ಮೂಡಿಗೆರೆ: ‘ಪ್ರೆಸ್’ ಎಂದು ಬರೆಸಿದ್ದ ಬೈಕ್ನಲ್ಲಿ ಶ್ರೀಗಂಧ ಸಾಗಿಸುತ್ತಿದ್ದ ಆರೋಪದಲ್ಲಿ ಹಾಸನದಿಂದ ಪ್ರಕಟವಾಗುವ ಸ್ಥಳೀಯ ಪತ್ರಿಕೆಯ ವರದಿಗಾರ ಸೇರಿ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ತಾಲ್ಲೂಕಿನ ಹಂಡಗುಳಿ ಮೂಲದ, ಪಟ್ಟಣ ನಿವಾಸಿ ಪತ್ರಕರ್ತ ಎಚ್.ಆರ್. ಮನ್ಸೂರ್ ಹಾಗೂ ಹ್ಯಾಂಡ್ ಪೋಸ್ಟ್ ಬಳಿಯ ನಿವಾಸಿ ಎಂ.ಕೆ. ಯೂಸೂಫ್ ಬಂಧಿತರು.
ಹಂಡುಗುಳಿ ಸಮೀಪದ ನವಗ್ರಾಮದ ಬಳಿ ಬುಧವಾರ ರಾತ್ರಿ ಬೈಕ್ನಲ್ಲಿ ಇಬ್ಬರು ಶ್ರೀಗಂಧ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಅರಣ್ಯಾಧಿಕಾರಿಗಳ ತಂಡ, ಬೈಕನ್ನು ಬೆನ್ನಟ್ಟಿ ಹಿಡಿದು ಪರಿಶೀಲಿಸಿದಾಗ, ಶ್ರೀಗಂಧದ 8 ತುಂಡುಗಳು ಪತ್ತೆಯಾಗಿದವು.
ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ಶ್ರೀಗಂಧವನ್ನೂ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ಗುರುವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಜಿ.ಮಂಜುನಾಥ್, ಡಿಆರ್ಎಫ್ಒ ಅಶ್ವತ್ಥ್, ಸಿಬ್ಬಂದಿ ಜೆ.ಜಿ.ಉಮೇಶ್, ಎ.ಎಸ್.ಸುರೇಶ್, ಸುಮಂತ್ ನವರಾಜ್, ಭಾಗವಹಿಸಿದ್ದರು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Leave a comment