Home namma chikmagalur chikamagalur ಮತದಾರರ ಪಟ್ಟಿ ಶುದ್ಧೀಕರಣಕ್ಕೆ ಆದ್ಯತೆ ನೀಡಿ
chikamagalurHomeLatest Newsnamma chikmagalur

ಮತದಾರರ ಪಟ್ಟಿ ಶುದ್ಧೀಕರಣಕ್ಕೆ ಆದ್ಯತೆ ನೀಡಿ

Share
Share

ಚಿಕ್ಕಮಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಸುಸೂತ್ರ ಹಾಗೂ ಪಾರದರ್ಶಕವಾಗಿ ನಡೆಯಬೇಕಾದರೆ ದೋಷಮುಕ್ತ ಮತದಾರರ ಪಟ್ಟಿ ಅತ್ಯಗತ್ಯ. ಹೀಗಾಗಿ, ನಿಯಮಾನುಸಾರ ಹಮ್ಮಿಕೊಳ್ಳಲಾಗುವ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಚ್ಚಿನ ಗಮನಹರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ತಿಳಿಸಿದರು.

ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಸೋಮವಾರ ಎಸ್‌ಐಆರ್ ಕುರಿತು ಅನುಷ್ಠಾನಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ವೇಳಾಪಟ್ಟಿಯಂತೆ ಎಲ್ಲಾ ಕಾರ್ಯವು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಮತ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಇದಲ್ಲದೆ, ವಿಧಾನಸಭಾ ಮತ ಕ್ಷೇತ್ರವಾರು ಮತಗಟ್ಟೆ ಮಟ್ಟದ ಏಜೆಂಟ(ಬಿಎಲ್‌ಎ)ರನ್ನು ನೇಮಕ ಮಾಡುವ ಕುರಿತು ನೋಂದಾಯಿತ ರಾಜಕೀಯ ಪಕ್ಷದವರಿಗೂ ತಿಳಿಸಲಾಗಿದೆ. ಎಸ್‌ಐಆರ್ ಕುರಿತು ಸಾರ್ವಜನಿಕರಲ್ಲಿ ಯಾವುದೇ ರೀತಿ ಗೊಂದಲಗಳಿದ್ದಲ್ಲಿ ಆಯಾ ಮತ ಕ್ಷೇತ್ರದ ನೋಂದಣಾಧಿಕಾರಿಗಳು ಮಾಹಿತಿ ನೀಡಿ, ಗೊಂದಲ ಪರಿಹರಿಸುವಂತೆ ತಿಳಿಸಿದರು.

ಮಾಸ್ಟರ್ ಟ್ರೈನರ್ ಕಾಂತರಾಜು ಮಾತನಾಡಿ, ಎಸ್‌ಐಆರ್ ಎಂಬುದು ಹೊಸದೇನಲ್ಲ. ದೇಶದಲ್ಲಿ ಈಗಾಗಲೇ ಹತ್ತು ಬಾರಿ ಎಸ್‌ಐಆರ್ ಪ್ರಕ್ರಿಯೆ ಯಶಸ್ವಿಯಾಗಿ ನಡೆದುಹೋಗಿದೆ. ಪ್ರತಿ ಸಾರ್ವತ್ರಿಕ ಚುನಾವಣೆಗೂ ಮುನ್ನ, ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂದರ್ಭದಲ್ಲಿ ಹಾಗೂ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ನಿಯಮಿತವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಗಳು ನಡೆಯುತ್ತಿರುತ್ತವೆ. ಅರ್ಹ ಮತದಾರರ ವಿವರಗಳನ್ನು ಪರಿಶೀಲಿಸಲು ೨೦೦೨ ರ ಮತದಾರರ ಪಟ್ಟಿಯನ್ನು ಮೂಲ ಪಟ್ಟಿ ಎಂದು ಪರಿಗಣಿಸಲಾಗಿದೆ ಎಂದು ಹೇಳಿದರು.

ನಾವು ಈ ಹಿಂದೆ ಹಲವು ಚುನಾವಣೆಗಳನ್ನು ನಡೆಸಿದ್ದೇವೆ, ಕೆಲಸವನ್ನೂ ಮಾಡಿದ್ದೇವೆ. ಆದರೆ, ಪ್ರತಿ ಬಾರಿಯೂ ಮತದಾರರ ಪಟ್ಟಿಯ ಮೇಲೆಯೇ ಪ್ರಮುಖವಾಗಿ ಆಕ್ಷೇಪಣೆಗಳು ಕೇಳಿಬರುತ್ತವೆ. ಮೃತರ ಹೆಸರುಗಳು ಪಟ್ಟಿಯಲ್ಲೇ ಇರುವುದು, ಒಂದಕ್ಕಿಂತ ಹೆಚ್ಚು ಕಡೆ ಹೆಸರು ಇರುವುದು ಹಾಗೂ ಅರ್ಹರ ಹೆಸರುಗಳು ಕೈಬಿಟ್ಟು ಹೋಗಿರುವುದು ಇಂತಹ ದೂರುಗಳಿಗೆ ಕಾರಣವಾಗುತ್ತದೆ. ಮತದಾರರ ಪಟ್ಟಿ ಎಷ್ಟು ಶುದ್ಧವಾಗಿರುತ್ತದೆಯೋ, ಚುನಾವಣೆ ಅಷ್ಟು ಸುಲಭವಾಗಿ ಮತ್ತು ಪಾರದರ್ಶಕವಾಗಿ ನಡೆಯುತ್ತದೆ ಎಂದರು.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳ ಪಾಲ್ಗೊಳ್ಳುವಿಕೆ ಹಾಗೂ ಸಹಭಾಗಿತ್ವ ಬಹಳ ಮುಖ್ಯವಾಗಿದೆ. ಅದಕ್ಕಾಗಿಯೇ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಬೂತ್ ಮಟ್ಟದ ಏಜೆಂಟರನ್ನು ನೇಮಿಸಲು ಅವಕಾಶ ನೀಡಲಾಗಿದ್ದು, ಅವರು ಕೂಡ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ ಎಂದರು. ಅರ್ಹ ಮತದಾರರನ್ನು ಗುರುತಿಸಲು ಮತ್ತು ಚುನಾವಣಾ ಪ್ರಕ್ರಿಯೆಯನ್ನು ಸುಗಮಗೊಳಿಸಲು ತರಬೇತಿ ಕಾರ್ಯಕ್ರಮಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ನಮ್ಮ ಬಳಿ ಇರುವ ೨೦೦೨ರ ಎಸ್‌ಐಆರ್ ಮತದಾರರ ಪಟ್ಟಿಯನ್ನು ನಾವು ಅರ್ಹತೆಯನ್ನು ಸಾಬೀತುಪಡಿಸುವ ಪ್ರೊಬೇಟಿವ್ ದಾಖಲೆಯಾಗಿ ಪರಿಗಣಿಸುವುದಾಗಿ ಅವರು ತಿಳಿಸಿದರು.

ಜಿಲ್ಲಾ ಚುನಾವಣಾಧಿಕಾರಿಗಳ ಸೂಚನೆಯಂತೆ, ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ವಿತರಿಸುವ ಇನ್ಯೂಮರೇಷನ್ ಫಾರಂಗಳನ್ನು ಭರ್ತಿ ಮಾಡಿ ಯಾರು ಮರಳಿ ನೀಡುತ್ತಾರೋ, ಅಂತಹವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಮುಂದುವರಿಯಲಿವೆ. ಮತದಾರರು ಇನ್ಯೂಮರೇಷನ್ ಫಾರಂ ಅನ್ನು ವಾಪಸ್ ನೀಡುವಾಗ ಯಾವುದೇ ಹೆಚ್ಚುವರಿ ದಾಖಲೆಗಳನ್ನು ಕೊಡುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಈ ಮತದಾರರು ಈಗಾಗಲೇ ೨೦೦೨ರ ಎಸ್‌ಐಆರ್ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗಿರುತ್ತಾರೆ. ಬಿಎಲ್‌ಒಗಳು ನೀಡುವ ಫಾರಂಗಳು ಈಗಾಗಲೇ ಭಾಗಶಃ ಭರ್ತಿಯಾಗಿರುತ್ತವೆ. ಮತದಾರರು ಅದರಲ್ಲಿರುವ ವಿವರಗಳನ್ನು ಪರಿಶೀಲಿಸಿ, ತಪ್ಪುಗಳಿದ್ದರೆ ಸರಿಪಡಿಸಿ, ಸಹಿ ಮಾಡಿ ಬಿಎಲ್‌ಒಗೆ ನೀಡಬೇಕು ಎಂದರು.

ಬೀಗ ಹಾಕಿದ ಮನೆಗಳು ಅಥವಾ ಮೊದಲ ಭೇಟಿಯಲ್ಲಿ ಸಿಗದ ಮತದಾರರನ್ನು ತಲುಪಲು ಬಿಎಲ್‌ಒಗಳು ಕನಿಷ್ಠ ಮೂರು ಬಾರಿ ಭೇಟಿ ನೀಡಬೇಕು. ತಾವು ಭೇಟಿ ನೀಡಿದ ಕುರಿತು ಸೂಕ್ತ ದಾಖಲೆ, ಸಾಕ್ಷ್ಯವನ್ನು ಬಿಎಲ್‌ಒಗಳು ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಕರಡು ಪಟ್ಟಿ ಪ್ರಕಟವಾದ ನಂತರ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆಗಳು ಬಾರದಂತೆ ತಡೆಯಲು ಈ ಕ್ರಮ ಅಗತ್ಯವಾಗಿದೆ. ಕರಡು ಪಟ್ಟಿಯಲ್ಲಿರುವ ಯಾವುದೇ ಮತದಾರರ ಹೆಸರನ್ನು ಅಂತಿಮ ಪಟ್ಟಿಯಿಂದ ಯಾವುದೇ ಕಾರಣಕ್ಕೂ ನೇರವಾಗಿ ಕೈಬಿಡುವಂತಿಲ್ಲ.

ಅನ್-ಮ್ಯಾಪ್ಡ್ ಆಗಿರುವ ಅಥವಾ ವಿವರಗಳಲ್ಲಿ ವ್ಯತ್ಯಾಸವಿರುವ ಮತದಾರರಿಗೆ ಕಡ್ಡಾಯವಾಗಿ ನೋಟಿಸ್ ನೀಡಿ, ವಿಚಾರಣೆ ನಡೆಸಬೇಕು. ತದನಂತರ ಹೆಸರು ಉಳಿಸಬೇಕೇ ಅಥವಾ ಬೇಡವೇ ಎಂಬುದನ್ನು ಚುನಾವಣಾ ನೊಂದಣಾಧಿಕಾರಿಗಳು ನಿರ್ಧರಿಸಲಿದ್ದಾರೆ. ಒಂದು ವೇಳೆ ಅರ್ಹ ಮತದಾರರಾಗಿದ್ದೂ, ಇನ್ಯೂಮರೇಷನ್ ಫಾರಂ ಮರಳಿ ನೀಡದಿದ್ದರೆ ಅಂತಹವರ ಹೆಸರು ಕರಡು ಪಟ್ಟಿ ಮತ್ತು ಅಂತಿಮ ಪಟ್ಟಿಯಿಂದ ಕೈತಪ್ಪಿ ಹೋಗುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ’ಫಾರಂ-೬’ ರ ಮೂಲಕ, ಆಯೋಗದ ಡಿಕ್ಲರೇಷನ್ ಹಾಗೂ ನಿಗದಿತ ೧೨ ದಾಖಲೆಗಳ ಪೈಕಿ ಸೂಕ್ತ ಪುರಾವೆ ನೀಡಿ ಮತ್ತೆ ಹೆಸರು ಸೇರಿಸಲು ಅವಕಾಶವಿರುತ್ತದೆ ಎಂದರು.

ತರಬೇತಿ ಕಾರ್ಯಾಗಾರದಲ್ಲಿ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ, ಉಪವಿಭಾಗಾಧಿಕಾರಿ ನಟೇಶ್, ಡಿವೈಎಸ್‌ಪಿ ನಾಗರಾಜ್, ಎಲ್ಲ ತಾಲ್ಲೂಕುಗಳ ತಹಸೀಲ್ದಾರರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Prioritize voter list cleansing

Share

Leave a comment

Leave a Reply

Your email address will not be published. Required fields are marked *

Don't Miss

ತರೀಕೆರೆ-ಕಡೂರು-ಚಿಕ್ಕಮಗಳೂರು: ಅದಲು-ಬದಲು ಕಾಂಗ್ರೆಸ್, ಬಿಜೆಪಿ ಕಿತ್ತಾಟ !

ಚಿಕ್ಕಮಗಳೂರು: ರಸ್ತೆ ಕಾಮಗಾರಿಗಳು, ಭದ್ರ ಉಪಕಣಿವೆ ಯೋಜನೆಗಳಿಗೆ ಕಾಂಗ್ರೆಸ್ ಶಾಸಕರುಗಳಲ್ಲಿ “ಸಿಟ್ಟು” ಮಡಿಗಟ್ಟಿದೆ. ಇದಕ್ಕೆ ಪ್ರತಿಯಾಗಿ ವಿಧಾನ ಪರಿಷತ್ ಸದಸ್ಯಮತ್ತು ಬಿಜೆಪಿ ಮುಖಂಡ ಸಿ.ಟಿ.ರವಿ ಹಾದಿ ರಂಪ,ಬೀದಿ ರಂಪ ಮಾಡಿಕೊಂಡು ದೂರುಪ್ರತಿದೂರು...

ಸ್ಥಳೀಯ ಶಾಸಕರ ಪ್ರಚೋದನಾಕಾರಿ ಹೇಳಿಕೆಯಿಂದ ಶಾಸಕ ಸಿ.ಟಿ ರವಿ ಹಲ್ಲೆಗೆ ಯತ್ನ

ಚಿಕ್ಕಮಗಳೂರು: ರಾಂಪುರ ರಸ್ತೆ ಕಾಮಗಾರಿ ವೀಕ್ಷಣೆ ಸಂದರ್ಭದಲ್ಲಿ ಸ್ಥಳೀಯ ಶಾಸಕರ ಪ್ರಚೋದನಾಕಾರಿ ಹೇಳಿಕೆ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ಮುಖಂಡರು ಹಾಗೂ ವಿಧಾನಪರಿಷತ್ ಶಾಸಕ ಸಿ.ಟಿ ರವಿ ರವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು...

Related Articles

ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಜನಪ್ರತಿನಿಧಿಗಳಿಂದ ಸ್ವಾಗತ

ಚಿಕ್ಕಮಗಳೂರು:  ಬೇಸಿಗೆ ರಜೆ ಮುಗಿದು ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದ್ದು, ಅತ್ಯಂತ ಹುರುಪಿನಿಂದ ಶಾಲೆಗಳಿಗೆ ಆಗಮಿಸಿದ ಮಕ್ಕಳಿಗೆ...

 ಮಕ್ಕಳ ಶಾಲಾ ಹಾಜರಾತಿ ಬಗ್ಗೆ ಪೋಷಕರು ನಿಗಾ ವಹಿಸಬೇಕು

ಚಿಕ್ಕಮಗಳೂರು: ಮಕ್ಕಳು ಪ್ರತಿದಿನ ತಪ್ಪದೆ ಶಾಲೆಗೆ ಹಾಜರಾಗಬೇಕು. ಶಿಕ್ಷಣದಲ್ಲಿ ನಿರಂತರತೆ ಅತ್ಯಂತ ಮುಖ್ಯವಾಗಿದ್ದು, ಪೋಷಕರು ಈ...

ನಿವೇಶನಕ್ಕಾಗಿ ಒತ್ತಾಯಿಸಿ 4ನೇ ದಿನಕ್ಕೆ ಮುಂದುವರೆದ ಧರಣಿ

ಮೂಡಿಗೆರೆ: ತಾಲೂಕಿನ ಮಣ್ಣಿಕೆರೆ ಗ್ರಾಮದಲ್ಲಿ ಟಿಯುಸಿಐ ಮತ್ತು ವಸತಿಗಾಗಿ ಹೋರಾಟ ವೇದಿಕೆ ವತಿಯಿಂದ ನಿವೇಶನ ರಹಿತರು...

ಮೂಡಿಗೆರೆ ಪ.ಪಂ. ಎದುರು ಕಸ ಹಾಕಿ ಪ್ರತಿಭಟನೆ

ಮೂಡಿಗೆರೆ: ಪ.ಪಂ. ಅಧಿಕಾರಿಗಳು ಪಟ್ಟಣದ ಘನತ್ಯಾಜ್ಯ ಸಂಗ್ರಹ, ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲಾಗಿದ್ದಾರೆಂದು ಪಟ್ಟಣದ ನಿವಾಸಿಗಳು...