ಚಿಕ್ಕಮಗಳೂರು : ಜಿಲ್ಲೆಯಲ್ಲಿ ಎಲ್ಲಾ ಧರ್ಮದ ಜನರು ಪ್ರೀತಿ ಸ್ನೇಹದಿಂದ ಬದುಕುತ್ತಿರುವ ಇಂತಹ ಪರಂಪರೆಯನ್ನು ಗೌರವಿಸಬೇಕಾಗಿರುವುದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸೇರಿದಂತೆ ಪ್ರತಿಯೊಬ್ಬ ನಾಗರೀಕನ ಕರ್ತವ್ಯ ಎಂದು ಕೆ.ಪಿ.ಸಿ.ಸಿ. ವಕ್ತಾರ ರವೀಶ್ ಕ್ಯಾತನಬೀಡು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ ಸಿ.ಟಿ. ರವಿ ಅವರು ಇದನ್ನು ಮನಗಾಣಬೇಕು. ನಾಲಿಗೆಯನ್ನು ಹರಿಬಿಡದೆ ಶುಚಿಯಾಗಿಟ್ಟುಕೊಳ್ಳಬೇಕು. ಮುಲ್ಲಾನಿಗೂ ನೀಟ್ಗೂ ಏನು ಸಂಬಂಧ ಎಂದು ಮೊಂಡತನ ಮಾಡಿ ಸರಿ ಎಂದು ವಾದಿಸುತ್ತಿರುವ ರವಿ ಅವರ ಆರೋಗ್ಯ ಹದಗೆಟ್ಟಂತೆ ಕಾಣುತ್ತಿದ್ದು, ಕೂಡನೆ ತಜ್ಞ ವೈದ್ಯರ ಸಲಹೆ ಪಡೆಯಬೇಕೆಂದು ತೀಳಿಸಿದರು.
ಜಿಲ್ಲೆಯಲ್ಲಿ ಈ ರೀತಿಯ ಘಟನೆಗಳು ಮರುಕಳಿಸಿದರೆ, ಸಧ್ಯದಲ್ಲೇ ಸಿ.ಟಿ. ರವಿ ಸಹಿತ ಸಮಾಜ ಘಾತುಕ ಶಕ್ತಿಗಳ ವಿರುದ್ದ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಾಮೂಹಿಕ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದೆಂದು ಎಚ್ಚರಿಸಿದ ಅವರು, ಇದೇ ವರ್ತನೆ ಮುಂದುವರೆಸಿದರೆ, ೨೦೨೮ರ ವಿಧಾನಸಭಾ ಚುನಾವಣೆಯಲ್ಲಿ ಮತದಾರರು, ತಕ್ಕ ಪಾಠಕಲಿಸುತ್ತಾರೆಂದು ಹೇಳಿದರು.
ದೇಶದ ಸಾಮರಸ್ಯ ಕದಡುವ ಭರದಲ್ಲಿ ಬಿಹಾರದ ಯಾವುದೋ ಅಪಘಾತದ ವಿಡೀಯೊ ಚಿತ್ರದ ತುಣುಕೊಂದನ್ನು ನೀಟ್ ಹಗರಣದ ಕುರಿತು ನಡೆದ ಚಳುವಳಿಗೂ ಹೋಲಿಕೆ ಮಾಡಿರುವ ಸಿ.ಟಿ. ರವಿ ಅವರ ಪ್ರದರ್ಶನದ ನಡವಳಿಕೆ ನಿಜವಾದ ಕುತಂತ್ರದ ಬಣ್ಣ ಬಯಲಾಗಿದೆ. ಕಾನೂನನ್ನು ಗೌರವಿಸಬೇಕಾದವರು, ಪೊಲೀಸರು ತಂದ ನೋಟೀಸನ್ನು ಸ್ವೀಕರಿಸಿ ತನಿಖೆಗೆ ಸಹಕರಿಸಬೇಕಿತ್ತೆಂದು ಹೇಳಿದರು.
ನೀಟ್ ಹಗರಣದಿಂದಾಗಿ ಸುಮಾರು ೨೧ ಪ್ರತಿಭಾನ್ವಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದ ಮೃತರ ತಂದೆ ತಾಯಿಗಳ ಅಳಲು ತೋಡಿಕೊಳ್ಳುತ್ತಿದ್ದಾರೆ. ಮೃತರು ಭಾರತದ ಮಕ್ಕಳಲ್ಲವೆ ಎಂದು ಪ್ರಶ್ನಿಸಿ ಚಳುವಳಿಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅವಮಾನಿಸಿದ್ದೀರಿ ಮುಂದೆ ಅದೇ ತರುಣರು ಸಂಪೂರ್ಣವಾಗಿ ವಿಶ್ರಾಂತಿಗೆ ಕಳಿಸುತ್ತಾರೆಂದು ಸಿ.ಟಿ. ರವಿ ಅವರಿಗೆ ಟಾಂಗ್ ನೀಡಿದರು.
ರಾಜ್ಯದಲ್ಲಿ ಜಟ್ಕಾಕಟ್, ಹಲಾಲ್ ಕಟ್ ಎನ್ನುವ ಸಾಮರಸ್ಯ ಕದಡುವ ಕೆಲಸವನ್ನು ಸಮಾಜದ್ರೋಹಿಗಳು ನಡೆಸಿದ ಚರಿತ್ರೆ ಹಸಿಯಾಗಿರುವಾಗಲೇ ಬಿಜೆಪಿ ದೇಶದಲ್ಲಿ ಜನಪರ ವಿಚಾರಗಳನ್ನು ಎಂದೂ ಮಾತನಾಡದೆ ಶಾಂತಿ ಸಾಮರಸ್ಯದ ಬೆಸುಗೆಯನ್ನು ಕಡಿತಗೊಳಿಸುವ ಕೆಲಸವನ್ನು ಸಿ.ಟಿ. ರವಿಯಂತಹ ಅನೇಕರು ಮಾಡುತ್ತಿದ್ದಾರೆಂದು ಟೀಕಿಸಿದರು.
ಹೇಳಿಕೆಯ ಭರಾಟೆಯಲ್ಲಿ ಮುಲ್ಲಾಗಳಿಗೆ ಅವಮಾನಿಸಿರುವ ಅವರು, ಎಪಿಜೆ ಅಬ್ದುಲ್ ಕಲಾಂ, ಸಂತ ಶಿಶುನಾಳ ಷರೀಫ, ನಿಸಾರ್ ಅಹಮದ್ ಮುಂತಾದವರು ಮುಲ್ಲಾಗಳೆ ಎಂಬುದನ್ನು ಅರಿಯಬೇಕು, ಹಿಂದೂ, ಮುಸ್ಲಿಂ, ಕ್ರೈಸ್ತರು, ಬೌದ್ದರು, ಜೈನರು, ಲಿಂಗಾಯಿತರೂ ಸೇರಿದಂತೆ ತಳ ಸಮುದಾಯದ ಎಲ್ಲಾ ವರ್ಗದ ಸಾಧಕರು ಜ್ಞಾನ ಪರಂಪರೆಯನ್ನು ಬೆಳಗಿಸಿದ್ದಾರೆ, ಡಾಕ್ಟರೇಟ್ ಪಡೆಯುವಾಗ ಸಿ.ಟಿ. ರವಿ ಈ ನೆಲದ ಚರಿತ್ರೆಯನ್ನು ಅರ್ಥಮಾಡಿಕೊಂಡಂತಿಲ್ಲ. ಬದಲಾಗಿ ನಕಲು ಮಾಡಿದಂತ ವರ್ತನೆ ನಡೆಯುತ್ತಿದೆ ಎಂದು ಲೇವಡಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ತನೂಜ್ ನಾಯ್ಡು, ಮುಖಂಡರಾದ ಸಂತೋಷ್ ಲಕ್ಯ, ನಟರಾಜ್ ಎಸ್. ಕೊಪ್ಪಲು ಉಪಸ್ಥಿತರಿದ್ದರು.
It is the duty of every citizen to respect people of all religions.
Leave a comment