ಚಿಕ್ಕಮಗಳೂರು: ವಿಶ್ವದಲ್ಲಿ ಶಾಂತಿ ಹಾಗೂ ಜ್ಞಾನದ ಜ್ಯೋತಿ ಬೆಳಗಿಸಿ ಕೋಟಿ ಕೋಟಿ ಹೃದಯಗಳನ್ನು ಗೆದ್ದವರು ಗೌತಮ ಬುದ್ಧ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಜಿಲ್ಲಾಡಳಿತ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಭಗವಾನ್ ಗೌತಮ ಬುದ್ಧ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
6ನೇ ಶತಮಾನದಲ್ಲಿ ರಾಜ ಶುದ್ಯೋದನ, ಮಾಯಾದೇವಿ ದಂಪತಿಯ ಮಗನಾಗಿ ರಾಜ ಕುಟುಂಬದಲ್ಲಿ ಜನಿಸಿದ ಸಿದ್ಧಾರ್ಥ ಅವರು ಸಮಾಜಕ್ಕಾಗಿ ಎಲ್ಲವನ್ನು ತ್ಯಜಿಸಿದರು ಎಂದರು.
ರೋಗಿಗಳು, ಮುಪ್ಪಿನಲ್ಲಿ ಇದ್ದವರು, ಮೃತಪಟ್ಟವರನ್ನು ಬುದ್ಧ ನೋಡುತ್ತಾರೆ. ಇವೆಲ್ಲವೂ ಬದುಕಿನ ನಿಶ್ಚಿತ ಎನಿಸಿದಾಗ ರಾಜ ವೈಭೋಗ ತ್ಯಜಿಸುತ್ತಾರೆ. ಆಶ್ರಮದಲ್ಲಿ ಯೋಗ, ಜ್ಞಾನ ಕಲಿತು ಅದರ ಫಲವನ್ನು ಸಮಾಜದ ಬಾಂಧವರಿಗೆ ಹಂಚುವ ಹಂಬಲದೊಂದಿಗೆ ತಪ್ಪಸ್ಸು ಮಾಡುತ್ತಾರೆ.
ಬೋಧಿ ವೃಕ್ಷದ ಕೆಳಗೆ ಅವರಿಗೆ ಜ್ಞಾನೋದಯವಾಯಿತು. ಅಂದು ಅವರು ಗೌತಮ ಬುದ್ಧದಾದರು ಎಂದು ಹೇಳಿದರು.
ಬುದ್ಧರು ಆಸೆಯೇ ದುಃಖದ ಮೂಲ ಎಂದು ಹೇಳುತ್ತಾರೆ. ಅಷ್ಟಾಂಗ ಮಾರ್ಗವನ್ನು ಅವರು ಹೇಳುತ್ತಾರೆ. ಇದರಿಂದ ಶಾಂತಿಯ ಮಾರ್ಗವನ್ನು ಕಂಡುಕೊಳ್ಳಬಹುದು. ಶಾಂತಿ, ಪ್ರೀತಿ, ಕರುಣೆ ಮೈತ್ರಿಯಿಂದ ಸಾಗಬೇಕು ಎಂಬ ಉದ್ದೇಶಕ್ಕೆ ಬುದ್ಧ ಜಯಂತಿ ಕಾರ್ಯಕ್ರಮ ಆಚರಣೆ ಮಾಡಲಾಗುತ್ತಿದೆ.
ಬುದ್ಧನ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ತಿಳಿಸಿ, ಉಳಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಐಡಿಎಸ್ಜಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೆ.ಜಿ. ವಸಂತಕುಮಾರ್ ಅವರು ಗೌತಮ ಬುದ್ಧರ ಕುರಿತು ವಿಶೇಷ ಉಪನ್ಯಾಸ ನೀಡಿ, ‘ಬೌದ್ಧ ಧರ್ಮದ ಕೆಲವು ವಿಚಾರಗಳನ್ನು ತಿರುಚಿ ಸೀಮಿತಗೊಳಿಸಲಾಗಿದೆ. ಎಲ್ಲೆಲ್ಲಿ ನೋಡಿದರು ಬುದ್ಧನ ಮೂರ್ತಿಗಳು ಕಣ್ಣು ಮುಚ್ಚಿ ಧ್ಯಾನದ ರೀತಿಯಲ್ಲಿ ಕಾಣುತ್ತವೆ. ಆದರೆ, ಬುದ್ಧರು ಯಾವಾಗಲು ಧ್ಯಾನದಲ್ಲೇ ಇರಲಿಲ್ಲ. ಜನರ ಕಷ್ಟಗಳಿಗೆ ನೋವುಗಳಿಗೆ ಪರಿಹಾರ ಹುಡುಕುತ್ತಿದ್ದರು’ ಎಂದರು.
ಬುದ್ಧ ಜಗತ್ತಿನ ಮೊದಲ ವೈದ್ಯ, ಎಲ್ಲರ ನೋವಿಗೆ ಔಷಧಿ ಕೊಡುತ್ತಿದ್ದ ವೈದ್ಯ ಎಲ್ಲಾ ಧರ್ಮಗಳು ಮನುಷ್ಯ ಸತ್ತ ನಂತರ ಏನಾಗುತ್ತಾನೆ ಎಂದು ಯೋಚಿಸುವಾಗ ಬುದ್ಧ ಮಾನವನ ಬದುಕಿನ ಬಗ್ಗೆ ಆಲೋಚನೆ ಮಾಡುತ್ತಿದ್ದರು. ಮನುಷ್ಯನ ನೋವುಗಳಿಗೆ ಸ್ಪಂದಿಸುತ್ತಿದ್ದರು, ದುಃಖದ ಬಗ್ಗೆ ಮಾತನಾಡುತ್ತಿದ್ದರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗೌನಹಳ್ಳಿಯಲ್ಲಿ ಬುದ್ಧ ವಿಹಾರ ಕೇಂದ್ರವನ್ನು ನಿರ್ಮಾಣ ಮಾಡುವಂತೆ ವಕೀಲ ಅನಿಲಕುಮಾರ್ ಅವರು ಶಾಸಕ ಎಚ್.ಡಿ. ತಮ್ಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿರ್ವಹಣಾ ಸಮಿತಿ ಅಧ್ಯಕ್ಷ ಎ.ಎನ್. ಮಹೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಮುಖಂಡರಾದ ಕೆ.ಟಿ. ರಾಧಾಕೃಷ್ಣ ವಕೀಲ ಅನೀಲಕುಮಾರ್, ಹೊನ್ನೇಶ್, ಮೋಹನ್ ಹುಣಸೇಮಕ್ಕಿ ಲಕ್ಷಣ, ಸಂತೋಷ್, ವಸಂತ ಕುಮಾರಿ ಇದ್ದರು.
Gautama Buddha who brought peace to the world won millions of hearts.
Leave a comment