ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೇರಿದಂತೆ ಉದ್ದೇ ಬೋರನಹಳ್ಳಿ ಗ್ರಾಮಸ್ಥರಿಂದ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಡಿ. ಮಹೇಶ್ ತಿಳಿಸಿದರು.
ಕಡೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಆದ ನಂತರ ಕಡೂರು, ಸಖರಾಯಪಟ್ಟಣ ಮತ್ತು ಉದ್ದೇಬೋರನಹಳ್ಳಿಯ ಸುತ್ತಮುತ್ತಲ ಗ್ರಾಮಸ್ಥರಿಗೆ ಓಡಾಡಲು ಆಗುತ್ತಿದ್ದ ತೊಂದರೆಗೆ ಇಂದು ಪರಿಹಾರ ಸಿಕ್ಕಿದೆ ಎಂದು ಅವರು ತಿಳಿಸಿದರು.
ಉದ್ದೇ ಬೋರನಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಯಾವುದೇ ತಡೆರಹಿತ ವಾಹನಗಳ ನಿಲುಗಡೆ ಇರಲಿಲ್ಲ. ಇದರಿಂದ ಉದ್ದೇಬೋರನಹಳ್ಳಿ ಬಿಳೆಕಲ್ಲಳ್ಳಿ ಸರ್ಪನಲ್ಲಿ ಗುಂಗರಳ್ಳಿ ತಡಬೆನಹಳ್ಳಿ ಬಾಳೆನಹಳ್ಳಿ, ಕುನ್ನಾಳು ಲಕ್ಕುಮ್ಮನಹಳ್ಳಿ ಬ್ಯಾಡರಹಳ್ಳಿ ಕುರಿ ಚಿಕ್ಕನಹಳ್ಳಿ ಕೆಂಗೇನಹಳ್ಳಿ ಕರಿಸಿದ್ದನಹಳ್ಳಿ ಹಿರೇಗೌಜ ಸೇರಿದಂತೆ ಕಡೂರು ಚಿಕ್ಕಮಗಳೂರುಗಳಿಗೆ ಓಡಾಡುವ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ಕಡೂರಿನಿಂದ ಹೊರಟ ಬಸ್ಸುಗಳು ಸಖರಾಯಪಟ್ಟಣ ಬಿಟ್ಟರೆ ಚಿಕ್ಕಮಗಳೂರಿನ ಬಸ್ ನಿಲ್ದಾಣದಲ್ಲಿ ಕೊನೆಗೊಳ್ಳುತ್ತಿತ್ತು ಎಂದರು.
ಸಖರಾಯಪಟ್ಟಣ ಮತ್ತು ಚಿಕ್ಕಮಗಳೂರು ಮಧ್ಯೆ ಇರುವ ಉದ್ದೇಬೋರನಹಳ್ಳಿ ಸುತ್ತಮುತ್ತ ಇರುವ ಮೇಲ್ಕಂಡ ಎಲ್ಲಾ ಗ್ರಾಮಗಳ ಪ್ರಯಾಣಿಕರಿಗೆ ಕಡೂರು ಮತ್ತು ಚಿಕ್ಕಮಗಳೂರಿಗೆ ಓಡಾಡಲು ತುಂಬಾ ತೊಂದರೆಯಾಗಿತ್ತು ಎಂದು ತಿಳಿಸಿದರು.
ಶಾಲಾ-ಕಾಲೇಜುಗಳಿಗೆ ಆಸ್ಪತ್ರೆಗೆ ಕಚೇರಿಗಳಿಗೆ ಓಡಾಡುವ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಬರಲಾಗದೆ ಬಹಳ ತೊಂದರೆ ಅನುಭವಿಸುತ್ತಿದ್ದಾರೆ, ಉದ್ದೇಬೋರನಹಳ್ಳಿ ಗ್ರಾಮಸ್ಥರು ಅನೇಕ ಬಾರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಮನವಿ ಸಲ್ಲಿಸಿ ಬಸ್ಸ್ ನಿಗಡೆಗೆ ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದರು.
ಈ ಬಗ್ಗೆ ರೈತ ಸಂಘದ ಉದ್ದೇಬೋರನಹಳ್ಳಿ ಶಾಖೆ ಪದಾಧಿಕಾರಿಗಳು ಮತ್ತು ಜಿಲ್ಲಾ ಪದಾಧಿಕಾರಿಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗ ನಿಯಂತ್ರಣಾಧಿಕಾರಿಗಳು ಹಾಗೂ ಘಟಕ ವ್ಯವಸ್ಥಾಪಕರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯ ಬಗ್ಗೆ ವಿವರಣೆ ನೀಡಿ ವಿದ್ಯಾರ್ಥಿಗಳಿಗೆ ರೋಗಿಗಳಿಗೆ ಕಚೇರಿಗೆ ಓಡಾಡುವ ಜನಸಾಮಾನ್ಯರಿಗೆ ಮತ್ತು ಪ್ರಯಾಣಿಕರುಗಳಿಗೆ ಆಗಿರುವ ತೊಂದರೆ ಮನದಟ್ಟು ಮಾಡಿದ್ದು ಮಾತುಕತೆ ಸಫಲವಾಗಿದೆ ಎಂದು ತಿಳಿಸಿದರು.
ವಿಭಾಗಿಯ ನಿಯಂತ್ರಣ ಅಧಿಕಾರಿಗಳು ಮತ್ತು ಘಟಕ ವ್ಯವಸ್ಥಾಪಕರು ನಮ್ಮಗಳ ಮನವಿಗೆ ಸ್ಪಂದಿಸಿ ತಡೆ ರಹಿತ ವಾಹನಗಳ ನಿಲುಗಡೆಗೆ ಆದೇಶಿಸುತ್ತಾರೆ ಮತ್ತು ತಮ್ಮ ಸಿಬ್ಬಂದಿ ವರ್ಗದವರಿಗೂ ಉದ್ದೇ ಬೋರನಹಳ್ಳಿ ಬಸ್ ನಿಲ್ದಾಣದಲ್ಲಿ ಎಲ್ಲಾ ಬಸ್ಗಳನ್ನು ನಿಲುಗಡೆಗೊಳಿಸಲು ಸೂಚನೆ ನೀಡಲಾಗಿದೆ ಎಂದರು.
ಈ ಕಾರಣದಿಂದ ಇಂದು ಉದ್ದೇಬೋರನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಮುಂದೆ ಉದ್ದೇಬೋರನಹಳ್ಳಿ ಗ್ರಾಮಸ್ಥರು ರೈತ ಸಂಘದ ಕಾರ್ಯಕರ್ತರು ಜಿಲ್ಲಾ ಸಮಿತಿ ಸದಸ್ಯರು ಸೇರಿ ಸಿಹಿ ಹಂಚಿ ಸಂಭ್ರಮಿಸುವ ಜೊತೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಘಟಕ ವ್ಯವಸ್ಥಾಪಕರು ಸೇರಿದಂತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ಈ ಮೂಲಕ ಧನ್ಯವಾದ ತಿಳಿಸಿರುತ್ತಾರೆ .
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಡಿ ಮಹೇಶ್, ಮಾಜಿ ಅಧ್ಯಕ್ಷ ಗುರುಶಾಂತಪ್ಪ ಗೌರವಾಧ್ಯಕ್ಷ ಎಮ್.ಸಿ ಬಸವರಾಜ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಉಪಾಧ್ಯಕ್ಷ ಕುಮಾರಸ್ವಾಮಿ, ದೇವರಾಜ್, ರಾಜು, ಬಸವಣ್ಣ, ಚೇತನ, ಖಜಾಂಚಿ ಲೋಕೇಶ್, ವಿಜಯಕುಮಾರ್, ಗ್ರಾಮಸ್ಥರುಗಳಾದ ಹಾಲಪ್ಪ, ಆನಂದ್ಕುಮಾರ್, ಪುನೀತ್ ಮುರುಳಿಧರ್, ರವಿಕುಮಾರ್, ನಿರಂಜನ್, ಭಾನುಪ್ರಕಾಶ್, ಸೋಮಶೇಖರ್, ಯದುನಂದನ ಹಾಗೂ ಗ್ರಾಮಸ್ಥರುಗಳು ಭಾಗವಹಿಸಿದ್ದರು.
Farmers’ association workers celebrate by distributing sweets
Leave a comment