆ ಆರಂಭಗೊಂಡ ಕೇವಲ 1822 ಮತಗಳ ಎಣಿಕೆ ರಾತ್ರಿ 8 ಗಂಟೆಯಾದರೂ ಮುಗಿದಿಲ್ಲ.
ದೇಶದ ಇತಿಹಾಸದಲ್ಲಿ ಈ ರೀತಿ ಆಗಿರಲಿಲ್ಲ. ಕಳೆದ ವಿಧಾನ ಪರಿಷತ್ ಚುನಾವಣೆ ಮರು ಮತ ಎಣಿಕೆ ಇದೆ ಕೇಂದ್ರದಲ್ಲಿ ನಡೆದಿತ್ತು. ಆಗ 3000ಕ್ಕೂ ಹೆಚ್ಚು ಮತಗಳನ್ನು ಮಧ್ಯಾಹ್ನ ಮೂರು ಗಂಟೆ ಒಳಗೆ ಎಣಿಕೆ ಮಾಡಲಾಗಿತ್ತು.
ಚುನಾವಣಾ ಅಧಿಕಾರಿಗಳು ಯಾವುದೋ ಒತ್ತಡಕ್ಕೆ ಮಣಿದಿರುವ ಅನುಮಾನವಿದೆ. ಒತ್ತಡಕ್ಕೆ ಮಣಿಯದೆ ಅಧಿಕಾರಿಗಳು ಕೋರ್ಟ್ ಆದೇಶ ಪಾಲಿಸಬೇಕು. ಮರುಮತ ಎಣಿಕೆ ಫಲಿತಾಂಶ ಹೊರಬರುವವರೆಗೂ ನಾವು ಪ್ರತಿಭಟನೆ ನಡೆಸುತ್ತಲೇ ಇರುತ್ತೇವೆ ಎಂದು ಪಟ್ಟು ಹಿಡಿದರು.
ಕೆಲಕಾಲ ಸುಮ್ಮನಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮತ್ತೆ ವಾಗ್ವಾದ ಶುರುವಾಯಿತು. ಬಲ ಭಾಗದಿಂದ ಬಿಜೆಪಿ ಕಾರ್ಯಕರ್ತರು ನುಗ್ಗಲು ಯತ್ನಿಸಿದರೆ, ಎಡ ಭಾಗದಿಂದ ಕಾಂಗ್ರೆಸ್ ಕಾರ್ಯಕರ್ತರು ನುಗ್ಗಿದರು.
ಸಮಯಕ್ಕೆ ಸರಿಯಾಗಿ ಪೊಲೀಸರು ನಡುವಿನ ಗೋಡೆಯಂತೆ ನಿಂತು ನಡೆದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ, ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಆರೋಪ ಪ್ರತ್ಯಾರೋಪಮಾಡಿದರು.
BJP protests against delay in vote counting
Leave a comment