ಚಿಕ್ಕಮಗಳೂರು: ಕೊಡಗು ಜಿಲ್ಲೆಯ ಪತ್ರಿಕೋದ್ಯಮದ ವಿದ್ಯಾರ್ಥಿನಿ ರಂಜಿತಾ ಅವರನ್ನು ಅತ್ಯಾಚಾರ ಮಾಡಿ ಕೊಲೆಗೈದಿರುವ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೃಷ್ಣಪ್ಪ ಬಣ ಮತ್ತು ದಲಿತ ಮಹಿಳಾ ಒಕ್ಕೂಟದಿಂದ ರಾಜ್ಯ ಸಮಿತಿ ಕರೆಯಂತೆ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಮಹಿಳೆಯರು ಸೇರಿದಂತೆ ನೂರಾರು ಕಾರ್ಯಕರ್ತರು ನಗರದ ಆಜಾದ್ಪಾರ್ಕಿನಲ್ಲಿ ಸಮಾವೇಶಗೊಂಡು ಕೊಡಗಿನ ರಂಜಿತಾ ಕೊಲೆಗಡುಕರನ್ನು ಬಂಧಿಸಿ ನೊಂದ ವಿದ್ಯಾರ್ಥಿನಿ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಘೋಷಣೆ ಕೂಗಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಭೀಮಯ್ಯ ಮಾತನಾಡಿ, ಮಾ.೧೧ ರಂದು ಕೊಡಗಿನ ಅಯ್ಯಪ್ಪ ಎಂಬಾತ ಮೈಸೂರಿನ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿ ರಂಜಿತಾಳನ್ನು ಪುಸಲಾಯಿಸಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ. ತೋಟಕಾರ್ಮಿಕರು, ಬಡವರ ಪರವಾಗಿ ಸದಾ ಹೋರಾಟ ನಡೆಸುತ್ತಿದ್ದ ರಂಜಿತಾಳ ಕೊಲೆ ವ್ಯವಸ್ಥಿತ ಪಿತೂರಿಯಾಗಿದ್ದು ಈ ಪ್ರಕರಣನ್ನು ರಾಜ್ಯ ಸರಕಾರ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಓರ್ವ ವಿದ್ಯಾರ್ಥಿನಿಗೆ ಆದ ಅನ್ಯಾಯವನ್ನು ರಾಜ್ಯದ ಯಾವೊಂದು ಮಹಿಳಾ ಸಂಘಟನೆಗಳು ಖಂಡಿಸದಿರುವುದು ವಿಪರ್ಯಾಸ ಕೂಡಲೇ ಆರೋಪಿಗಳಿಗೆ ಕಠಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ರಾಜ್ಯ ಸಂಚಾಲಕ ವೆಂಕಟೇಶ್ ಮಾತನಾಡಿ, ರಂಜಿತಾ ಕೊಲೆಗಡುಕರನ್ನು ಗಲ್ಲಿಗೇರಿಸಬೇಕು. ಹೋರಾಟಗಾರ್ತಿಯಾಗಿದ್ದ ರಂಜಿತಾ ಶೋಷಿತರ ಪರವಾಗಿ ಸದಾ ದನಿಎತ್ತುತ್ತಿದ್ದರು. ಇಂತಹ ಹೆಣ್ಣುಮಗಳನ್ನು ಕೊಲೆ ಮಾಡಿರುವ ದುರುಳರಿಗೆ ಕಠಿಣ ಶಿಕ್ಷೆಯಾಗಬೇಕು. ಸಂತ್ರಸ್ಥ ಕುಟುಂಬಕ್ಕೆ ಪರಿಹಾರ, ಜಮೀನು ನೀಡಬೇಕು. ಕುಟುಂಬದ ಒಬ್ಬರಿಗೆ ಸರಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಮಹಿಳಾ ಸಂಚಾಲಕಿ ಭವಾನಿ ಮಾತನಾಡಿ ಕೊಡಗಿನಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು ಈ ಬಗ್ಗೆ ರಾಜ್ಯ ಸರಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಡಿಎಸ್ಎಸ್ ಮುಖಂಡರಾದ ರಾಜೇಶ್, ಅಬ್ದುಲ್ರೆಹಮಾನ್, ಕೃಷ್ಣ, ಶಿವಕುಮಾರ್, ಮಂಜುನಾಥ್, ಭಾಸ್ಕರ, ಅಶೋಕ, ಮೋಹನ್ಕುಮಾರ್, ರಾಘವೇಂದ್ರ ಮತ್ತಿತರರಿದ್ದರು. ನಂತರ ಜಿಲ್ಲಾಧಿಖಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
Protest demanding hanging of murder accused
Leave a comment