ಬೀರೂರು: ಬೇರೊಬ್ಬ ವ್ಯಕ್ತಿಯಂತೆ ನಟಿಸಿ ಫೈನಾನ್ಸ್ನಲ್ಲಿ ಗಿರವಿ ಇಟ್ಟಿರುವ ಚಿನ್ನ ಬಿಡಿಸಿಕೊಡುವುದಾಗಿ ನಂಬಿಸಿ ನವರತ್ನ ಗೋಲ್ಡ್ ಕಂಪನಿಗೆ ₹9.91 ಲಕ್ಷ ವಂಚಿಸಿರುವ ಪ್ರಕರಣ ಬೀರೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಶಿವಮೊಗ್ಗದ ನವರತ್ನ ಗೋಲ್ಡ್ ಕಂಪನಿ ಮಾಲೀಕರಿಗೆ ಬೀರೂರಿನಿಂದ ರಾಘವೇಂದ್ರ ಎಂಬಾತ ಕರೆ ಮಾಡಿ, 101 ಗ್ರಾಂ ಚಿನ್ನವನ್ನು IIFL ಫೈನಾನ್ಸ್ನಲ್ಲಿ ₹9.91 ಲಕ್ಷಕ್ಕೆ ಗಿರವಿ ಇಟ್ಟಿದ್ದು, ಹಣ ಪಾವತಿಸಲು ಸಾಧ್ಯವಾಗುತ್ತಿಲ್ಲ. ಚಿನ್ನ ಬಿಡಿಸಿಕೊಂಡು, ಉಳಿದ ಹಣವನ್ನು ತನಗೆ ನೀಡುವಂತೆ ಮನವಿ ಮಾಡಿದ್ದ ಎನ್ನಲಾಗಿದೆ.
ಆತನ ಮಾತನ್ನು ನಂಬಿದ ಕಂಪನಿ ಮಾಲೀಕರು ತಮ್ಮ ಸಿಬ್ಬಂದಿ ಟಿ.ಆರ್. ರಂಗನಾಥ ಮತ್ತು ಲೋಹಿತ್ ಅವರನ್ನು ಬೀರೂರಿಗೆ ಕಳುಹಿಸಿದ್ದಾರೆ. ಅಲ್ಲಿ ರಾಘವೇಂದ್ರ, ತಾನು ಕಾರ್ತಿಕ್ ಎಂದು ಪರಿಚಯಿಸಿಕೊಂಡು, ತನ್ನ ಹೆಸರಿನಲ್ಲೇ ಚಿನ್ನ ಗಿರವಿ ಇದೆ ಎಂದು ನಂಬಿಸಿದ್ದಾನೆ.
ನಂತರ ಕಾರ್ತಿಕ್ ನೀಡಿದ ಕೆನರಾ ಬ್ಯಾಂಕ್ ಖಾತೆಗೆ ಸಿಬ್ಬಂದಿ ₹9.91 ಲಕ್ಷ ಹಣವನ್ನು ಚಲನ್ ಮೂಲಕ ಜಮೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಕಾರ್ತಿಕ್ ಸಿಬ್ಬಂದಿಯನ್ನು ಟೀ ಕುಡಿಯಲು ಕರೆದುಕೊಂಡು ಬ್ಯಾಂಕ್ನಿಂದ ಹೊರಗೆ ತೆರಳಿ, ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ₹5 ಲಕ್ಷವನ್ನು ಮತ್ತೊಂದು ಖಾತೆಗೆ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಉಳಿದ ₹4.91 ಲಕ್ಷವನ್ನು ಬ್ಯಾಂಕ್ ಅಧಿಕಾರಿಗಳ ನೆರವಿನಿಂದ ತಡೆಹಿಡಿಯಲಾಗಿದೆ.
ನಂತರ IIFL ಫೈನಾನ್ಸ್ನಲ್ಲಿ ವಿಚಾರಿಸಿದಾಗ ಕಾರ್ತಿಕ್ ಹೆಸರಿನಲ್ಲಿ ಯಾವುದೇ ಚಿನ್ನ ಗಿರವಿ ಇರಲಿಲ್ಲ. ಬದಲಿಗೆ ಅನುಷಾ ಎಂಬವರ ಹೆಸರಿನಲ್ಲಿ ಚಿನ್ನ ಗಿರವಿ ಇಟ್ಟಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ರಾಘವೇಂದ್ರ ಮತ್ತು ಕಾರ್ತಿಕ್ ಸೇರಿಕೊಂಡು ವಂಚನೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಕಂಪನಿ ಮಾಲೀಕರು ನೀಡಿದ ದೂರಿನ ಆಧಾರದ ಮೇಲೆ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 118/2026 ದಾಖಲಾಗಿದೆ. BNS ಕಲಂ 318(2), 318(4), 319(2), 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Finance company in Birur cheated of ₹9.91 lakh
Leave a comment