ಚಿಕ್ಕಮಗಳೂರು: ನಿರ್ಮಾಣ ಹಂತದಲ್ಲಿದ್ದ ಅಂಬೇಡ್ಕರ್ ವಸತಿ ನಿಲಯ ಕಟ್ಟಡ ಕಾಮಗಾರಿಗೆ ಸಂಗ್ರಹಿಸಿಟ್ಟಿದ್ದ ಸುಮಾರು 3 ಟನ್ ಕಬ್ಬಿಣದ ಸರಳುಗಳನ್ನು ಕಳ್ಳರು ಕಳವು ಮಾಡಿರುವ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಗ್ಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಸಿರಾಪನಹಳ್ಳಿ ಗ್ರಾಮದ ದಿನೇಶ್ (32) ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಅವರು ಕಳೆದ 15 ದಿನಗಳಿಂದ ಬಿಗ್ಗನಹಳ್ಳಿಯ ನಿರ್ಮಾಣ ಹಂತದ ಅಂಬೇಡ್ಕರ್ ವಸತಿ ನಿಲಯದಲ್ಲಿ ಸೈಟ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಆಗಸ್ಟ್ 22ರಂದು ಸಂಜೆ 6 ಗಂಟೆಗೆ ಕಾಮಗಾರಿ ಮುಗಿಸಿ ಸ್ಥಳದಿಂದ ತೆರಳಿದ್ದರು. ಮರುದಿನ ಬೆಳಿಗ್ಗೆ 8 ಗಂಟೆಗೆ ದಿನೇಶ್ ಹಾಗೂ ಸಹೋದ್ಯೋಗಿ ರವಿ ವಸತಿ ನಿಲಯದ ಬಳಿ ತೆರಳಿ ಪರಿಶೀಲಿಸಿದಾಗ, ಸ್ಥಳದಲ್ಲಿ ಯಾವುದೋ ವಾಹನ ಸಂಚರಿಸಿರುವ ಗುರುತು ಕಂಡುಬಂದಿದೆ. ಅಲ್ಲದೆ, ಕಾಮಗಾರಿಗೆಂದು ಸಂಗ್ರಹಿಸಿಟ್ಟಿದ್ದ ಸುಮಾರು 3 ಟನ್ ಕಬ್ಬಿಣದ ಸರಳುಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
ಕಳವು ಮಾಡಿರುವ ಕಬ್ಬಿಣದ ಸರಳುಗಳ ಅಂದಾಜು ಮೌಲ್ಯ ₹2.10 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಕುರಿತು ಮ್ಯಾನೇಜರ್ಗೆ ಮಾಹಿತಿ ನೀಡಿದ ಬಳಿಕ ದಿನೇಶ್ ಅವರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಬ್ಬಿಣದ ಸರಳುಗಳನ್ನು ಕಳವು ಮಾಡಿದವರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
3 tons of iron bars stolen
Leave a comment