ಚಿಕ್ಕಮಗಳೂರು : ಸರ್ವ ಜನರ ಉತ್ಸವವಾಗಿ ಜನೋತ್ಸವದ ರೀತಿ ವಿಶಿಷ್ಠ ಮಾದರಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ರವರ ೧೩೫ನೇ ಜಯಂತಿಯನ್ನು ವೈಚಾರಿಕಾ ಕಾರ್ಯಕ್ರಮವಾಗಿ ಏ.೨೭ ರಂದು ಸೋಮವಾರ ಬೆಳಿಗ್ಗೆ ೧೦.೩೦ ಕ್ಕೆ ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಆಚರಣಾ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಬಿ.ಬಿ ನಿಂಗಯ್ಯ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಡಾ. ಅಂಬೇಡ್ಕರ್ ಜಯಂತಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದ್ದು, ಅನುಭವ ಮಂಟಪ ವೇದಿಕೆ, ರಾಷ್ಟ್ರ ಕವಿ ಕುವೆಂಪು ಹಾಗೂ ನಾರಾಯಣ ಗುರುಗಳ ಮಹಾದ್ವಾರ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಸ್ತಾಕ್ ರವರು ನೆರೆವೇರಿಸುವರು, ಜನಪರ ಚಿಂತಕರು ಹಾಗೂ ಬರಹಗಾರರಾದ ಶಿವಸುಂದರ್ ರವರು ಮುಖ್ಯ ಭಾಷಣಾಕಾರರಾಗಿ ಭಾಗವಹಿಸಲಿದ್ದಾರೆಂದು ತಿಳಿಸಿದರು.
ಶೋಷಿತ ಜನಾಂಗದ ಮುಖವಾಣಿಯಾಗಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಸಮಾನ ಅವಕಾಶಗಳು ಕಾನೂನು ಬದ್ಧವಾಗಿ ಲಭ್ಯವಾಗುವಂತೆ ಸತತ ಹೋರಾಟದ ಫಲವಾಗಿ ಹೊಸ ಅರಿವು, ಜ್ಞಾನ, ಜಾಗೃತಿ, ಪ್ರಜ್ಞೆ ಮೂಡುವಂತಾಗಿದೆ ಆದರೆ ಇತ್ತೀಚಿನ ಬೆಳವಣಿಗೆಗಳು ಅಂಬೇಡ್ಕರ್ ರವರ ಚಿಂತನೆ ಮತ್ತು ಆಲೋಚನೆಗೆ ವಿರುದ್ಧವಾಗಿ ಸಂಘಟಿತ ದಾಳಿಯ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಲುಗಾಡಿಸುವ ಪ್ರಯತ್ನ ನೆಡೆದಿದೆ ಎಂದು ವಿಷಾಧಿಸಿದರು.
ಜಾತಿ-ಉಪಜಾತಿ, ಧರ್ಮ, ಕೋಮು ದಳ್ಳುರಿಯ ಮೀಸಲಾತಿಯ ಒಳ ಮೀಸಲಾತಿ ಸಂಘರ್ಷ ಮಿತಿಮೀರಿದೆ, ಐಕ್ಯತೆ ಬದಲು ವಿಭಜನೆ ಮೂಲಕ ಧೀನ, ದಲಿತ, ಬಡವ ಶೋಷಿತರಲ್ಲಿ ಆತ್ಮ ವಿಶ್ವಾಸವನ್ನೆ ಹತ್ತಿಕ್ಕುವ ಸಂಚು ನೆಡೆಯುತ್ತಿದೆ, ಅದಕ್ಕಾಗಿ ವಿಚಾರದ ಬದಲು ಪ್ರಚಾರ, ಬರವಣೆಗೆಯ ಬದಲು ಮೆರವಣಿಗೆ ಗೊತ್ತು-ಗುರಿ ಇಲ್ಲದ ಕಾರ್ಯಕ್ರಮಗಳ ಮೂಲಕ ಡಾ. ಬಿ.ಆರ್ ಅಂಬೇಡ್ಕರ್ ರವರನ್ನು ಅವಮಾನಿಸುತ್ತಾ ತನ್ನ ಸ್ವಾರ್ಥ ಸಾಧನೆಗೆ ಕೆಲವು ಶಕ್ತಿಗಳು ಮುಂದಾಗುತ್ತಿವೆ ಎಂದು ಆರೋಪಿಸಿದರು.
ಹಲ್ಲೆ, ಅತ್ಯಾಚಾರ, ಅಸಮಾನತೆ, ಅವಮಾನ, ಹಸಿವು, ಬಡತನ, ನಿರುದ್ಯೋಗದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವ ಜನರನ್ನು ದಾರಿ ತಪ್ಪಿಸಲಾಗುತ್ತಿದೆ, ಈ ಹಿನ್ನಲೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ರವರು ಮೂಡಿಸಿದ ಆತ್ಮವಿಶ್ವಾಸ, ಚೈತನ್ಯ ಮತ್ತು ಸ್ಪೂರ್ತಿಯಿಂದ ಪಡೆಯಬೇಕಾದ ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮೂಡಿಗೆರೆ ತಾಲ್ಲೂಕಿನ ಸರ್ಕಾರಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ೧೨ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಲಾಗುವುದು ಹಾಗೂ ಇದೇ ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ತಾಲ್ಲೂಕಿನ ಸರ್ವ ಜನಾಂಗದ ಹಿರಿಯ ನಾಗರೀಕರನ್ನು ಸನ್ಮಾನಿಸಿ ಗೌರವಿಸಲು ತೀರ್ಮಾನಿಸಲಾಗಿದೆ ಎಂದರು.
ಈ ಕಾರ್ಯಕ್ರಮಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರೀಕರು, ವಿವಿಧ ಜನಪರ ಸಂಘಟನೆಗಳ ಮುಖಂಡರು, ರಾಜಕೀಯ ಪಕ್ಷದ ಮುಖಂಡರು, ವಕೀಲರು, ಮಹಿಳೆಯರು, ದಲಿತಪರ ಶಕ್ತಿಗಳು, ವಿದ್ಯಾರ್ಥಿ ಯುವಜನರು ಭಾಗವಹಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ, ಕಾಂಗ್ರೆಸ್ ವಕ್ತಾರ ಎಂ.ಎಸ್ ಅನಂತ್, ಎಸ್ಡಿಪಿಐ ಅಧ್ಯಕ್ಷ ಗೌಸ್ ಮುನೀರ್, ಆಚರಣಾ ಸಮಿತಿ ಕಾರ್ಯದರ್ಶಿ ಅಭಿಜಿತ್ ಹೆಡದಾಳ್, ಖಜಾಂಚಿ ಸಿದ್ದೇಶ್ ಕೆಸವಳಲು, ಸಹಕಾರ್ಯದರ್ಶಿ ಡಾ. ಹರೀಶ್ ನಲ್ಕೆ, ಬಿಳಿಯಪ್ಪ, ಶಿವಪ್ರಸಾದ್, ರಮೇಶ್ ಮತ್ತಿತರರು ಉಪಸ್ಥಿತರಿದ್ದರು
Dr. B.R. Ambedkar Jayanti in a unique way
Leave a comment