ಚಿಕ್ಕಮಗಳೂರು : ಶ್ರೀಗುರು ಬಾಬಾಬುಡನ್ ದತ್ತಾತ್ರೇಯ ಸ್ವಾಮಿ ದರ್ಗಾದಲ್ಲಿ ಶಾಖಾದ್ರಿ ವಂಶಸ್ಥರು ಫಾತೇಹ ಆಚರಣೆಯನ್ನು ಪ್ರತಿವರ್ಷ ಆಚರಿಸಿಕೊಂಡು ಬರುತ್ತಿದ್ದು ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿಲ್ಲ. ಆದರೆ, ಮುಜರಾಯಿ ಇಲಾಖೆ ನೂತನ ಕಾರ್ಯನಿರ್ವಹಣಾಧಿಕಾರಿ ದರ್ಗಾದಲ್ಲಿ ಫಾತೇಹ ಆಚರಣೆಗೆ ಅವಕಾಶ ನೀಡದೆ ಸಮುದಾಯದ ಭಾವನೆಗೆ ನೋವುಂಟು ಮಾಡಿದ್ದಾರೆ. ಧಾರ್ಮಿಕ ಹಕ್ಕಿನ ನಿರಾಕರಣೆಯಾಗಿದ್ದು ಮುಜರಾಯಿ ಇಲಾಖೆ ಕಾರ್ಯ ನಿರ್ವಹಣಾ ಅಧಿಕಾರಿಯನ್ನ ಬೇರೆಡೆ ವರ್ಗಾವಣೆ ಮಾಡಬೇಕು ಹಾಗೂ ವ್ಯವಸ್ಥಾಪನಾ ಸಮಿತಿಯನ್ನು ಬರಖಾಸ್ತುಗೊಳಿಸಿ ಜಾತ್ಯತೀತ ಸಮಿತಿ ನೇಮಿಸ ಬೇಕೆಂದು ಸೈಯದ್ ಬುಡೇನ್ ಶಾಖಾದ್ರಿ ವಂಶಸ್ಥ ಸೈಯದ್ ಫಕ್ರುದ್ದೀನ್ ಶಾಖಾದ್ರಿ ಸರ್ಕಾರವನ್ನು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಮೂರು ದಿನಗಳ ಹಿಂದೆ ಇನಾಂ ದತ್ತಾತ್ರೇಯ ಪೀಠ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಬಾಬಾ ಬುಡನ್ ದರ್ಗಾದಲ್ಲಿ ಸೈಯದ್ ಬುಡೆನ್ ಶಾ ಖಾದ್ರಿ ವಂಶಸ್ಥರಿಂದ ಪ್ರತಿವರ್ಷ ಆಚರಿಸಲ್ಪಡುವ ಫಾತೇಹ ಎಂಬ ಧಾರ್ಮಿಕ ವಿಧಿ ನೆರವೇರಿಸಲು ಸಮುದಾಯದ ಜನರೊಂದಿಗೆ ತೆರಳಿದ್ದು, ಈ ವೇಳೆ ಬಾಬಾಬುಡನ್ ದತ್ತಾತ್ರೇಯ ಸ್ವಾಮಿ ದರ್ಗಾದ ನೂತನ ಕಾರ್ಯ ನಿರ್ವಹಣಾಧಿಕಾರಿ ಫಾತೇಹ ಆಚರಣೆ ಪೊಲೀಸರ ಮೂಲಕ ತಡೆದು ಸಮುದಾಯದವರ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಿ ನಮ್ಮ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದರು.
ಹಿಂದೂ ಧಾರ್ಮಿಕ ಪದ್ಧತಿಯಂತೆ ಕಾಯಿ, ಹೂವು, ಹಣ್ಣುಗಳೊಂದಿಗೆ ಮಾತ್ರ ಫಾರೇಹ ಮಾಡಬೇಕು, ರೊಟ್ಟಿ ಬಾಜಿಯನ್ನು ಗುಹೆಯೊಳಗೆ ಕೊಂಡೊಯ್ಯುವಂತಿಲ್ಲ ಎನ್ನುವ ಮೂಲಕ ನಮ್ಮದಲ್ಲದ ಆಚರಣೆ ಮಾಡಲು ಒತ್ರಾಯಿಸಿದ್ದಾರೆ ಎಂದು ದೂರಿದರು. ಮುಜರಾಯಿ ಇಓ ಅವರು ನ್ಯಾಯಾಲಯದ ಆದೇಶಕ್ಕೆ ಅವಮಾನ ಮಾಡಿದ್ದು, ಹಿಂದಿನಿಂದಲೂ ಈ ಆಚರಣೆ ಇದ್ದರೂ ಇದರ ಪರಿಜ್ಞಾನವಿಲ್ಲದವರಂತೆ ಮಾತನಾಡಿದ್ದಾರೆ. ಫಾತೇಹ ಆಚರಣೆಗೆ ನ್ಯಾಯಾಲಯವೂ ಅವಕಾಶ ನೀಡಿದೆ. 1947 ರ ಮೈಸೂರು ಗೆಜೆಟಿಯರ್ನಲ್ಲೂ ಈ ಆರಚರಣೆ ಬಗ್ಗೆ ಉಲ್ಲೇಖವಿದೆ. 1991ರ ನ್ಯಾಯಾಲಯದ ಆದೇಶದಲ್ಲಿ ಇದಕ್ಕೆ ಅವಕಾಶವಿದ್ದರೂ ಅವಕಾಶ ನೀಡಿಲ್ಲ ಎಂದರು.
ಕೂಡಲೇ ಈ ಅಧಿಕಾರಿಯನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು. ಅಲ್ಲದೇ ವ್ಯವಸ್ಥಾಪನಾ ಸಮಿತಿಯನ್ನು ಬರಖಾಸ್ತುಗೊಳಿಸಿ ಜಾತ್ಯತೀತ ಸಮಿತಿಯನ್ನು ಸರ್ಕಾರ ರಚಿಸಬೇಕು. ಇಲ್ಲದೇ ದರ್ಗಾದಲ್ಲಿನ ನಮ್ಮ ಧಾರ್ಮಿಕ ಆಚರಣೆಗಳ ಮೇಲ್ವಿಚಾರಣೆಗೆ ಶಾಖಾದ್ರಿ ನೇತೃತ್ವದ ಸಮಿತಿ ರಚನೆ ಮಾಡಬೇಕು, ತಪ್ಪಿದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
Leave a comment