ಚಿಕ್ಕಮಗಳೂರು: ಕಾಫಿನಾಡಿನ ಮೆಡಿಕಲ್ ಮಾಲೀಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ನಕಲಿ ಐಎಎಸ್ ಅಧಿಕಾರಿ ಮಿಥುನ್ ವಂಚನೆಯ ಒಂದೊಂದೇ ಕರಾಳ ಮುಖಗಳು ಈಗ ಬಯಲಾಗುತ್ತಿವೆ. ಕೇವಲ ಉದ್ಯಮಿಗಳನ್ನಷ್ಟೇ ಅಲ್ಲದೆ, ಕಾನೂನು ಅರಿವಿರುವ ವಕೀಲರನ್ನೂ ಈತ ತನ್ನ ಮಾತುಗಳಿಂದ ಬುಟ್ಟಿಗೆ ಹಾಕಿಕೊಂಡಿರುವುದು ಈಗ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಿವಾಸಿ ಹಾಗೂ ಹಿರಿಯ ವಕೀಲ ಸುನಿಲ್ ಕುಮಾರ್ ಅವರಿಗೆ ಐದು ತಿಂಗಳ ಹಿಂದೆ ಮೇಘನ ಎಂಬಾಕೆ ಪರಿಚಯವಾಗಿದ್ದರು. ಸಿವಿಲ್ ಪ್ರಕರಣವೊಂದರ ಸಂಬಂಧ ವಕೀಲರ ಕಚೇರಿಗೆ ಬಂದಿದ್ದ ಮೇಘನ, ತನ್ನ ಜೊತೆಯಲ್ಲಿ ಮಿಥುನ್ ಸಿ.ಆರ್. ಎಂಬಾತನನ್ನು ಕರೆತಂದಿದ್ದರು. ಈತ ಐಎಎಸ್ ಅಧಿಕಾರಿಯಾಗಿ ನೇಮಕಗೊಂಡಿದ್ದಾನೆ ಎಂದು ಸುಳ್ಳು ಹೇಳಿ ಪರಿಚಯಿಸಿದ್ದರು.
ತಾನು ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ನಂಬಿಸಲು ಮಿಥುನ್ ಅತ್ಯಂತ ಚಾಣಾಕ್ಷತನ ಪ್ರದರ್ಶಿಸಿದ್ದ. ವಕೀಲರ ಮುಂದೆ ನಕಲಿ ಐಡಿ ಕಾರ್ಡ್ಗಳು, ಸುಳ್ಳು ಸ್ಯಾಲರಿ ಸರ್ಟಿಫಿಕೇಟ್ಗಳು ಹಾಗೂ ತರಬೇತಿಗೆ ಹಾಜರಾಗುವಂತೆ ಸರ್ಕಾರದಿಂದ ಬಂದಿರುವಂತೆ ಸೃಷ್ಟಿಸಲಾಗಿದ್ದ ನಕಲಿ ಪತ್ರಗಳನ್ನು ತೋರಿಸಿ ವಿಶ್ವಾಸ ಗಳಿಸಿದ್ದ.
ಇದನ್ನೇ ಬಂಡವಾಳ ಮಾಡಿಕೊಂಡು ಮನೆ ಕಟ್ಟುವ ನೆಪ ಹಾಗೂ ತುರ್ತು ಆರ್ಥಿಕ ಅಗತ್ಯಗಳ ಹೆಸರಿನಲ್ಲಿ ಮಿಥುನ್ ಮತ್ತು ಮೇಘನ ಜೋಡಿ ವಕೀಲ ಸುನಿಲ್ ಕುಮಾರ್ ಅವರಿಂದ ಹಂತ ಹಂತವಾಗಿ 3,35,000 ರೂಪಾಯಿ ಹಣ ಪಡೆದಿದ್ದರು.
ಅಷ್ಟೇ ಅಲ್ಲದೆ, ವಕೀಲರ ಮೂಲಕ ಅವರ ಸ್ನೇಹಿತರಿಂದಲೂ ಸುಮಾರು 65 ಸಾವಿರ ರೂಪಾಯಿಗಳನ್ನು ಕೊಡಿಸಿ ವಂಚಿಸಿದ್ದರು. ಕಳೆದ ತಿಂಗಳು ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಥುನ್ ನಕಲಿ ಐಎಎಸ್ ಅಧಿಕಾರಿ ಎಂಬ ಕಾರಣಕ್ಕೆ ಸಿಕ್ಕಿಬಿದ್ದಾಗ ಆತನ ಅಸಲಿ ಬಣ್ಣ ಬಯಲಾಗಿದೆ.
ಸದ್ಯ ವಕೀಲರ ದೂರಿನ ಮೇರೆಗೆ ಮೇಘನ ಹಾಗೂ ಮಿಥುನ್ ಸಿ.ಆರ್ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
Lawyers cheated by fake IAS officer Mithun Chakraborty
Leave a comment