ಚಿಕ್ಕಮಗಳೂರು: ನಗರದ ಮಲ್ಲಂದೂರು ರಸ್ತೆಯ ಗೋಲ್ಡನ್ ಬಾರ್ ಮುಂಭಾಗ ತಡರಾತ್ರಿ ಚಾಕು ಇರಿತ ಹಾಗೂ ಅಪಹರಣ ಘಟನೆ ನಡೆದಿದ್ದು, ಪ್ರೀತಿಯ ವಿಚಾರದಲ್ಲಿ ಅಡ್ಡ ಬಂದ ಯುವಕನ ಕೊಲೆಗೆ ಯತ್ನಿಸಲಾಗಿದೆ ಎಂದು ದೂರಲಾಗಿದೆ.
ಶಿರವಾಸೆ ಗ್ರಾಮದ ಕಾಲೇಜು ಯುವತಿಯನ್ನು ಬಾಲು ಎಂಬಾತ ಪ್ರೀತಿ ಮಾಡುವಂತೆ ಹಿಂಬಾಲಿಸಿ ಪೀಡಿಸುತ್ತಿದ್ದ ಹಿನ್ನೆಲೆಯಲ್ಲಿ, ಯುವತಿಯ ಸಂಬಂಧಿ ನವೀನ್ ಆತನಿಗೆ ಫೋನ್ ಮಾಡಿ ತೊಂದರೆ ಕೊಡದಂತೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.
ಆದರೆ, ಯುವತಿಯ ಹುಟ್ಟುಹಬ್ಬದಂದು ಆಕೆಯ ಮನೆ ಮುಂದೆ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿದ ಫೋಟೋವನ್ನು ಸ್ಟೇಟಸ್ ಹಾಕಿಕೊಂಡಿದ್ದ ಬಾಲುನನ್ನು ನವೀನ್ ತರಾಟೆಗೆ ತೆಗೆದುಕೊಂಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಕೆರಳಿದ ಬಾಲು, ಮಾತುಕತೆಯ ನೆಪದಲ್ಲಿ ನವೀನ್ನನ್ನು ಗೋಲ್ಡನ್ ಬಾರ್ ಬಳಿ ಕರೆಸಿಕೊಂಡಿದ್ದ ಎಂದು ಹೇಳಲಾಗಿದೆ.
ನವೀನ್ ಸ್ಥಳಕ್ಕೆ ತಲುಪುತ್ತಿದ್ದಂತೆ ಬಾಲು ತನ್ನ ಸಹಚರರಾದ ತೇಜಸ್, ಪವನ್ ಮತ್ತು ಮತ್ತೊಬ್ಬನೊಂದಿಗೆ ಸೇರಿ ಏಕಾಏಕಿ ಜಗಳ ತೆಗೆದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದದ್ದು. ತೇಜಸ್ ಮತ್ತು ಪವನ್ ಸೇರಿ ನವೀನ್ನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾಗ, ಬಾಲು ತನ್ನ ಬಳಿಯಿದ್ದ ಚಾಕುವಿನಿಂದ ನವೀನ್ ಹೊಟ್ಟೆಗೆ ಇರಿಯಲು ಮುಂದಾಗಿದ್ದ ಎನ್ನಲಾಗಿದೆ.
ಈ ವೇಳೆ ನವೀನ್ ತಕ್ಷಣ ಬಲಗೈ ಅಡ್ಡ ಹಿಡಿದಿದ್ದರಿಂದ ಮಣಿಕಟ್ಟಿಗೆ ತೀವ್ರ ಸ್ವರೂಪದ ಕಟ್ ಆಗಿ ರಕ್ತ ಸ್ರಾವವಾಗಿದೆ ಎಂದು ತಿಳಿದುಬಂದಿದೆ. ಜಗಳ ಬಿಡಿಸಲು ಬಂದ ನವೀನ್ ಸ್ನೇಹಿತರಾದ ಅಜಿತ್ ಮತ್ತು ಪ್ರಶಾಂತ್ ಮೇಲೆಯೂ ಈ ಗ್ಯಾಂಗ್ ಭೀಕರ ಹಲ್ಲೆ ನಡೆಸಿದೆ ಎಂದು ದೂರಲಾಗಿದೆ.
ಅಷ್ಟಕ್ಕೇ ನಿಲ್ಲದ ಹಲ್ಲೆಕೋರರು, ಪ್ರಾಣಭಯದಿಂದ ನವೀನ್ ಮತ್ತು ಪ್ರಶಾಂತ್ ಓಡಿಹೋಗುತ್ತಿದ್ದಂತೆ ಸ್ಥಳದಲ್ಲೇ ಸಿಕ್ಕಿಬಿದ್ದ ಅಜಿತ್ನನ್ನು ಬಲವಂತವಾಗಿ ಆಕ್ಟಿವಾ ಸ್ಕೂಟರ್ನಲ್ಲಿ ಕೂರಿಸಿಕೊಂಡು ಅಪಹರಣ ಮಾಡಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಸ್ತುತ ಗಂಭೀರವಾಗಿ ಗಾಯಗೊಂಡಿರುವ ನವೀನ್ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇತ್ತ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಹಾಗೂ ಕಿಡ್ನಾಪ್ ಪ್ರಕರಣ ದಾಖಲಾಗಿದೆ.
Young man stabbed for rejecting love
Leave a comment