ಚಿಕ್ಕಮಗಳೂರು: ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೋಟ್ಯಂತರ ರೂಪಾಯಿ ವಂಚನೆ ನಡೆದಿರುವ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರದೀಪ್ ಹೆಚ್.ಇ ಎಂಬುವವರು ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದ್ದು, ತಮ್ಮದೇ ಕಂಪನಿಯ ಸಹ-ನಿರ್ದೇಶಕರಾದ ಸಿ.ಹೆಚ್. ಪ್ರದೀಪ್ ಮತ್ತು ಇತರರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ದೂರಿನ ಸಾರಾಂಶದ ಪ್ರಕಾರ, ‘i2e ರಿಟೇಲಿಂಗ್ ಪ್ರೈವೇಟ್ ಲಿಮಿಟೆಡ್’ ಕಂಪನಿಯ ಮೂಲಕ ಚಿಕ್ಕಮಗಳೂರಿನ ನೆಲ್ಲೂರು ಗ್ರಾಮದಲ್ಲಿ ‘ವೆಂಕಟಾದ್ರಿ ಎನ್ಪ್ಲೇವ್’ ಎಂಬ ಬಡಾವಣೆಯನ್ನು ನಿರ್ಮಿಸಲಾಗಿತ್ತು. ಕಂಪನಿಯಲ್ಲಿ ಶೇಕಡಾ 50ರಷ್ಟು ಪಾಲು ಹೊಂದಿದ್ದ ಸಿ.ಹೆಚ್. ಪ್ರದೀಪ್ ಅವರಿಗೆ ಬ್ಯಾಂಕ್ ವ್ಯವಹಾರಗಳ ಸಹಿ ಹಾಕುವ ಅಧಿಕಾರ ನೀಡಲಾಗಿತ್ತು.
ಈ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ಆರೋಪಿತರು, ಕಂಪನಿಯ ಖಾತೆಯಲ್ಲಿದ್ದ ಸುಮಾರು 2 ಕೋಟಿ 35 ಲಕ್ಷ ರೂಪಾಯಿಗಳನ್ನು ಕಾನೂನುಬಾಹಿರವಾಗಿ ತಮ್ಮ ಹಾಗೂ ತಮ್ಮ ಕುಟುಂಬದವರ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಲ್ಲದೆ, ಕಂಪನಿಯ ಲೆಕ್ಕಪರಿಶೋಧಕರಾದ ಯಕ್ಕಾರ್ ಅಶ್ವತ್ ಶೇಣೈ ಮತ್ತು ಅಕೌಂಟೆಂಟ್ ಸುನಿಲ್ ಕುಮಾರ್ ಅವರು ಕೂಡ ಈ ವಂಚನೆಯಲ್ಲಿ ಕೈಜೋಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇವರು ಕಂಪನಿಯ ಲೆಕ್ಕಪತ್ರಗಳನ್ನು ತಿದ್ದಿ ಮೋಸ ಎಸಗಿದ್ದಾರೆ ಎಂಬ ವಿಚಾರ ಇತ್ತೀಚೆಗೆ ಬ್ಯಾಂಕ್ ಸ್ಟೇಟ್ಮೆಂಟ್ ಪರಿಶೀಲಿಸಿದಾಗ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ನಂಬಿಕೆ ದ್ರೋಹ, ದಾಖಲೆಗಳ ತಿದ್ದುಪಡಿ ಹಾಗೂ ಹಣಕಾಸಿನ ವಂಚನೆ ಅಡಿಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Fraud of crores of rupees in real estate business
Leave a comment