ಚಿಕ್ಕಮಗಳೂರು: ಜಿಲ್ಲಾ ಕೇಂದ್ರಿತ ಒಕ್ಕಲಿಗ ಸಮುದಾಯದ ಯುವ ಜನತೆಯನ್ನು ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಯಶಸ್ವಿ ಉದ್ದಿಮೆದಾರರೊಂದಿಗೆ ಪರಸ್ಪರ ಸಹಕಾರ ಬೆಸೆದು, ಮಾಹಿತಿ ವಿನಿಮಯದ ಮೂಲಕ ಉದ್ದಿಮೆಯತ್ತ ಸೆಳೆಯುವ ಉದ್ದೇಶದಿಂದ ಜ.೯ ರಿಂದ ೧೧ ರವರೆಗೆ ಮೂರು ದಿನ ಬೆಂಗಳೂರಿನ ಅರಮನೆ ಮೈದಾನದಲ್ಲಿ ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಉದ್ಯಮ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಉದ್ಯಮಿ ಒಕ್ಕಲಿಗ ಫಸ್ಟ್ ಸರ್ಕಲ್ ಜಿಲ್ಲಾಧ್ಯಕ್ಷ ಡಾ. ಜೆ.ಪಿ.ಕೃಷ್ಣೇಗೌಡ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್ಪೋ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ಗ್ರಾಂಡ್ ಮತ್ತು ಗಾಯತ್ರಿ ವೃಕ್ಷ ಗೇಟ್ಸಂಖ್ಯೆ ೪ ರಲ್ಲಿ ನಡೆಯಲಿದೆ. ಒಕ್ಕಲಿಗ ಜನಾಂಗವು ಕೇವಲ ಉದ್ಯೋಗಿಯಲ್ಲದೆ ಲಭ್ಯವಿರುವ ಎಲ್ಲ ಸಂಪನ್ಮೂಲವನ್ನು ಬಳಸಿಕೊಂಡು ತಮ್ಮ ಶೈಕ್ಷಣಿಕ ಜ್ಞಾನ ಮತ್ತು ಕೌಶಲ್ಯದೊಂದಿಗೆ ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಸಮುದಾಯದ ಜತೆ ಸಲಹೆ ಮತ್ತು ಅನುಭವಗಳನ್ನು ಪಡೆದುಕೊಳ್ಳಬೇಕು. ಸ್ವಂತ ಸಾಮರ್ಥ್ಯದಿಂದ ಉತ್ಪಾದನೆ, ಸೇವೆ ಅಥವಾ ಮಾರುಕಟ್ಟೆ ಕ್ಷೇತ್ರಗಳಲ್ಲಿ ಉದ್ಯಮ ಶೀಲರಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಈ ಉದ್ಯಮ ಮೇಳ ಸಹಕಾರಿಯಾಗಲಿದೆ ಎಂದರು.
೨೦೨೨ ರಲ್ಲಿ ಆರಂಭವಾದ ಫಸ್ಟ್ ಸರ್ಕಲ್ ಸೊಸೈಟಿ ಒಕ್ಕಲಿಗ ಉದ್ಯಮಿಗಳನ್ನು ಬೆಳೆಸುವ ಉದ್ದೇಶ ಹೊಂದಿದೆ. ಒಕ್ಕಲಿಗರು ಬರಿ ಗ್ರಾಹಕರಾಗಿ ಉಳಿಯದೆ ಉತ್ಪಾದಕರಾಗಿ, ಮಾರಾಟಗಾರರನ್ನಾಗಿ ಬೆಳೆಸುವುದು ಸಮುದಾಯದ ಯುವಜನತೆಯಲ್ಲಿ ಅರಿವು ಮೂಡಿಸಿ ನವೋದ್ಯಮದಲ್ಲಿ ತೊಡಗಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಉದ್ಯಮಿ ಒಕ್ಕಲಿಗ ಫಸ್ಟ್ ಸರ್ಕಲ್ ಉಪಾಧ್ಯಕ್ಷೆ ವರ್ಷಾ ಮಾತನಾಡಿ, ಕೃಷಿ, ಆರೋಗ್ಯ, ಶಿಕ್ಷಣ ಸೇರಿದಂತೆ ಔದ್ಯಮಿಕ ಕ್ಷೇತ್ರದ ೧೧ ವಲಯಗಳಲ್ಲಿ ಅವಕಾಶಗಳನ್ನು ಗುರುತಿಸಲಾಗಿದೆ. ಅತಿ ಹೆಚ್ಚು ಸಂಪದ್ಭರಿತ ಹಾಗೂ ಸಂಪನ್ಮೂಲಗಳನ್ನು ಹೊಂದಿರುವ ನಮ್ಮ ಜಿಲ್ಲೆಯಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿದೆ. ಉದ್ದಿಮೆದಾರರನ್ನು ಮತ್ತು ಉದ್ದಿಮೆ ಆಸಕ್ತರನ್ನು ಹಾಗೂ ಯುವಜನತೆಯನ್ನು ಸೆಳೆದು ಸಂಘಟಿತ ಸಹಕಾರ ಮತ್ತು ಅಭಯ ಹಸ್ತಗಳಿಂದ ಜಿಲ್ಲೆಗೆ ಪೂರಕ ವಾತಾವರಣ ಸೃಷ್ಟಿಗೆ ಜಿಲ್ಲಾ ಶಾಖೆ ಹೊಂದುವುದು ಅವಶ್ಯಕತೆ ಇದೆ ಎಂದು ಹೇಳಿದರು.
ಜವಾಬ್ದಾರಿ, ಆತ್ಮವಿಶ್ವಾಸ ಹಾಗೂ ನಾಯಕತ್ವ ಗುಣ ಬೆಳೆಸುವ ಸದುದ್ದೇಶದಿಂದ ಈ ಉದ್ಯಮ ಮೇಳ ಆಯೋಜಿಸಲಾಗಿದ್ದು, ಜಿಲ್ಲೆಯ ಎಲ್ಲ ಯುವ ಉದ್ದಿಮೆದಾರರು, ಆಸಕ್ತರು, ಬೆಳೆಗಾರರು ಈ ಸಮಾವೇಶದಲ್ಲಿ ಭಾಗವಹಿಸಿ ಸದುಪಯೋಗ ಪಡೆಯವಂತೆ ಅವರು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಉದ್ಯಮದ ಕಾರ್ಯದರ್ಶಿ ಮಹೇಶ್ ಇದ್ದರು.
Entrepreneur Vokkaliga Business Fair at the Palace Grounds in Bangalore
Leave a comment