ಚಿಕ್ಕಮಗಳೂರು: ಸರ್ಫೇಸಿ ಕಾಯ್ದೆ ವಿರೋಧಿಸಿ ಏ. 22ರಂದು ಬೆಳಿಗ್ಗೆ 11ಗಂಟೆಗೆ ನಗರದ ಸಂಸತ್ ಸದಸ್ಯರ ಕಚೇರಿ ಮತ್ತು ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಮಹೇಶ್ ತಿಳಿಸಿದರು.
ಜಿಲ್ಲಾ ಕಾಫಿ ಬೆಳೆಗಾರರ ಸಂಘ, ಜಿಲ್ಲಾ ಸಣ್ಣ ಬೆಳೆಗಾರರ ಸಂಘ, ಜಿಲ್ಲಾ ಬೆಳೆಗಾರರ ಹಿತ ರಕ್ಷಣಾ ಸಮಿತಿ ಸಹಯೋಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಫಿ ಬೆಳೆಗಾರರ ಸಾಲ ವಸೂಲಾತಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸರ್ಫೇಸಿ ಕಾಯ್ದೆಯು ಬೆಳೆಗಾರರ ಕೊರಳಿಗೆ ಉರುಳಾಗಿದೆ. ಈಗಾಗಲೇ ಬೆಳೆಗಾರರು ಅನೇಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನರಳುತ್ತಿದ್ದಾರೆ. ರಸಗೊಬ್ಬರ, ಕ್ರಿಮಿನಾಶಕಗಳ ಬೆಲೆ ಏರಿಕೆ, ಕಾರ್ಮಿಕರ ಕೊರತೆ, ಪ್ರಕೃತಿ ವೈಪರೀತ್ಯಗಳ ಮಧ್ಯೆ ಸಿಲುಕಿ ಹೊರ ಬರಲಾಗದೆ ಬೆಳೆಗಾರರು ಕಂಗಾಲಾಗಿದ್ದಾರೆ ಎಂದರು.
ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಬೆಳೆ ಹಾನಿ ಜೀವ ಹಾನಿಯ ಪ್ರಮಾಣಗಳು ಏರಿಕೆಯಾಗುತ್ತಿವೆ. ಜೀವಹಾನಿ ಹಾಗೂ ಕಾಡುಪ್ರಾಣಿಗಳ ಹಾವಳಿ ತಡೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈವರೆಗೂ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ ಎಂದು ದೂರಿದರು.
ಈ ಎಲ್ಲಾ ಸಮಸ್ಯೆಗಳ ನಡುವೆ ಸರ್ವೇಸಿ ಕಾಯ್ದೆ ಬಳಸಿಕೊಂಡು ಕಾಫಿ ತೋಟಗಳನ್ನು ಆನ್ಲೈನ್ ಮೂಲಕ ಹರಾಜು ಮಾಡುವ ಪ್ರಕ್ರಿಯೆಯನ್ನು ಬ್ಯಾಂಕ್ಗಳು ಮುಂದುವರೆಸಿವೆ ಎಂದರು.
ಜಿಲ್ಲೆಯಲ್ಲಿ ಏಳು ಬೆಳೆಗಾರರ ಕಾಫಿ ತೋಟಗಳನ್ನು ಆನ್ಲೈನ್ ಮೂಲಕ ಹರಾಜು ಮಾಡಲಾಗಿದೆ. ಹಲವರಿಗೆ ನೋಟಿಸ್ ನೀಡಲಾಗಿದೆ. ಕರ್ನಾಟಕ ಬೆಳೆಗಾರರ ಸಂಘಟನೆಗಳು ಈಗಾಗಲೇ ಮೂಡಿಗೆರೆ ಮತ್ತು ಮಂಗಳೂರು ಬ್ಯಾಂಕ್ ಕಚೇರಿಗಳ ಎದುರು ಧರಣಿ ನಡೆಸಿವೆ. ಆದರೂ ಬ್ಯಾಂಕುಗಳು ಬೆಳೆಗಾರರ ಮನವಿಗೆ ಮಣಿದಿಲ್ಲ. ಬೆಳೆಗಾರರ ಒಕ್ಕೂಟದ ಸದಸ್ಯರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೊಂದಿಗೆ ಹೋಗಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದಾರೆ. ಬೆಳೆಗಾರರ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿದ್ದಾರೆ. ಆದರೂ ಕೇಂದ್ರ ಸರ್ಕಾರ ಜಾಣ ಮೌನ ವಹಿಸಿದೆ ಎಂದು ದೂರಿದರು.
ಆನ್ಲೈನ್ ಹರಾಜು ಪ್ರಕ್ರಿಯೆ ನಿಲ್ಲಿಸಬೇಕು, ಸರ್ಫೇಸಿ ಕಾಯ್ದೆಯಿಂದ ಕಾಫಿ ಬೆಳೆಯನ್ನು ಹೊರಗಿಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ. ಬಸವರಾಜ್, ಜಿಲ್ಲಾ ಖಜಾಂಚಿ ಕುಮಾರಸ್ವಾಮಿ, ಮುಖಂಡರಾದ ಗುರುಶಾಂತಪ್ಪ, ಪ್ರದೀಪ್ ಭಾಗವಹಿಸಿ ದ್ದರು.
Protest against the SARFAESI Act on April 22
Leave a comment