ಚಿಕ್ಕಮಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ನಗರದ ಆಶ್ರಯ ಬಡಾವಣೆಯ ಸಮುದಾಯ ಭವನದ ಮೈದಾನದಲ್ಲಿ ನಡೆದಿದೆ.
ಮೈದಾನದಲ್ಲಿ ಅರುಣ, ಮಣಿಕಂಠ ಹಾಗೂ ಯತೀಶ್ ಎಂಬುವವರು ಗೋಲಿ ಆಟವಾಡುತ್ತಿದ್ದು, ಅದನ್ನು ನೋಡಿದ ಸೋಮಶೇಖರ್ ಎಂಬ ಯುವಕ ತನಗೂ ಒಂದು ಆಟ ಆಡಲು ಅವಕಾಶ ನೀಡುವಂತೆ ಕೇಳಿದ್ದಾನೆ.
ಈ ಮಾತಿಗೆ ತೀವ್ರವಾಗಿ ಕೆರಳಿದ ಅರುಣ ಹಾಗೂ ಆತನ ಸ್ನೇಹಿತರು ಸೋಮಶೇಖರ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಏಕಾಏಕಿ ಕುತ್ತಿಗೆ ಪಟ್ಟಿ ಹಿಡಿದು ಅಲ್ಲೇ ಇದ್ದ ಜಲ್ಲಿಕಲ್ಲಿನ ಮೇಲೆ ತಳ್ಳಿ ಹಾಕಿದ್ದಾರೆ.
ಅಷ್ಟಕ್ಕೇ ನಿಲ್ಲಿಸದೆ ಕೆಳಗೆ ಬಿದ್ದಿದ್ದ ಯುವಕನನ್ನು ಕಾಲಿನಿಂದ ಮನಬಂದಂತೆ ಒದ್ದು ತೀವ್ರವಾಗಿ ಗಾಯಗೊಳಿಸಿದ್ದಾರೆ.
ಗಲಾಟೆಯ ಸದ್ದು ಕೇಳಿ ಓಡಿಬಂದ ಸ್ಥಳೀಯರು ತಕ್ಷಣವೇ ಜಗಳವನ್ನು ಬಿಡಿಸಿದ್ದು, ಸದ್ಯ ಗಾಯಾಳು ಸೋಮಶೇಖರ್ ಸರ್ಕಾರಿ ಮಲ್ಲೇಗೌಡ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆ ನಡೆಸಿದ ಮೂವರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Young man attacked for not allowing him to play goalie
Leave a comment