ತರೀಕೆರೆ: ತಾಲ್ಲೂಕಿನ ಮುದುಗುಂಡಿ ಗ್ರಾಮದಲ್ಲಿ ಸುಮಾರು 3 ವರ್ಷ ವಯಸ್ಸಿನ ಹೆಣ್ಣು ಚಿರತೆಯನ್ನು ಅರಣ್ಯ ಇಲಾಖೆ ಶನಿವಾರ ಸೆರೆಹಿಡಿದಿದೆ.
ಮುದುಗುಂಡಿ ಗ್ರಾಮದಲ್ಲಿ ಬಳಕೆ ಮಾಡದ ಶೌಚಾಲಯದಲ್ಲಿದ್ದ ನಾಯಿಗಳನ್ನು ಹಿಡಿಯಲು ಶನಿವಾರ ಬೆಳಿಗ್ಗೆ ಚಿರತೆ ಶೌಚಾಲಯದ ಒಳಗೆ ನುಗ್ಗಿದೆ. ಶೌಚಾಲಯದ ಒಳಗೆ ಹೋದ ನಂತರ ಶೌಚಾಲಯದ ಬಾಗಿಲು ಮುಚ್ಚಿದ ಕಾರಣ ಚಿರತೆಗೆ ಶೌಚಾಲಯದಿಂದ ಹೊರ ಬರಲು ಸಾಧ್ಯವಾಗದೆ ಬಂಧಿಯಾಗಿತ್ತು.
ಶೌಚಾಲಯದಲ್ಲಿ ಶಬ್ದ ಆಗುತ್ತಿರುವುದನ್ನು ಕೇಳಿಸಿಕೊಂಡ ಸ್ಥಳೀಯರು ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದಾರೆ. ವಿಷಯ ತಿಳಿದು ಭದ್ರಾವತಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರಕುಮಾರ್ ನಿರ್ದೇಶನದಂತೆ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಬಲೆ ಮತ್ತು ಬೋನಿನೊಂದಿಗೆ ಚಿರತೆ ಸೆರೆಹಿಡಿ ಯುವ ಕಾರ್ಯಾಚರಣೆ ಆರಂಭಿಸಿದ್ದರು.
ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿಯುವ ಸಲುವಾಗಿ ಮುದುಗುಂಡಿ ಗ್ರಾಮಕ್ಕೆ ಬಂದ ಶಿವಮೊಗ್ಗ ತ್ಯಾವರೆಕೊಪ್ಪದ ಪಶುವೈದ್ಯ ಡಾ.ಶ್ರವಣಸಿಂಗ್ ರಾಥೋಡ್ ತಂಡವು ಶೌಚಾಲಯದ ಮೇಲ್ಬಾಗದಿಂದ ಅರಿವಳಿಕೆ ಲಸಿಕೆ ನೀಡಿದ್ದಾರೆ.
ಪ್ರಜ್ಞೆ ತಪ್ಪಿದ ನಂತರ ಚಿರತೆಯನ್ನು ಸೆರೆಹಿಡಿದು ಪಟ್ಟಣದ ಅರಣ್ಯ ಇಲಾಖೆ ಕಚೇರಿಗೆ ಸಾಗಿಸಲಾಗಿದೆ. ಚಿರತೆಯ ಆರೋಗ್ಯ ತಪಾಸಣಾ ಕಾರ್ಯ ಮುಗಿದ ನಂತರ ಚಿರತೆಯನ್ನು ಕಾಡಿಗೆ ಬಿಡಲಾಗುವುದು ಎಂದು ಎಸಿಎಫ್ ಉಮ್ಮರ್ ಬಾದ್ಷಾ ಪತ್ರಿಕೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಲಕ್ಕವಳ್ಳಿ ವಲಯ ಅರಣ್ಯಾಧಿಕಾರಿ ಇಂದು, ಡಿಆರ್ಎಫ್ಒ ಉಮೇಶ್ ಒಳಗೊಂಡು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂಧಿ ಹಾಗೂ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.
A female leopard was caught in Mudugundi village
Leave a comment