ಕಳಸ: ಸರ್ಕಾರದ ಬೇಜವಾಬ್ದಾರಿತನ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಮಲೆನಾಡಿಗರು ಆಕ್ರೋಶದ ತೊಡೆ ತಟ್ಟಿದ್ದಾರೆ.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಕೋಡು ಕುಗ್ರಾಮದ ಜನರಿಗೆ ಮಾತ್ರ ಇದುವರೆಗೂ ರಸ್ತೆ ಭಾಗ್ಯ ಸಿಕ್ಕಿಲ್ಲ. ಈ ಕುರಿತು ಹತ್ತಾರು ಬಾರಿ ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಸಾಕಾದ ಗ್ರಾಮಸ್ಥರು, ಕೊನೆಗೆ ತಾವೇ ರಸ್ತೆ ದುರಸ್ತಿಗೆ ಇಳಿಯುವ ಮೂಲಕ ವ್ಯವಸ್ಥೆಗೆ ಚಾಟಿ ಬೀಸಿದ್ದಾರೆ.
ಕಳಸದಿಂದ ಐದಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ಪ್ರಮುಖ ರಸ್ತೆ ಹಳ್ಳಿಗರ ದೈನಂದಿನ ಬದುಕಿಗೆ ಅತ್ಯಂತ ಅನಿವಾರ್ಯವಾಗಿದೆ. ಆದರೆ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿನಿತ್ಯ 8 ರಿಂದ 10 ಕಿಲೋಮೀಟರ್ ನಡೆದುಕೊಂಡೇ ಬರಬೇಕಾದ ದುಸ್ಥಿತಿ ಇದೆ.
ಅದರಲ್ಲೂ ಮಳೆಗಾಲದಲ್ಲಿ ದಾಖಲೆ ಮಳೆ ಬೀಳುವ ಕಳಸ ತಾಲೂಕಿನಲ್ಲಿ ಈ ಭಾಗದ ಪರಿಸ್ಥಿತಿ ಮತ್ತಷ್ಟು ಭೀಕರವಾಗುತ್ತದೆ. ತುರ್ತು ಸಂದರ್ಭ ಎದುರಾದರೆ ಗ್ರಾಮಕ್ಕೆ ಬರಲು ಯಾವುದೇ ವಾಹನ ಸವಾರರು ಸಿದ್ಧರಿರುವುದಿಲ್ಲ. ಇಷ್ಟೇ ಅಲ್ಲದೆ, ವಿದ್ಯುತ್ ಇಲ್ಲದ ಸಮಯದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಯಾರಿಗಾದರೂ ಕರೆ ಮಾಡೋಣ ಎಂದರೆ ನೆಟ್ವರ್ಕ್ ಕೂಡ ಸಿಗುವುದಿಲ್ಲ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಪ್ರತಿ ವರ್ಷ ಜನಪ್ರತಿನಿಧಿಗಳಿಗೆ ಮನವಿ ಮಾಡಿ ಸುಸ್ತಾಗಿರುವ ಮಲೆನಾಡಿಗರು, ಪ್ರತಿ ಮಳೆಗಾಲದಲ್ಲೂ ತಾವೇ ರಸ್ತೆಯನ್ನು ದುರಸ್ತಿ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಈ ಬಾರಿಯೂ ವ್ಯವಸ್ಥೆಯನ್ನು ನಂಬಿ ಪ್ರಯೋಜನವಿಲ್ಲ ಎಂದು ಅರಿತು, ಇಡೀ ಹಳ್ಳಿಗರೆಲ್ಲ ಒಟ್ಟಾಗಿ ಸೇರಿ ರಸ್ತೆಯ ಗುಂಡಿಗಳನ್ನು ಮುಚ್ಚಿ ಸಂಚಾರ ಯೋಗ್ಯವಾಗಿ ಮಾಡಿಕೊಂಡಿದ್ದಾರೆ.
Malnadi residents outraged by government negligence
Leave a comment