ಚಿಕ್ಕಮಗಳೂರು: ದಾವಣಗೆರೆಯ ಪಿ.ಬಿ. ರಸ್ತೆಯ ರೇಣುಕಾ ಮಂದಿರದಲ್ಲಿ ಆ. 29 ಮತ್ತು 30ರಂದು ‘ದೇವನಗರಿ ಪ್ರೋ ಇಮೇಜ್-2026’ ಆಯೋಜಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರೇಣುಕಪ್ಪ ತಿಳಿಸಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಛಾಯಾಗ್ರಹಣ ಕ್ಷೇತ್ರದಲ್ಲಿ ಆಗುತ್ತಿರುವ ತಾಂತ್ರಿಕ ಬದಲಾವಣೆಗಳು ಹಾಗೂ ಆಧುನಿಕ ಉಪಕರಣಗಳ ಕುರಿತು ಛಾಯಾಗ್ರಾಹಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆಧುನಿಕ ಕ್ಯಾಮೆರಾ ಕಂಪನಿಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು, ಛಾಯಾಗ್ರಾಹಕರಿಗೆ ಉಚಿತ ಕ್ರಿಯೇಟಿವ್ ಕಾರ್ಯಾಗಾರಗಳು, ಹಳೆಯ ಕ್ಯಾಮೆರಾಗಳ ಖರೀದಿ ಮತ್ತು ಮಾರಾಟಕ್ಕೆ ವ್ಯವಸ್ಥೆ, ವಿವಿಧ ಮಾದರಿಯ ಕ್ಯಾಮೆರಾಗಳ ಸರ್ವಿಸ್ ಸೌಲಭ್ಯ ಇರಲಿದೆ. ಮದುವೆ, ಫ್ಯಾಷನ್ ಮತ್ತು ಪ್ರೀ-ವೆಡ್ಡಿಂಗ್ ಛಾಯಾಗ್ರಹಣ ಸೆಷನ್ಗಳು, ಆಲ್ಬಮ್ ಪ್ರಿಂಟಿಂಗ್ ಲ್ಯಾಬ್ಗಳ ಪ್ರದರ್ಶನ ಹಾಗೂ ಛಾಯಾಗ್ರಹಣಕ್ಕೆ ಸಂಬಂಧಿಸಿದ ವಿವಿಧ ಸಲಕರಣೆಗಳ ರಿಯಾಯಿತಿ ದರದ ಮಾರಾಟವೂ ನಡೆಯಲಿದೆ ಎಂದು ಹೇಳಿದರು.
ದೂರದ ಊರುಗಳಿಂದ ಬರುವ ಛಾಯಾಗ್ರಾಹಕರಿಗೆ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲ ಛಾಯಾಗ್ರಾಹಕರಿಗೂ ಉಚಿತ ಉಡುಗೊರೆ ನೀಡಲಾಗುವುದು ಎಂದರು.
ಸೇವಾ ದರ ಪರಿಷ್ಕರಣೆ
ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಸುಮಾರು ಹತ್ತು ವರ್ಷಗಳಿಂದ ಛಾಯಾಚಿತ್ರ ಹಾಗೂ ವೀಡಿಯೋ ಚಿತ್ರೀಕರಣದ ಸೇವಾ ದರವನ್ನು ಹೆಚ್ಚಿಸಿರಲಿಲ್ಲ. ಆದರೆ ಕ್ಯಾಮೆರಾಗಳು ಹಾಗೂ ವೃತ್ತಿಗೆ ಅಗತ್ಯವಿರುವ ಕಚ್ಚಾ ಸಾಮಗ್ರಿಗಳ ಬೆಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಫೋಟೋ ಸ್ಟುಡಿಯೋಗಳಲ್ಲಿ ಪಾಸ್ಪೋರ್ಟ್ ಗಾತ್ರದ ಫೋಟೋ ಸೇರಿದಂತೆ ವಿವಿಧ ಶುಭ ಸಮಾರಂಭಗಳ ಫೋಟೋಗ್ರಫಿ, ವೀಡಿಯೋಗ್ರಫಿ, ಎಲ್ಇಡಿ ವಾಲ್, ಡ್ರೋನ್ ಕ್ಯಾಮೆರಾ ಹಾಗೂ ಫೋಟೋ ಆಲ್ಬಮ್ಗಳ ಸೇವಾ ದರವನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಗ್ರಾಹಕರು ಸಹಕರಿಸಬೇಕು ಎಂದು ರೇಣುಕಪ್ಪ ಮನವಿ ಮಾಡಿದರು.
ಕಲ್ಯಾಣ ಮಂಟಪಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಮನವಿ
ಇತ್ತೀಚಿನ ದಿನಗಳಲ್ಲಿ ಬೆಲೆಬಾಳುವ ಕ್ಯಾಮೆರಾಗಳ ಕಳ್ಳತನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಕಲ್ಯಾಣ ಮಂಟಪಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಇತ್ತೀಚೆಗೆ ಆನ್ಲೈನ್ ಹಾಗೂ ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಗಳ ಮೂಲಕ ಮತ್ತು ದೂರದ ಊರುಗಳ ಛಾಯಾಗ್ರಾಹಕರಿಗೆ ಕೆಲಸ ನೀಡುವ ಪ್ರವೃತ್ತಿ ಹೆಚ್ಚಾಗಿದೆ. ಕೆಲ ಸಂದರ್ಭಗಳಲ್ಲಿ ಗ್ರಾಹಕರಿಗೆ ಸಮರ್ಪಕ ಸೇವೆ ದೊರೆಯದೆ ಸಮಸ್ಯೆ ಎದುರಾಗಿ, ಗ್ರಾಹಕರ ವ್ಯಾಜ್ಯಗಳು ನ್ಯಾಯಾಲಯದ ಮೆಟ್ಟಿಲೇರುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಸ್ಥಳೀಯ ಛಾಯಾಗ್ರಾಹಕರಿಗೂ ಕೆಟ್ಟ ಹೆಸರು ಬರುತ್ತಿದೆ ಎಂದು ಹೇಳಿದರು.
ಆದ್ದರಿಂದ ಗ್ರಾಹಕರು ಸ್ಥಳೀಯ ಫೋಟೋ ಸ್ಟುಡಿಯೋಗಳಿಗೆ ಚಿತ್ರೀಕರಣದ ಕೆಲಸ ನೀಡುವ ಮೂಲಕ ಉತ್ತಮ ಸೇವೆ ಪಡೆದುಕೊಳ್ಳಬೇಕು. ಚಿತ್ರೀಕರಣದ ಡಿಜಿಟಲ್ ಡೇಟಾ ಕಳೆದುಹೋಗುವ ಸಾಧ್ಯತೆ ಇರುವುದರಿಂದ ಕಾರ್ಯಕ್ರಮದ ನಂತರ ಕನಿಷ್ಠ ಮೂರು ತಿಂಗಳೊಳಗಾಗಿ ತಮ್ಮ ವ್ಯವಹಾರವನ್ನು ಪೂರ್ಣಗೊಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರತ್ಯೇಕ ಕಲ್ಯಾಣ ಮಂಡಳಿಗೆ ಆಗ್ರಹ
ಛಾಯಾಗ್ರಹಣ ಕ್ಷೇತ್ರಕ್ಕೆ 187 ವರ್ಷಗಳ ಇತಿಹಾಸವಿದೆ. ರಾಜ್ಯ ಸರ್ಕಾರ ಛಾಯಾಗ್ರಾಹಕರಿಗಾಗಿ ಪ್ರತ್ಯೇಕ ಛಾಯಾಗ್ರಾಹಕರ ಕಲ್ಯಾಣ ಮಂಡಳಿ ಸ್ಥಾಪಿಸಬೇಕು. ಉತ್ತಮ ಸೇವೆ ಸಲ್ಲಿಸುತ್ತಿರುವ ಛಾಯಾಗ್ರಾಹಕರನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು. ನಿವೇಶನ ರಹಿತ ಛಾಯಾಗ್ರಾಹಕರಿಗೆ ನಿವೇಶನ ಒದಗಿಸಬೇಕು ಎಂದು ರೇಣುಕಪ್ಪ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್, ರವಿಕುಮಾರ್, ನವೀನ, ವಿನಯ್, ಪ್ರಜ್ವಲ್ ಹಾಗೂ ನದೀಮ್ ಪಾಷ ಉಪಸ್ಥಿತರಿದ್ದರು.
Devnagari Pro Image-2026 from August 29th in Davangere
Leave a comment