ಚಿಕ್ಕಮಗಳೂರು: ದಶಕಗಳಿಂದ ಹಲವು ಸಮಸ್ಯೆಗಳ ನಡುವೆಯೂ ಉಳಿಸಿಕೊಂಡು ಬಂದಿರುವ ಕಾಫಿ ಉದ್ಯಮದ ಸಾಂಪ್ರದಾಯಿಕತೆಗೆ ಕೊಳ್ಳಿ ಇಟ್ಟು, ರಿಯಲ್ಎಸ್ಟೇಟ್ ಉದ್ಯಮಿಗಳು, ವ್ಯಾಪಾರಿಗಳು ಹಿಡಿತ ಸಾಧಿಸಲು ಕಾರಣವಾಗುತ್ತಿರುವ ಸರ್ಫೇಸಿ ಕಾಯಿದೆಗೆ ತಕ್ಷಣ ಕಡಿವಾಣ ಹಾಕಬೇಕು ಎಂದು ಬೆಳೆಗಾರರ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಉತ್ತಮ್ ಗೌಡ ಹುಲಿಕೆರೆ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಲದಗದ್ದೆ ಗಿರೀಶ್ ಆಗ್ರಹಿಸಿದ್ದಾರೆ.
ಸರ್ಫೇಸಿ ಕಾಯ್ದೆಯಿಂದ ಈಗಾಗಲೇ ಹತ್ತಾರು ಬೆಳೆಗಾರರು ತನ್ನ ಆಸ್ತಿಯನ್ನು ಕಳೆದುಕೊಂಡಿದ್ದಾರೆ. ಬ್ಯಾಂಕ್ಗಳು ಅದರಲ್ಲೂ ಕೆನರಾ ಬ್ಯಾಂಕ್ನವರು ಬೆಳೆಗಾರರಿಗೆ ನೀಡುತ್ತಿರುವ ಹಿಂಸೆ ಅಷ್ಟಿಷ್ಟಲ್ಲ. ಸರ್ಫೇಸಿ ಹೆಸರು ಕೇಳುತ್ತಿದ್ದಂತೆ ಬೆಳೆಗಾರರು ಬೆಚ್ಚಿಬೀಳುವಂತಾಗಿದೆ. ಬ್ಯಾಂಕುಗಳ ಕಿರುಕುಳದಿಂದ ಪ್ರತಿದಿನ ಮಾನಸಿಕ ಒತ್ತಡದಿಂದ ಬಳಲುವಂತಾಗಿದೆ. ಆಸ್ತಿ ಕಳೆದುಕೊಳ್ಳುವ ಭಯದಿಂದ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇಲ್ಲದೆ ಅದರಲ್ಲೂ ನಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ವರ್ಷ ಕಾಫಿಗೆ ಹೆಚ್ಚು ಬೆಲೆ ಬಂದಿದೆ ಎಂದು ಹೇಳುತ್ತಿರುವುದು ನಿಜವಾದರೂ, ಕಳೆದ ೨೦ ವರ್ಷಗಳ ಹಿಂದೆ ಮಾಡಿರುವ ಬ್ಯಾಂಕ್ ಸಾಲಕ್ಕೆ ಬಡ್ಡಿಕಟ್ಟುವುದರಲ್ಲೇ ಹೈರಾಣಾಗಿರುವ ಬೆಳೆಗಾರರಿಗೆ ಇಂದಿನ ಬೆಲೆ ಹೆಚ್ಚಳ ಸಂಪೂರ್ಣ ಚೇತರಿಕೆಯ ಶಕ್ತಿ ನೀಡಿಲ್ಲ.
ಹೆಚ್ಚು ಬೆಲೆ ಸಿಕ್ಕಿದ್ದರೂ ಅದು ಹೆಚ್ಚು ದಿನ ಉಳಿದಿಲ್ಲ. ಕಳೆದ ಮಾರ್ಚ್ಗೆ ಹೋಲಿಸಿದರೆ ಈಗ ಒಂದು ಮೂಟೆ ಅರೇಬಿಕ ಪಾರ್ಚ್ಮೆಂಟಿಗೆ ೬೦೦೦ ರೂ.ದರ ಇಳಿದಿದೆ ಈ ವರ್ಷದ ಬೆಲೆ ಇಟ್ಟುಕೊಂಡು ಎಲ್ಲ ಬೆಳೆಗಾರನಿಗೆ ಬೆಲೆ ಇದೆ ಎಂದು ಹೇಳುವುದು ಸರಿಯಲ್ಲ ಎಂದು ಅಭಿಪ್ರಾಯಿಸಿದ್ದಾರೆ.
ಈಗಾಗಲೇ ಆನ್ಲೈನ್ ನಲ್ಲಿ ಸರ್ಫೇಸಿ ಕಾಯಿದೆ ಅಡಿಯಲ್ಲಿ ಕಾಫಿ ತೋಟಗಳು ವ್ಯಾಪಾರವಾಗುತ್ತಿವೆ. ಬ್ಯಾಂಕ್ನವರ ಜೊತೆ ದಲ್ಲಾಳಿಗಳು ಸೇರಿಕೊಂಡಿದ್ದಾರೆ. ರಿಯಲ್ಎಸ್ಟೇಟ್ನವರು ಹರಾಜಿನಲ್ಲಿ ತೋಟಗಳ ಖರೀದಿಗೆ ಉತ್ಸುಕರಾಗಿದ್ದರೆ. ಇದು ಯಾವ ಕಾರಣಕ್ಕೆ ಗೊತ್ತಿಲ್ಲ ಎಂದಿದ್ದಾರೆ. ತೋಟಗಳನ್ನು ಆನ್ಲೈನ್ ಮುಖಾಂತರ ಖರೀದಿಸಬಹುದು ಆದರೆ ಅಂತಹ ತೋಟವನ್ನು ಆನ್ಲೈನ್ ಮುಖಾಂತವೇ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಊರಿಗೆ ಬಂದವರು ನೀರಿಗೆ ಬರಲೇಬೇಕು ಎಂಬಂತೆ ಖರೀದಿದಾರರು ತೋಟಕ್ಕೆ ಬರಲೇ ಬೇಕಾಗುತ್ತದೆ. ಆಗ ಹಿಂದಿನಿಂದ ಸಾಂಪ್ರದಾಯಿಕವಾಗಿ ತೋಟ ಮಾಡಿಕೊಂಡು ಬಂದಿದ್ದ ಕುಟುಂಬಗಳ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎನ್ನುವುದು ಗಮನದಲ್ಲಿರಲಿ ಎಂದು ಎಚ್ಚರಿಸಿದ್ದಾರೆ.
ಜೀವನ ಪೂರ್ತಿ ಭಾವನಾತ್ಮಕವಾಗಿ ತಮ್ಮ ತೋಟಗಳೊಂದಿಗೆ ಬೆಸೆದುಕೊಂಡಿದ್ದ ಸಂಬಂಧವನ್ನು ನಿರ್ಧಾಕ್ಷಿಣ್ಯವಾಗಿ ಬ್ಯಾಂಕುಗಳು ಸರ್ಫೇಸಿ ಹೆಸರಲ್ಲಿ ಕಡಿದುಹಾಕುತ್ತಿವೆ. ಮೊನ್ನೆಯಷ್ಟೇ ಬ್ಯಾಂಕ್ ಹರಾಜಿನಲ್ಲಿ ತಮ್ಮ ೭.೩೫ ಎಕರೆ ತೋಟ ಕಳೆದುಕೊಂಡು ಆಘಾತಕ್ಕೊಳಗಾದ ಮೂಡಿಗೆರೆ ತಾಲ್ಲೂಕು ದೇವವೃಂದದ ವಿಜಯ್ ಮತ್ತು ಪಾರ್ವತಿ ಎಂಬ ವೃದ್ಧ ದಂಪತಿಗಳು ದಯಾಮರಣ ಕೋರಿ ಅರ್ಜಿ ಸಲ್ಲಿಸಿರುವುದು ಇದಕ್ಕೊಂದು ಉದಾಹರಣೆಯಾಗಿದೆ ಎಂದಿದ್ದಾರೆ.
ದಿಢೀರ್ ಲಾಭ ಮಾಡಿಕೊಳ್ಳುವ ಏಕೈಕ ವ್ಯಾಪಾರಿ ಉದ್ದೇಶದಿಂದ ತೋಟ ಖರೀದಿಸಲು ಮುಂದಾಗುತ್ತಿರುವ ರಿಯಲ್ಎಸ್ಟೇಟ್ ಉದ್ಯಮಿಗಳು, ವ್ಯಾಪಾರಿಗಳೊಂದಿಗೆ ಕೆಲವು ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿಗಳು ಮಧ್ಯವರ್ತಿಗಳು ಪಾತ್ರವಹಿಸಿ ಹಣಗಳಿಸುವ ಹುನ್ನಾರ ನಡೆಸುತ್ತಿದ್ದಾರೆ ಎನ್ನುವುದು ಆತಂಕದ ವಿಚಾರವಾಗಿದೆ. ಇದಕ್ಕೆಲ್ಲಾ ಸರ್ಫೈಸಿ ಕಾಯಿದೆ ಮೂಲ ಕಾರಣವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿಷಯದ ಗಂಭೀರತೆಯನ್ನು ಅರಿತುಕೊಂಡು ಕೂಡಲೇ ಸರ್ಫೇಸಿ ಕಾಯ್ದೆಯನ್ನು ರದ್ದುಪಡಿಸಲು ಕ್ರಮ ತೆಗೆದುಕೊಳ್ಳಬೇಕು. ಹಾಗೆಯೇ ಮಧ್ಯವರ್ತಿಗಳಂತೆ ಪಾತ್ರ ವಹಿಸುತ್ತಿರುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಂಸದರು ಸೇರಿದಂತೆ ಎಲ್ಲಾ ಪಕ್ಷಗಳ ಚುನಾಯಿತ ಪ್ರತಿನಿಧಿಗಳು, ಮುಖಂಡರುಗಳು ಕೇಂದ್ರದ ಮೇಲೆ ಪಕ್ಷಾತೀತವಾಗಿ ಒತ್ತಡ ತಂದು ಕಾಫಿ ಉದ್ಯಮದ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
The SARFAESI Act should be repealed immediately.
Leave a comment