ಚಿಕ್ಕಮಗಳೂರು: ಜಾನಪದ ಕ್ಷೇತ್ರದಲ್ಲಿ ನಮ್ಮ ನಾಡು ಹಿಂದೆ ಬಿದ್ದಿಲ್ಲ. ಕಂಸಾಳೆ ನೃತ್ಯವು ಮೈಸೂರು ಭಾಗದಲ್ಲಿ ವಿಶೇಷ ಮನ್ನಣೆ ಪಡೆದುಕೊಂಡಿದೆ. ನಾಡಿನ ಅನೇಕ ಜಿಲ್ಲೆಗಳಲ್ಲಿ ದೈವರಾಧನೆ, ಬೂತರಾಧನೆ ಪೂಜಾ ಪದ್ಧತಿ ವಿಶೇಷತೆ ಹೊಂದಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು.
ನಗರದ ಕೀರ್ತಿಕೃಷ್ಣ ಸಭಾಂಗಣದಲ್ಲಿ ಕಸಾಪ ಮಹಿಳಾ ತಾಲ್ಲೂಕು, ನಗರ, ಹೋಬಳಿ ಘಟಕ, ಆಶಾಕಿರಣ ಚಾರಿಟೇಬಲ್ ಟ್ರಸ್ಟ್ ಮತ್ತು ಆಶ್ರಯ ಫೌಂಡೇಷನ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ಧ ಪುಟಾಣಿ ಮಕ್ಕಳಿಗೆ ಉಚಿತ ಆರೋಗ್ಯ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮದೇ ಜಿಲ್ಲೆಯವರಾದ ಕೃಷ್ಣಶಾಸ್ತ್ರಿ, ಕುವೆಂಪು ನಾಡು, ನುಡಿಯ ಕೀರ್ತಿ ಹೆಚ್ಚಿಸಿದ್ದಾರೆ. ನಾಡಗೀತೆ ಹರಿಕಾರ ಕುವೆಂಪು ರಾಷ್ಟ್ರದ ಸಮಗ್ರ ಇತಿಹಾಸ, ನಾಡಿನ ನದಿಮೂಲಗಳು, ಸರ್ವ ಧರ್ಮದ ಶಾಂತಿತೋಟ ವರ್ಣನೆಯನ್ನು ಗೀತೆಗಳ ಸಾಲಿನಲ್ಲಿ ಸಾಹಿತ್ಯಾತ್ಮಕವಾಗಿ ಅಡಕಗೊಳಿಸಿ ಭಾಷೆಯ ಸಂಸ್ಕೃತಿ ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು.
ಕಸಾಪ ಸಾಹಿತ್ಯಾತ್ಮಕ ಚಟುವಟಿಕೆ, ಕಲೆ, ಸಂಗೀತ ಕ್ಷೇತ್ರಕ್ಕೆ ಸೀಮಿತಗೊಳ್ಳದೇ ಆರೋಗ್ಯ ಮೇಳವನ್ನು ಆಯೋಜಿಸಿ ಬಡವ ಹಾಗೂ ಮಧ್ಯಮ ವರ್ಗದ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಪುಟಾಣಿ ಮಕ್ಕಳ ಹೃದಯ ಸಂಬಂಧಿತ ತಪಾಸಣೆಗೆ ಒಳ್ಳೆಯ ಕಾರ್ಯಕ್ರಮ. ಆ ನಿಟ್ಟಿನಲ್ಲಿ ತಾವು ಕೂಡಾ ಮಕ್ಕಳಿಗೆ ತಪಾಸಣೆಯಲ್ಲಿ ಆರೋಗ್ಯ ಚಿಕಿತ್ಸೆ ಕಂಡುಬಂದಲ್ಲಿ ವಾಹನದ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ ಮಾತನಾಡಿ, ಒಂದೇ ಸೂರಿನಡಿ ಹೃದಯ ಸಂಬಂಧಿಸಿದ ಕಾಯಿಲೆಗೆ ತಪಾಸಣೆ ನಡೆಸುವುದು ಉತ್ತಮ ಬೆಳವಣಿಗೆ. ಪಾಲಕರು ಕೂಡಾ ಬಾಲ್ಯದಿಂದಲೇ ಮಕ್ಕಳಿಗೆ ಸಣ್ಣಪುಟ್ಟ ಆರೋಗ್ಯ ನ್ಯೂನ್ಯತೆ ಕಂಡಲ್ಲಿ ಅಕ್ಕಪಕ್ಕದ ಜನರ ಮಾತಿಗೆ ಒಪ್ಪಿಕೊಳ್ಳದೇ ಶೀಘ್ರವೇ ವೈದ್ಯರ ಸಲಹೆ ಪಡೆದಲ್ಲಿ ಮಕ್ಕಳ ಆರೋಗ್ಯವು ಭವಿಷ್ಯದಲ್ಲಿ ವೃದ್ದಿಯಾಗಲಿದೆ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಮಕ್ಕಳು ನೋವು ಅನುಭವಿಸಿದರೆ ಇಡೀ ಕುಟುಂಬವೇ ದುಃಖಕ್ಕೆ ಒಳಗಾಗುತ್ತದೆ. ಹೀಗಾಗಿ ತಪಾಸಣೆಯಲ್ಲಿ ಭಾಗಿಯಾದ ಕುಟುಂಬಗಳು ಮಕ್ಕಳಿಗೆ ಸೂಕ್ತ ರೀತಿ ತಪಾಸಣೆ ನಡೆಸಿ ನಿಗಾವಹಿಸುವುದು ಮೂಲ ಕರ್ತವ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಶಾಕಿರಣ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣಗೌಡ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ಬಾಬು, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸೀಮಾ, ಆರ್ಸಿಹೆಚ್ ಅಧಿಕಾರಿ ಡಾ.ಮಂಜುನಾಥ್, ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ತಿಮ್ಮರಾಜು, ನಗರಸಭೆ ಸದಸ್ಯೆ ಉಮಾದೇವಿ ಕೃಷ್ಣ, ಆಶ್ರಯ ಪೌಂಡೇಷನ್ ಸಂಸ್ಥಾಪಕಿ ಡಾ. ವರ್ಷಾ ಅಭಿಷೇಕ್, ಕಸಾಪ ಮಹಿಳಾ ತಾಲ್ಲೂಕು ಅಧ್ಯಕ್ಷೆ ವಿಜಯಲಕ್ಷಿ, ನಗರಾಧ್ಯಕ್ಷೆ ರೂಪನಾಯ್ಕ್, ತಾಲ್ಲೂಕು ಅಧ್ಯಕ್ಷ ಲೋಕೇಶಪ್ಪ, ಕಸಾಪ ಹೋಬಳಿ ಅಧ್ಯಕ್ಷೆ ವೀಣಾ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.
ಇದೇ ವೇಳೆ ಸುಮಾರು ೮೮ ಮಕ್ಕಳು ತಪಾಸಣೆಗೆ ಒಳಗಾದರು.
Our country has not fallen behind in the field of folklore.
Leave a comment