ಚಿಕ್ಕಮಗಳೂರು: ಮುತ್ತೋಡಿ ಅರಣ್ಯ ವಲಯದ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆಗೆ ಶಾಕ್ ನೀಡುವಂತಹ ಘಟನೆಯೊಂದು ನಡೆದಿದೆ.
ಅಭಯಾರಣ್ಯಕ್ಕೆ ಪ್ರವೇಶಿಸಲು ಕಟ್ಟುನಿಟ್ಟಿನ ಅನುಮತಿ ಬೇಕಿರುವ ಜಾಗದಲ್ಲೇ ಕಳ್ಳರು ಕೈಚಳಕ ತೋರಿಸಿದ್ದು, ಹುಲಿ ಗಣತಿಗಾಗಿ ಅಳವಡಿಸಲಾಗಿದ್ದ ಕ್ಯಾಮೆರಾ ಟ್ರ್ಯಾಪ್ಗಳನ್ನು ಕಳವು ಮಾಡಿದ್ದಾರೆ.
ಕೆಸವಿನಮನೆ ಡೀಮ್ಸ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸುಮಾರು 40 ಸಾವಿರ ರೂಪಾಯಿ ಮೌಲ್ಯದ ಎರಡು ಕ್ಯಾಮೆರಾಗಳು ನಾಪತ್ತೆಯಾಗಿವೆ. ಮೇ 4ರವರೆಗೆ ಕಾರ್ಯನಿರ್ವಹಿಸುತ್ತಿದ್ದ ಈ ಕ್ಯಾಮೆರಾಗಳು ಮೇ 5ರಂದು ಗಸ್ತಿನ ವೇಳೆ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಉಪವಲಯ ಅರಣ್ಯಾಧಿಕಾರಿ ಯಾಸೀನ್ ಬಾಷಾ ಅವರು ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅರಣ್ಯ ಪಾಲಕ ನಂದೀಶ್ ಅವರೊಂದಿಗೆ ಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಈ ಕಳ್ಳತನ ಪ್ರಕರಣ ಗಮನಕ್ಕೆ ಬಂದಿದೆ.
ಹುಲಿ ಗಣತಿ ಕಾರ್ಯಾಚರಣೆಯ ಪ್ರಮುಖ ಹಂತದಲ್ಲಿ ಕ್ಯಾಮೆರಾಗಳು ಕಳವಾಗಿರುವುದು ಇಲಾಖೆಗೆ ಹಿನ್ನಡೆಯನ್ನುಂಟು ಮಾಡಿದೆ. ಅರಣ್ಯದೊಳಗೆ ನುಗ್ಗಿ ಇಲಾಖೆಯ ಉಪಕರಣಗಳನ್ನೇ ಕದ್ದಿರುವುದು ಕಾಡು ಪ್ರಾಣಿಗಳ ಸುರಕ್ಷತೆ ಮತ್ತು ಅರಣ್ಯ ಪ್ರದೇಶದ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮೂಡಿಸಿದ್ದು, ಮಲ್ಲಂದೂರು ಪೊಲೀಸರು ಕಳ್ಳರ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.
Camera trap installed for tiger census stolen
Leave a comment