ಚಿಕ್ಕಮಗಳೂರು: ಕೇಂದ್ರ ಸರ್ಕಾರದ ನ್ಯಾಷನಲ್ ಹೆಲ್ತ್ ಮಿಷನ್ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತಿರುವ ವಾಹಕ ಆಶ್ರಿತ ರೋಗಗಳ ನಿರ್ಮೂಲನಾ ಕಾರ್ಯಕ್ರಮವು ಇಲ್ಲಿನ ಮಲ್ಲೇಗೌಡ ಸಾರ್ವಜನಿಕ ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉತ್ತಮ ರೀತಿ ಅನುಷ್ಠಾನ ಆಗಿದೆ ಎಂದು ರಾಷ್ಟ್ರೀಯ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಕೇಂದ್ರದ ನಿರ್ದೇಶಕಿ ಡಾ.ತನುಜ ತಿಳಿಸಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ನೇತೃತ್ವದ ಕೇಂದ್ರದ ತಂಡವು ಕರ್ನಾಟಕ ರಾಜ್ಯದ ೧೪ ಜಿಲ್ಲೆಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಲೇರಿಯಾ ನಿರ್ಮೂಲನಾ ಕಾರ್ಯಕ್ರಮ ಅನುಷ್ಠಾನ ಕುರಿತು ಪರಿಶೀಲನೆ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು. ಇದರ ಅಂಗವಾಗಿ ಇಂದು ಮಲ್ಲೇಗೌಡ ಜಿಲ್ಲಾ ಆಸ್ಪತ್ರೆ ಸೇರಿದಂತೆ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ ಎಂದರು.
ಕೇಂದ್ರ ಸರ್ಕಾರವು ೨೦೩೦ರ ವೇಳೆಗೆ ದೇಶಾದ್ಯಂತ ಸಂಪೂರ್ಣ ಮಲೇರಿಯಾ ನಿರ್ಮೂಲನೆ ಮಾಡಬೇಕೆಂಬ ಗುರಿ ಹೊಂದಿದೆ. ಈ ಉದ್ದೇಶದಿಂದ ನ್ಯಾಷನಲ್ ಹೆಲ್ತ್ ಮಿಷನ್ ಯೋಜನೆಯಡಿ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಿಗೆ ನೆರವು ನೀಡುತ್ತಿದೆ ಎಂದರು. ಇಂದು ಮತ್ತೊಂದು ತಂಡ ಹಾಸನ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಉಳಿದ ೧೨ ಜಿಲ್ಲೆಗಳಿಗೆ ಮುಂದಿನ ತಿಂಗಳು ಭೇಟಿ ನೀಡಿ ಪರಿಶೀಲಿಸುತ್ತೇವೆ. ಈ ಜಿಲ್ಲೆಯಲ್ಲಿ ಮಲೇರಿಯಾ ಸೇರಿದಂತೆ ವಾಹಕ ಆಶ್ರಿತ ರೋಗಗಳ ನಿರ್ಮೂಲನೆ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಿರುವುದಕ್ಕೆ ಆರೋಗ್ಯ ಇಲಾಖೆಯನ್ನು ಅಭಿನಂದಿಸುತ್ತೇವೆ ಎಂದು ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಸಹನಿರ್ದೇಶಕ ಬೆಂಗಳೂರಿನ ಡಾ.ಷರೀಫ್ ಮಹಮ್ಮದ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಯಾವುದೇ ಮಲೇರಿಯಾ ಪ್ರಕರಣ ವರದಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಇವುಗಳ ವ್ಯಾಪ್ತಿಯಲ್ಲಿ ಬರುವ ಉಪಕೇಂದ್ರಗಳಲ್ಲಿ ಕೈಗೊಂಡಿರುವ ಮಲೇರಿಯಾ ನಿರ್ಮೂಲನಾ ಕಾರ್ಯ ಚಟುವಟಿಕೆಗಳ ಅಧ್ಯಯನಕ್ಕಾಗಿ ಕೇಂದ್ರದ ತಂಡ ಭೇಟಿ ನೀಡಿದೆ ಎಂದರು.
ಈ ತಂಡವು ಮಲೇರಿಯಾ ನಿರ್ಮೂಲನಾ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರ ಕಾರ್ಯಕ್ಷಮತೆ, ಪ್ರಯೋಗ ಶಾಲೆಗಳ ಮೇಲ್ವಿಚಾರಣೆ, ದಾಖಲಾತಿಗಳ ನಿರ್ವಹಣೆ, ಗ್ರಾಮ ಭೇಟಿ, ಮನೆ ಮನೆ ಭೇಟಿ ಕಾರ್ಯ ಸೇರಿದಂತೆ ರಾಷ್ಟ್ರೀಯ ಕಾರ್ಯಕ್ರಮವಾದ ಮಲೇರಿಯಾ ನಿಯಂತ್ರಣಕ್ಕೆ ಅನುಗುಣವಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ಮಾಡಿ ಜಿಲ್ಲೆಗೆ ಕೇಂದ್ರದಿಂದ ಮಲೇರಿಯಾ ಮುಕ್ತ ಜಿಲ್ಲೆ ಘೋಷಣಾ ಪ್ರಮಾಣ ಪತ್ರ ನೀಡಲು ಈ ತಂಡವು ಶಿಫಾರಸ್ಸು ಮಾಡಲಿದೆ ಎಂದರು.
ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಯಾವುದೇ ಮಲೇರಿಯಾ ಪ್ರಕರಣ ವರದಿಯಾಗದೇ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಮಲೇರಿಯಾ ಮುಕ್ತ ಜಿಲ್ಲೆ ಎಂದು ಕೇಂದ್ರವು ಘೋಷಣೆ ಮಾಡುತ್ತದೆ ಎನ್ನುವ ಭರವಸೆ ಇದೆ ಎಂದು ತಿಳಿಸಿದರು.
ಕೇಂದ್ರದ ತಂಡದಲ್ಲಿ ನ್ಯಾಷನಲ್ ಸೆಂಟರ್ ಫಾರ್ ವೆಕ್ಟರ್ ಬಾರ್ನ್ ಡಿಸೀಸಸ್ ಕಂಟ್ರೋಲ್ನ ನಿರ್ದೇಶಕ ಜಯರಾಮ್ ಅರಸ, ಡಾ.ನಿಧಿ, ಊರ್ವಶಿ ತಿವಾರಿ, ಬಲ್ಬೀರ್, ಅನೀಸ್ ನೇಗಿ, ಡಾ.ರೂಪ್ಕುಮಾರಿ, ಡಾ.ಸೌಮ್ಯ ದೀಪ್ ಚೌಧರಿ, ಡಾ.ಸೇಜಲ್ ತಂಬತ್, ಡಾ.ಮಹಿಮಾ ಚೌಧರಿ ಹಾಗೂ ಆರ್.ಡಿ.ಬೋಪಾಲ್ ಇದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಭರತ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಚಂದ್ರಶೇಖರ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಸೀಮಾ, ಡಾ.ಬಾಲಕೃಷ್ಣ ಮತ್ತು ಸಿಬ್ಬಂದಿಗಳು ಹಾಜರಿದ್ದರು.
District Hospital National Carrier Dependent Disease Control Committee Visit
Leave a comment