ಚಿಕ್ಕಮಗಳೂರು: ನಗರದಲ್ಲಿ ಶನಿವಾರ ಮಧ್ಯಾಹ್ನ ಅರ್ಧಗಂಟೆಗೂ ಹೆಚ್ಚುಕಾಲ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ನಗರದ ಎಂ.ಜಿ ರಸ್ತೆ, ಬಸ್ ನಿಲ್ದಾಣ, ಎಐಟಿ ವೃತ್ತ, ಕಲ್ಯಾಣನಗರ, ಹಿರೇಮಗಳೂರು ಸೇರಿದಂತೆ ನಗರ ಹೊರವಲಯವಾದ ಅಲ್ಲಂಪುರ, ಮೂಗುತ್ತಿಹಳ್ಳಿ, ಶಿರಗುಂದ, ಅಲದಗುಡ್ಡೆ ಭಾಗದಲ್ಲಿ ಬಿರುಗಾಳಿ ಸಹಿತ ಉತ್ತಮ ಮಳೆಯಾಗಿದೆ.
ಗಾಳಿ ಸಹಿತ ಮಳೆಗೆ ಚಿಕ್ಕಮಗಳೂರು ಮೂಡಿಗೆರೆ ಹೆದ್ದಾರಿ ಕೆಳಗೂರು ಸಮೀಪ ಮರ ಧರೆಗುರುಳಿ ಹೆದ್ದಾರಿ ಸಂಚಾರ ಬಂದ್ ಮಾಡಲಾಗಿತ್ತು. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಕೆಳಗೂರಿನಿಂದ ವಾಪಸ್ ತೆರಳಿ ಆಲ್ಲೂರು ಮೂಲಕ ಮೂಡಿಗೆರೆ ತಲುಪಿದವು.
ಬೃಹತ್ ಮರ ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮ ಕೆಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಹೆದ್ದಾರಿ ಬಂದ್ ಮಾಡಿದ ಪರಿಣಾಮ ಕೆಲಹೊತ್ತು ಕೆಳಗೂರು ಬಳಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಈ ಮಾರ್ಗವಾಗಿ ಸಂಚಾರ ಮಾಡುವ ಮೂಡಿಗೆರೆ, ಧರ್ಮಸ್ಥಳ, ಉಜಿರೆ, ಮಂಗಳೂರು ಪ್ರಯಾಣಿಕರಿಗೆ ಸಂಚಾರ ವ್ಯತ್ಯಯವಾಗಿತ್ತು.
ಮೂಡಿಗೆರೆ ತಾಲ್ಲೂಕಿನಾದ್ಯಂತ ಶನಿವಾರ ಮಧ್ಯಾಹ್ನ ಧಾರಾಕಾರ ಮಳೆಯಾಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಬೆಳಿಗ್ಗೆ 7ಕ್ಕೆ ಪ್ರಾರಂಭವಾದ ಮಳೆ ಒಂದು ಗಂಟೆಗೂ ಅಧಿಕ ಕಾಲ ಸುರಿಯಿತು. ಬಳಿಕ ಬಿಡುವು ನೀಡಿದ ಮಳೆಯು, ಮಧ್ಯಾಹ್ನ 2ಕ್ಕೆ ಮತ್ತೆ ಪ್ರಾರಂಭವಾಗಿ ಸಂಜೆ 4ರವರೆಗೂ ಗುಡುಗು ಸಿಡಿಲು ಗಾಳಿಯೊಂದಿಗೆ ಆರ್ಭಟಿಸಿತು.
ಪಟ್ಟಣ ಸೇರಿದಂತೆ ಬಣಕಲ್, ಕೊಟ್ಟಿಗೆಹಾರ, ಗುತ್ತಿ, ಮೂಲರಹಳ್ಳಿ, ದೇವರುಂದ, ಹಂತೂರು, ಕುಂದೂರು, ನಿಡುವಾಳೆ, ಬಾಳೂರು ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿತ್ತು.
ಮಳೆಯಿಂದ ಕಾಫಿ ತೋಟಗಳಲ್ಲಿ ಹಲವೆಡೆ ಮರಗಳು ಧರೆಗುರುಳಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಬೆಳಿಗ್ಗೆಯೇ ಮಳೆ ಕಾಣಿಸಿಕೊಂಡಿದ್ದರಿಂದ ಕಾಫಿ ತೋಟದ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು ರಜೆ ಹಾಕಿದ್ದರು.
Heavy rain accompanied by thunderstorms in the district
Leave a comment