ಕಡೂರು: ಅಪಘಾತದಲ್ಲಿ ಯುವಕ ಸಾವನ್ನಪ್ಪಿದ್ದ ಎಂದು ಭಾವಿಸಿದ್ದ ಪ್ರಕರಣ ತಿರುವು ಪಡೆದುಕೊಂಡಿದ್ದು, ಹಣದ ವಿಷಯಕ್ಕೆ ಸ್ನೇಹಿತನೇ ಕೊಲೆ ಮಾಡಿರುವುದನ್ನು ಸಖರಾಯಪಟ್ಟಣ ಪೊಲೀಸರು ಪತ್ತೆ ಮಾಡಿದ್ದಾರೆ.
ಜೂನ್ 13ರ ರಾತ್ರಿ ಸಖರಾಯಪಟ್ಟಣ ಪೊಲೀಸ್ ಠಾಣಾ ಸರಹದ್ದಿನ ಹಿರೇಗೌಜ ಪೆಟ್ರೋಲ್ ಬಂಕ್ ಬಳಿ ಗಾಯಗೊಂಡ ಸ್ಥಿತಿಯಲ್ಲಿ ಹಾಸನದ ಯಶವಂತ (22) ಎಂಬ ಯುವಕ ಬಿದ್ದಿದ್ದರು. ಬಳಿಕ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದರು. ಅಪಘಾತಕ್ಕೆ ಸಂಬಂಧಿಸಿದ ಸರಕು ಸಾಗಣೆ ವಾಹನವನ್ನೂ ಪೊಲೀಸರು ಜಪ್ತಿ ಮಾಡಿದ್ದರು. ಕುಟುಂಬದವರು ಸಹ ಅಪಘಾತ ಎಂದೇ ಭಾವಿಸಿದ್ದರು.
‘ಮೊದಲೇ ರಸ್ತೆಯಲ್ಲಿ ಬಿದ್ದಿದ್ದ ಯುವಕನ ಮೇಲೆ ವಾಹನ ಹತ್ತಿಸುವುದನ್ನು ತಪ್ಪಿಸುವಾಗ ನನ್ನ ವಾಹನ ಅಪಘಾತಕ್ಕೆ ಈಡಾಯಿತು’ ಎಂದು ಸರಕು ಸಾಗಣೆ ವಾಹನ ಚಾಲಕ ನೀಡಿದ ಮಾಹಿತಿ ಆಧರಿಸಿ ಕಡೂರು ಇನ್ಸ್ಪೆಕ್ಟರ್ ರಫೀಕ್ ಮತ್ತು ಸಖರಾಯಪಟ್ಟಣ ಪಿಎಸ್ಐ ಪವನ್ ತನಿಖೆ ಆರಂಭಿಸಿದರು.
ಅವಘಡ ನಡೆದ ದಿನ ಯಶಂವತ ತನ್ನ ತಾಯಿಗೆ ಕರೆ ಮಾಡಿ ಬೈಕ್ ಕಂತಿನ ಹಣ ಪಡೆಯಲು ಅಜ್ಜಂಪುರಕ್ಕೆ ತೆರಳುತ್ತಿರುವುದಾಗಿ ಹೇಳಿದ್ದರು. ಅಜ್ಜಂಪುರದ ಪುನೀತ್ ಬಳಿ ವಿಚಾರಿಸಿದಾಗ ಕಂತಿನ ಹಣದ ಚೆಕ್ ನೀಡಿರುವುದಾಗಿ ತಿಳಿಸಿದ್ದು, ಜತೆಗೆ ಸಚಿನ್ ಎಂಬ ಸ್ನೇಹಿತ ಇದ್ದ ಎಂಬ ಮಾಹಿತಿ ನೀಡಿದ್ದರು.
ಸಖರಾಯಪಟ್ಟಣ, ಚಿಕ್ಕಮಗಳೂರು, ಅಜ್ಜಂಪುರದ ವಿವಿಧೆಡೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಪರಿಶೀಲಿಸಿದಾಗ ಯಶವಂತ ಮತ್ತು ಸಚಿನ್ ಚಿಕ್ಕಮಗಳೂರಿನ ಮದ್ಯದ ಅಂಗಡಿಗಳಿಗೆ ತೆರಳಿ ಮದ್ಯ ಸೇವನೆ ಮಾಡಿರುವುದು ಪತ್ತೆಯಾಗಿತ್ತು. ಚಿಕ್ಕಮಗಳೂರಿನ ಲಾಡ್ಜ್ ಒಂದರಲ್ಲಿ ಕೊಠಡಿ ಪಡೆಯಲು ಕೇಳಿದ್ದು, ವಿಪರೀತ ಪಾನಮತ್ತರಾಗಿದ್ದ ಕಾರಣ ಕೊಠಡಿ ನೀಡಲು ವಸತಿಗೃಹದವರು ನಿರಾಕರಿಸಿದ್ದರು.
ಬಳಿಕ ಸ್ಕೂಟರ್ನಲ್ಲಿ ಇಬ್ಬರೂ ಸಖರಾಯಪಟ್ಟಣ ಕಡೆ ರಾತ್ರಿ ಇಬ್ಬರೂ ತೆರಳಿದ್ದು, ಕೆಲ ಗಂಟೆಗಳ ನಂತರ ಅದೇ ಸ್ಕೂಟರ್ನಲ್ಲಿ ಸಚಿನ್ ಒಬ್ಬನೇ ವಾಪಸ್ ಬಂದಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿತ್ತು. ಸಚಿನ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.
ಸಚಿನ್ಗೆ ಯಶವಂತ ₹28 ಸಾವಿರ ಹಣ ಕೊಡಬೇಕಿತ್ತು. ಈ ವಿಷಯಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ರಸ್ತೆ ಮಧ್ಯದಲ್ಲಿ ಮೂತ್ರ ವಿಸರ್ಜನೆಗೆ ನಿಲ್ಲಿಸಿದಾಗ ಜಗಳ ನಡೆದು ಸ್ಕೂಡ್ರೈವರ್ನಿಂದ ಯಶವಂತಗೆ ತಿವಿದು ರಸ್ತೆಗೆ ತಲೆ ಜಜ್ಜಿ ಚೆಕ್ ಮತ್ತು ಬ್ಯಾಗ್ ತೆಗೆದುಕೊಂಡು ಹೋಗಿದ್ದನ್ನು ಸಚಿನ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾರಿಯಲ್ಲಿ ಬಂದ ಆಂಬುಲೆನ್ಸ್ ಚಾಲಕ ಗಾಯಾಳುವನ್ನು ಚಿಕ್ಕಮಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಆತನ ಗಾಯಗಳಿಗೆ ಚಿಕಿತ್ಸೆ ನೀಡಿ ಬ್ಯಾಂಡೇಜ್ ಮಾಡಿದ್ದರಿಂದ ಮರಣೋತ್ತರ ಪರೀಕ್ಷೆ ವೇಳೆಯೂ ಸತ್ಯ ಗೊತ್ತಾಗಿರಲಿಲ್ಲ. ಮೃತನ ಪೋಷಕರು ಅಪಘಾತ ಪ್ರಕರಣ ದಾಖಲಿಸಲು ಮುಂದಾಗಿದ್ದರು. ಆ ವೇಳೆ ಮನವೊಲಿಸಿ ತನಿಖೆ ನಡೆಸಲಾಯಿತು.
ಮೃತನ ತಾಯಿ ರೂಪಾ, ಅಕ್ಕ ಶುಭಾ ಮತ್ತು ಸಂಬಂಧಿ ಭಾಗ್ಯಾ ಪೊಲೀಸ್ ಠಾಣೆಗೆ ತೆರಳಿ ಸತ್ಯ ಬಯಲಿಗೆ ಎಳೆದ ಇನ್ಸ್ಪೆಕ್ಟರ್ ರಫೀಕ್ ಮತ್ತು ಪಿಎಸ್ಐ ಪವನ್ ಅವರನ್ನು ಅಭಿನಂದಿಸಿದರು.
Friend murdered over money in Sakharayapattana
Leave a comment