ಚಿಕ್ಕಮಗಳೂರು: ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದ್ದು, ಬರಪೀಡಿತ ತಾಲೂಕುಗಳ ಘೋಷಣೆಯನ್ನು ಹಂತ-ಹಂತವಾಗಿ ಕೈಗೊಳ್ಳುತ್ತಿರುವ ಸರ್ಕಾರವು ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ಅರ್ಹವಾಗಿರುವ ಎಲ್ಲಾ ತಾಲೂಕುಗಳನ್ನೂ ಬರಪೀಡಿತ ಪಟ್ಟಿಗೆ ಸೇರಿಸಬೇಕು ಎಂದು ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶದ ಚಿಕ್ಕಮಗಳೂರು ಜಿಲ್ಲಾ ಘಟಕ ಆಗ್ರಹಿಸಿದೆ.
ಚಿಕ್ಕಮಗಳೂರು ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಸಂಚಾಲಕ ಸಾಗರ್ ಶ್ರೀನಿವಾಸ ಗೌಡ, ರಾಜ್ಯದಲ್ಲಿ ಶೇ.೩೦ರಷ್ಟು ಮಳೆ ಕೊರತೆಯಾಗಿದ್ದು, ೧೯೭೬ರ ಬಳಿಕದ ಅತ್ಯಂತ ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಮಳೆ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳು ತೀವ್ರವಾಗಿ ಹಿನ್ನಡೆ ಕಂಡಿದ್ದು, ಅಂತರ್ಜಲ ಮಟ್ಟ ಕುಸಿತ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ರೈತರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಬರಪೀಡಿತ ತಾಲೂಕುಗಳ ಘೋಷಣೆಯನ್ನು ವಿಳಂಬ ಮಾಡದೆ, ಅರ್ಹ ತಾಲೂಕುಗಳನ್ನು ತಕ್ಷಣವೇ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರದ ಮೊದಲ ಹಂತದ ಅಧಿಕೃತ ಪ್ರಕಟಣೆಯಲ್ಲಿ ಒಟ್ಟು ೧೦೧ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಈ ಪೈಕಿ ೮೯ ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ ೧೨ ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ವರ್ಗೀಕರಿಸಲಾಗಿದೆ ಎಂದು ಅವರು ತಿಳಿಸಿದರು.
ಇದೀಗ ಉಪಗ್ರಹ ಆಧಾರಿತ ಚಿತ್ರಗಳು ಹಾಗೂ ತಳಮಟ್ಟದ ವಾಸ್ತವ ಪರಿಶೀಲನೆ (ಉಡಿouಟಿಜ-ಣಡಿuಣhiಟಿg) ಆಧರಿಸಿ ಹೆಚ್ಚುವರಿಯಾಗಿ ೨೫ ತಾಲೂಕುಗಳನ್ನು ಎರಡನೇ ಹಂತದಲ್ಲಿ ಬರಪೀಡಿತ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ?೨೦೨೦ರ ಮಾನದಂಡಗಳಿಗೆ ಅನುಗುಣವಾಗಿ ವೈಜ್ಞಾನಿಕ ವರದಿಗಳನ್ನು ಆಧರಿಸಿ ಬರ ಘೋಷಣೆ ಮಾಡಲಾಗುತ್ತಿದೆ ಎಂದರು.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ನರಸಿಂಹರಾಜಪುರ (ಎನ್.ಆರ್.ಪುರ) ಹಾಗೂ ತರೀಕೆರೆ ತಾಲೂಕುಗಳನ್ನು ಈಗಾಗಲೇ ಮೊದಲ ಹಂತದಲ್ಲಿ ಬರಪೀಡಿತ ಎಂದು ಘೋಷಿಸಲಾಗಿದೆ. ಜಿಲ್ಲೆಯ ಬರ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿ, ಇನ್ನೂ ಅರ್ಹವಾಗಿರುವ ತಾಲೂಕುಗಳನ್ನೂ ಬರಪೀಡಿತ ಪಟ್ಟಿಗೆ ಸೇರಿಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು.
ರೈತ ಉಳಿದರೆ ದೇಶ ಉಳಿಯುತ್ತದೆ. ರೈತ ಶಕ್ತಿ-ದೇಶ ಶಕ್ತಿ ಎಂಬ ಧ್ಯೇಯದೊಂದಿಗೆ ರೈತರ ಹಿತಕ್ಕಾಗಿ ಸಂಘ ನಿರಂತರವಾಗಿ ಹೋರಾಟ ನಡೆಸಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರತಿನಿಧಿ ಸುರೇಶ್, ಯುವ ಪ್ರಮುಖ್ ಧನುಷ್, ತಾಲೂಕು ಸಮಿತಿ ಸದಸ್ಯ ಚಂದನ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kisan Sangh demands inclusion of remaining taluks in the list of drought-hit taluks.
Leave a comment