ಚಿಕ್ಕಮಗಳೂರು: ಸೆಪ್ಟಂಬರ್ ೨೨ ರಿಂದ ಅಕ್ಟೋಬರ್ ೭ ರವರೆಗೆ ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮೀಕ್ಷೆಯು ಸೆಪ್ಟೆಂಬರ್ ೨೨ ರಿಂದ ಪ್ರಾರಂಭವಾಗಿ ಆಕ್ಟೋಬರ್ ೭ ರವರೆಗೆ ನಡೆಯುತ್ತದೆ. ಸಮೀಕ್ಷೆಗೆ ಸಂಬಂಧಿಸಿದಂತೆ ಈಗಾಗಲೇ ಮೆಸ್ಕಾಂನ ಮೀಟರ್ ರೀಡರ್ಗಳು ೩,೪೪,೦೦೦ ಮನೆಗಳಿಗೆ ಜಿಯೋ ಟ್ಯಾಗ್ ಮಾಡಿದ್ದು, ವಿದ್ಯುತ್ ಮೀಟರ್ ಇಲ್ಲದ ಮನೆಗಳ ಸಮೀಕ್ಷೆ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಈಗಾಗಲೇ ಮೆಸ್ಕಾಂ ವತಿಯಿಂದ ಪ್ರತಿ ಕುಟುಂಬಕ್ಕೆ ಯುಹೆಚ್ಐಡಿ (ಯೂನಿಕ್ ಹೌಸ್ ಹೋಲ್ಡ್ ಐಡಿ) ನಂಬರನ್ನು ಸೃಜಿಸಿ ಪ್ರತಿ ಮನೆಗೆ ಸ್ಟಿಕ್ಕರ್ ಅಂಟಿಸಲಾಗಿದೆ ಮತ್ತು ಇದನ್ನು ಜಿಯೋ ಟ್ಯಾಗ್ ಮಾಡಲಾಗುತ್ತಿದೆ. ಒಂದು ವೇಳೆ ಯುಹೆಚ್ಐಡಿ ಸ್ಪೀಕರ್ ಅನ್ನು ಯಾವುದೇ ಮನೆಗೆ ಅಂಟಿಸಿಲ್ಲವಾದಲ್ಲಿ ಕೂಡ ಯುಹೆಚ್ಐಡಿಯನ್ನು ಸೃಜಿಸಿಕೊಂಡು ಗಣತಿದಾರರು ಸಮೀಕ್ಷೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ವಿದ್ಯುತ್ ಸಂಪರ್ಕವಿಲ್ಲದೆ ಇರುವ ಮನೆಗಳ ವಿವರವನ್ನು ನೀಡಲು ತಿಳಿಸಲಾಗಿದೆ. ಈ ಮನೆಗಳನ್ನು ಸಹ ವಿಎ, ಪಿಡಿಒಗಳ ಮೂಲಕ ಜಿಯೋ ಟ್ಯಾಗ್ ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
೨,೬೬೮ ಮಂದಿ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಲಿದ್ದು, ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸಮೀಕ್ಷೆಗೆ ನಿಯೋಜಿಸಲಾಗಿದೆ. ಅವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಲುವಾಗಿ ಪ್ರತೀ ಮನೆಗಳಿಗೆ ತೆರಳಿ ೬೦ ಪ್ರಶ್ನೆಗಳನ್ನು ಆಪ್ ಮೂಲಕ ಕೇಳುವರು. ಈ ಸಮೀಕ್ಷೆ ಕಾರ್ಯಕ್ಕೆ ಜಿಲ್ಲೆಯ ಮಾಸ್ಟರ್ ಟ್ರೈನರ್ಗಳಿಗೆ ಈಗಾಗಲೇ ಆನ್ಲೈನ್ ಮೂಲಕ ತರಬೇತಿ ನೀಡಲಾಗಿದೆ ಎಂದರು.
ಒಬ್ಬ ಎನ್ಯುಮರೇಟರ್ಗೆ ೧೫೦ ಮನೆಗಳನ್ನು ಒಂದು ಬ್ಲಾಕ್ ಆಗಿ ನಿಗದಿಪಡಿಸಲಾಗಿದ್ದು, ಮಲೆನಾಡು ಭಾಗದಲ್ಲಿ ೧೦೦ ರಿಂದ ೧೧೦ ಮನೆಗಳನ್ನು ನಿಗದಿಪಡಿಸಲಾಗಿದೆ. ಪಡಿತರ ಚೀಟಿ ಹೊಂದಿರುವವರಿಗೆ ಈಗಾಗಲೇ ಇಕೆವೈಸಿ ಇದ್ದು, ಪಡಿತರ ಚೀಟಿ ಹೊಂದಿಲ್ಲದವರು ಆಧಾರ್ ಕಾರ್ಡ್ ನೀಡಬೇಕು. ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಸಮೀಕ್ಷಾದಾರರು ಬಂದಾಗ ನೀಡಬೇಕು ಎಂದ ಅವರು, ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ಸಮೀಕ್ಷೆದಾರರಿಗೆ ತಿಳಿಸಬೇಕು. ಇಂಟರ್ ನೆಟ್ ಸೌಲಭ್ಯ ಇಲ್ಲದೇ ಇರುವ ಪ್ರದೇಶಗಳಲ್ಲಿ ಸರ್ಕಾರ ಗುರುತಿಸಿರುವ ಸರ್ಕಾರಿ ಕಟ್ಟಡಗಳಲ್ಲಿ ಸಮೀಕ್ಷಾ ಕಾರ್ಯವನ್ನು ನಡೆಸಲಾಗುವುದು. ಅಂತಹ ಸ್ಥಳಗಳಿಗೆ ಕುಟುಂಬದ ಮಾಹಿತಿದಾರರೊಬ್ಬರನ್ನು ಕರೆ ತಂದು ಮಾಹಿತಿ ಪಡೆಯಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ, ಉಪವಿಭಾಗಾಧಿಕಾರಿ ಸುದರ್ಶನ್ ಇದ್ದರು.
Socio-Educational Survey of Backward Classes from September 22
Leave a comment