ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ನೆಡೆದಿರುವ ಚುನಾವಣಾ ಅಕ್ರಮ ದೇಶದ ಇತಿಹಾಸದಲ್ಲಿ ಹಾಗೂ ಭವಿಷ್ಯದಲ್ಲಿ ಹಿಂದೆಂದಿಗೂ ಊಹಿಸಲು ಸಾಧ್ಯವಿಲ್ಲದ ಅಕ್ರಮವಾಗಿದ್ದು, ಇದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ ಪಾರದರ್ಶಕ, ನಿಷ್ಪಕ್ಷಪಾತ ತನಿಖೆ ನೆಡೆಸಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ ಕೆ.ಪಿ ಅಂಶುಮಂತ್ ಒತ್ತಾಯಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸರ್ಕಾರಿ ದಾಖಲೆಗಳನ್ನು ತಿದ್ದಿ ಅಕ್ರಮ ಎಸಗಿರುವ ಜೀವರಾಜ್ ರವರು ಇಂದು ಅಂಚೆ ಮತಗಳನ್ನು ತಿದ್ದುಪಡಿ ಮಾಡಿ ಗೆಲುವು ಸಾಧಿಸಿ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿದರು.
ಈ ಸಂಬಂದ ಜನಜಾಗೃತಿ ಮೂಡಿಸಲು ಕಾಂಗ್ರೆಸ್ ಪಕ್ಷ ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಸಭೆ ನೆಡೆಸಿ ಜಿಲ್ಲಾ ಕೇಂದ್ರದಲ್ಲಿ ಮೇ. ೧೩ರ ಬುಧವಾರ ಬೆಳಿಗ್ಗೆ ೧೧ ಗಂಟೆಗೆ ಬೃಹತ್ ಪ್ರತಿಭಟನೆ ನೆಡೆಸಲು ತೀರ್ಮಾನಿಸಲಾಗಿದೆ ಎಂದರು.
ಜೀವರಾಜ್ ರವರು ನಿಜವಾಗಿ ನಿರಪರಾಧಿ ಆಗಿದ್ದರೆ ಸತ್ಯಾಸತ್ಯತೆ ಹೊರಬರುವ ವರೆಗೂ ತನಿಖೆಗೆ ಸಹಕರಿಸುತ್ತಿದ್ದರು, ಹೀಗೆ ತುರ್ತಾಗಿ ಎಫ್ಐಆರ್ ವಿರುದ್ಧ ತಡೆಯಾಜ್ಞೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತಿರಲಿಲ್ಲ, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡಂತಾಗಿದೆ ಇವರ ಪರಿಸ್ಥಿತಿ ಎಂದು ಹೇಳಿದರು.
ಈಗಾಗಲೇ ಸರ್ಕಾರಿ ದಾಖಲೆಗಳನ್ನು ತಿದ್ದುಪಡಿ ಮಾಡಿ ಶೃಂಗೇರಿ ಕ್ಷೇತ್ರದ ರೈತರಿಗೆ ವಂಚಿಸಿರುವ ಪ್ರಕರಣ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜೀವಂತವಿರುವಾಗಲೇ ಟ್ಯಾಂಪರಿಂಗ್ ಮಾಡಿ ಓಟ್ ಡಕಾಯಿತಿ ಕೃತ್ಯ ಎಸಗಿಸಿ, ಪದೇ-ಪದೇ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗುವ ಮೂಲಕ ಶೃಂಗೇರಿ ಕ್ಷೇತ್ರದ ಜನರಿಗೆ ದ್ರೋಹ ಎಸಗಿದ್ದಾರೆ ಎಂದು ದೂರಿದರು.
೨೦೨೩ ರಲ್ಲಿ ನೆಡೆದ ವಿಧಾನಸಭೆ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಎಲ್ಲಾ ಪಕ್ಷಗಳ ಹಾಗೂ ಸ್ವತಂತ್ರ ಅಭ್ಯರ್ಥಿಗಳ ಪರವಾಗಿದ್ದ, ಚುನಾವಣಾ ಏಜೆಂಟ್ ಮತ್ತು ಚುನಾವಣಾ ಅಧಿಕಾರಿಗಳ ಸಮ್ಮುಖದಲ್ಲಿ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಶೆಟ್ಟಿಯವರ ಕಣ್ಣುಮುಂದೆ ಮತ ಎಣಿಕೆ ಕಾರ್ಯ ನೆಡೆದಿದ್ದು, ಅಂದು ಪುರಸ್ಕೃತವಾಗಿದ್ದ ಮತಗಳು ಮೂರು ವರ್ಷಗಳ ಬಳಿಕ ಹೇಗೆ ತಿರುಸ್ಕೃತಗೊಂಡವು ಎಂದು ಪ್ರಶ್ನಿಸಿದರು.
ಅಂದು ಮತ ಎಣಿಕೆಯಲ್ಲಿ ಬಿಜೆಪಿ ಪರವಾಗಿ ಏಜೆಂಟ್ ಆಗಿದ್ದ ಶೆಟ್ಟಿಗದ್ದೆ ರಾಮಸ್ವಾಮಿಯವರು ಹಾಗೂ ಅಂಚೆ ಮತ ಎಣಿಕೆಯ ಏಜೆಂಟ್ ಆಗಿದ್ದ, ಅದ್ದಡ ಸತೀಶ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಕೊಪ್ಪದ ವೀರಭದ್ರ ಸ್ವಾಮಿ ದೇವಾಲಯದಲ್ಲಿ ಪ್ರಮಾಣ ಮಾಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ ರಾಜೇಗೌಡ ರವರು ಯಾವುದೇ ತಪ್ಪು ಮಾಡಿಲ್ಲ ಎಂದು ಸಾಕ್ಷೀಕರಿಸಿದ್ದಾರೆ, ಈ ನಿಟ್ಟಿನಲ್ಲಿ ಈ ಪ್ರಕರಣದಲ್ಲಿ ಅಕ್ರಮ ನೆಡೆದಿದೆ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದರು.
ಸ್ಟ್ರಾಂಗ್ ರೂಂನಲ್ಲಿದ್ದ ಮತಗಳನ್ನು ತಿರುಚುವ ಮೂಲಕ ಕಾನೂನು ಬಾಹಿರವಾಗಿ ಕ್ರಿಮಿನಲ್ ಟ್ರೆಸ್ಪಾಸ್ ಹಾಗೂ ಟ್ಯಾಂಪರಿಂಗ್ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ಆಗಿದ್ದ ಅದ್ದಡ ಸತೀಶ್ ಹಾಗೂ ಶೆಟ್ಟಿಗದ್ದೆ ರಾಮಸ್ವಾಮಿ ರವರ ಹೇಳಿಕೆಯನ್ನು ಈ ಪ್ರಕರಣದಲ್ಲಿ ಸಾಕ್ಷಿಯಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಪಿ ಮಂಜೇಗೌಡ, ಮಾಜಿ ಅಧ್ಯಕ್ಷ ನಯಾಜ್ ಅಹಮದ್, ನಗರ ಕಾಂಗ್ರೆಸ್ ಅಧ್ಯಕ್ಷ ತನೋಜ್ ನಾಯ್ಡು, ಮುಖಂಡರಾದ ಮಲ್ಲೇಶ್ ಸ್ವಾಮಿ, ಶಿವು ಹಿರೇಗೌಜ, ಜಾವಿದ್ ಉಪಸ್ಥಿತರಿದ್ದರು.
Election Commission should consider BJP agent as witness
Leave a comment