ಚಿಕ್ಕಮಗಳೂರು: ಆಸ್ಪತ್ರೆಗೆ ರೋಗಿಗಳ ಅನುಕೂಲಕ್ಕಾಗಿ ಸಂಸ್ಥೆಯೊಂದರಿಂದ ಖರೀದಿಸಿದ ನೀರು ಪೂರೈಕೆಯ ಯಂತ್ರ ಕೈಕೊಟ್ಟಾಗ ದುರಸ್ತಿಗೆ ಮುಂದಾಗದೆ ಸೇವಾ ನ್ಯೂನತೆ ಎಸಗಿದ ಹಿನ್ನೆಲೆಯಲ್ಲಿ ಸಂಸ್ಥೆಯ ವಿರುದ್ಧ ತೀರ್ಪು ನೀಡಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಕೂಡಲೇ ಯಂತ್ರ ದುರಸ್ತಿ ಮಾಡಿಕೊಡುವಂತೆ ಆದೇಶ ನೀಡಿದೆ.
ನಗರದ ಮಲ್ಲಂದೂರು ರಸ್ತೆಯ ಚೇತನ ನರ್ಸಿಂಗ್ ಹೋಂನ ಡಾ.ಕುಚೇಂದ್ರ ಹೆಚ್,ಜಿ. ಅವರು ರೋಗಿಗಳ ಅನುಕೂಲಕ್ಕಾಗಿ ಬೆಂಗಳೂರು ಬೊಮ್ಮಸಂದ್ರ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮೆ| ಯುರೇಖಾ ಫಾರ್ಬಸ್ ಲಿಮಿಟೆಡ್ ಸಂಸ್ಥೆಯಿಂದ ಶುದ್ಧವಾದ ಬಿಸಿ ಹಾಗೂ ತಂಪಾದ ನೀರು ಪೂರೈಸುವ ಯಂತ್ರವನ್ನು ಖರೀದಿಸಿ ಆಸ್ಪತ್ರೆಯಲ್ಲಿ ಅಳವಡಿಸಿದ್ದರು. ಜೊತೆಗೆ ವಾರ್ಷಿಕ ನಿರ್ವಹಣೆ ಹಾಗೂ ದುರಸ್ತಿ ಸಲುವಾಗಿ ಸಹ ಡಾ.ಕುಚೇಂದ್ರ ಸಂಸ್ಥೆಗೆ ಹಣ ಪಾವತಿಸಿದ್ದರು.
ಈ ನಡುವೆ ಯಂತ್ರದಲ್ಲಿ ಬಿಸಿನೀರು ಪೂರೈಕೆಯಾಗದೆ ಸಮಸ್ಯೆ ಉಂಟಾಗಿದ್ದು, ಈ ಬಗ್ಗೆ ಸಂಸ್ಥೆಗೆ ತಿಳಿಸಿ ಯಂತ್ರವನ್ನು ದುರಸ್ತಿಪಡಿಸಿಕೊಡುವಂತೆ ಕೋರಿದ್ದರೂ ಸಂಸ್ಥೆಯವರು ಯಾವುದೇ ಕ್ರಮ ಕೈಗೊಳ್ಳದೆ ಸೇವಾ ನ್ಯೂನತೆ ಎಸಗಿದ್ದರೆನ್ನಲಾಗಿದೆ. ಈ ಬಗ್ಗೆ ಡಾ.ಕುಚೇಂದ್ರ ಅವರು ಕಳೆದ ಜನವರಿ ೮ ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.
ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಆಯೋಗವು, ಚೇತನ ನರ್ಸಿಂಗ್ ಹೋಂಗೆ ಪೂರೈಸಿರುವ ಶುದ್ಧ ನೀರಿನ ಘಟಕದ ಬಿಸಿನೀರು ಪೂರೈಕೆ ಸಾಮಗ್ರಿಯನ್ನು ಬದಲಾಯಿಸಿ, ಯಂತ್ರವನ್ನು ಕೂಡಲೇ ದುರಸ್ತಿ ಮಾಡಿಕೊಡುವುದಲ್ಲದೆ, ವಾರ್ಷಿಕ ನಿರ್ವಹಣೆ ಮತ್ತು ದುರಸ್ತಿಗಾಗಿ ಪಡೆದ ಮೊತ್ತ ೧೬,೩೯೯ ರೂ.ಗಳನ್ನು ದೂರುದಾರರಿಗೆ ಮರಳಿಸುವಂತೆ ಮತ್ತು ಪರಿಹಾರವಾಗಿ ೧೦,೦೦೦ ರೂ. ಹಾಗೂ ಪ್ರಕರಣದ ಖರ್ಚು-ವೆಚ್ಚಕ್ಕಾಗಿ ೫,೦೦೦ ರೂ.ಗಳನ್ನು ಡಾ.ಕುಚೇಂದ್ರ ಅವರಿಗೆ ಪಾವತಿಸುವಂತೆ ಸಂಸ್ತೆಗೆ ಸೂಚಿಸಿದೆ. ತೀರ್ಪನ್ನು ೪೫ ದಿನಗಳೊಳಗಾಗಿ ಪಾಲಿಸಬೇಕಿದ್ದು, ತಪ್ಪಿದಲ್ಲಿ ತೀರ್ಪಿನಲ್ಲಿರುವ ಮೊತ್ತವನ್ನು ಪಾವತಿಸುವವರೆಗೆ ವಾರ್ಷಿಕ ಶೇ.೬ ರ ಬಡ್ಡಿಯನ್ನು ನೀಡುವಂತೆ ಆದೇಶಿಸಿದೆ.
ಆಯೋಗದ ಅಧ್ಯಕ್ಷರಾದ ಎನ್.ಆರ್.ಚೆನ್ನಕೇಶವ, ಸದಸ್ಯರಾದ ಈ.ಪ್ರೇಮಾ ಮತ್ತು ಡಾ.ಮಂಜುನಾಥ ಎಂ.ಬಮ್ಮನಕಟ್ಟಿ ಅವರು ಈ ಆದೇಶವನ್ನು ನೀಡುವ ಮೂಲಕ ಸೇವಾ ನ್ಯೂನತೆ ಆಗಿರುವುದನ್ನು ಪುರಾವೆ ಸಹಿತ ಸಾಬೀತುಪಡಿಸಿದ್ದು, ಗ್ರಾಹಕರಿಗೆ ನ್ಯಾಯ ಒದಗಿಸಿ ಹಿತರಕ್ಷಣೆ ಮಾಡಲಾಗಿದೆ ಎಂದು ಜಿಲ್ಲಾ ಆಯೋಗದ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿ ಇಂದುಮತಿ ಬಾಯಿ ಬಿ.ಆರ್. ಆಯೋಗದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Consumer Disputes Redressal Commission’s ruling to rectify service deficiencies
Leave a comment