ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಸುಮಾರು ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಸಂಬಂಧಿಕರ ಮೇಲೆ ಅನುಮಾನ ವ್ಯಕ್ತಪಡಿಸಿ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆಯ ಓಟಿ ರಸ್ತೆಯ ಆಜಾದ್ ನಗರ ನಿವಾಸಿ ಹಾಗೂ ಆಟೋ ಚಾಲಕರಾದ ತನ್ವೀರ್ ಅಹಮದ್ ಅವರು ನೀಡಿದ ದೂರಿನ ಪ್ರಕಾರ, ಕಳೆದ ಮಾರ್ಚ್ 24ರಂದು ಮಾಗುಂಡಿ ಗ್ರಾಮದಲ್ಲಿ ನಡೆದ ಸಂಬಂಧಿಕರಾದ ರಫಾ ಅವರ ಮದುವೆ ಕಾರ್ಯಕ್ರಮಕ್ಕೆ ಕುಟುಂಬ ಸಮೇತರಾಗಿ ತೆರಳಿದ್ದರು. ಮದುವೆ ಹಾಗೂ ಊಟದ ಕಾರ್ಯಕ್ರಮ ಮುಗಿದ ಬಳಿಕ ಮಧ್ಯರಾತ್ರಿ ಮದರಂಗಿ ಶಾಸ್ತ್ರ ನಡೆಯುತ್ತಿದ್ದ ವೇಳೆ, ತಾವು ತಂದಿದ್ದ ಬ್ಯಾಗ್ ಅನ್ನು ಸಂಬಂಧಿಕರಾದ ಮನ್ಸೂರ್ ಅಹಮದ್ ಅವರ ಮನೆಯ ಕೊಠಡಿಯಲ್ಲಿ ಇರಿಸಲಾಗಿತ್ತು.
ಬಳಿಕ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿದ್ದ ಸುಮಾರು 25 ಗ್ರಾಂ ತೂಕದ ತಾಳಿ ಸರ ಹಾಗೂ ಏಳು ಚಿನ್ನದ ಉಂಗುರಗಳು ಕಾಣೆಯಾಗಿದ್ದವು. ಕಳುವಾದ ಚಿನ್ನಾಭರಣಗಳ ಒಟ್ಟು ಮೌಲ್ಯ ಸುಮಾರು ₹3.75 ಲಕ್ಷ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ತಮ್ಮ ಸಂಬಂಧಿಕರಾದ ಮುಜಾಯಿದ್ ಪಾಷಾ ಹಾಗೂ ಅವರ ಪತ್ನಿ ಶಮ್ಮಿ (ಅಕ್ತರ್ ಉನ್ನೀಸಾ) ಅವರ ಮೇಲೆ ಅನುಮಾನವಿದ್ದು, ಅವರು ಸಂಬಂಧಿಕರಾಗಿದ್ದ ಕಾರಣ ಚಿನ್ನಾಭರಣಗಳನ್ನು ಹಿಂತಿರುಗಿಸುವ ನಿರೀಕ್ಷೆಯಲ್ಲಿ ಇದುವರೆಗೆ ದೂರು ನೀಡಿರಲಿಲ್ಲ ಎಂದು ತನ್ವೀರ್ ಅಹಮದ್ ತಿಳಿಸಿದ್ದಾರೆ.
ಆದರೆ, ಹಲವು ತಿಂಗಳು ಕಳೆದರೂ ಚಿನ್ನಾಭರಣಗಳನ್ನು ಹಿಂತಿರುಗಿಸದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ ಆಗಸ್ಟ್ 4ರಂದು ಬಾಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ದೂರಿನ ಆಧಾರದ ಮೇಲೆ ಬಾಳೆಹೊನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳುವಾದ ಚಿನ್ನಾಭರಣಗಳ ಪತ್ತೆ ಹಾಗೂ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತನಿಖೆ ಆರಂಭಿಸಿದ್ದಾರೆ.
Gold ornaments worth ₹3.75 lakh stolen from wedding house
Leave a comment