ಕಳಸ: ಮರಸಣಿಗೆ ವ್ಯಾಪ್ತಿಯ ಗುಮ್ಮನ್ ಖಾನ್ ಬಳಿ ತೋಟದ ಪಕ್ಕದಲ್ಲಿ ಚಿರತೆ ಮರಿಗಳು ಪತ್ತೆಯಾಗಿವೆ ಎಂಬ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಕಳಸ ಅರಣ್ಯ ಇಲಾಖೆ ಸಿಬ್ಬಂದಿ, ಅವು ಚಿರತೆ ಮರಿಗಳಲ್ಲ, ಕಾಡು ಬೆಕ್ಕಿನ ಮರಿಗಳು ಎಂದು ಸ್ಪಷ್ಟಪಡಿಸಿದ್ದಾರೆ.
ಗುಮ್ಮನ್ ಖಾನ್ ಸಮೀಪ ಕೆಲವು ಮರಿಗಳು ಕಂಡುಬಂದ ಹಿನ್ನೆಲೆಯಲ್ಲಿ ಅವು ಚಿರತೆ ಮರಿಗಳೆಂಬ ಸುದ್ದಿ ಸ್ಥಳೀಯವಾಗಿ ವೇಗವಾಗಿ ಹರಡಿತ್ತು. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದರು. ಮಾಹಿತಿ ತಿಳಿದ ಕೂಡಲೇ ಕಳಸ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮರಿಗಳನ್ನು ಪರಿಶೀಲಿಸಿದರು.
ಸ್ಥಳ ಪರಿಶೀಲನೆ ಹಾಗೂ ಮರಿಗಳ ಸ್ವರೂಪವನ್ನು ಗಮನಿಸಿದ ಬಳಿಕ ಅವು ಚಿರತೆ ಮರಿಗಳಲ್ಲ ಎಂಬುದು ದೃಢಪಟ್ಟಿದೆ. ಕಾಡು ಬೆಕ್ಕಿನ ಮರಿಗಳು ಎಂದು ಕಳಸ ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿ ಹರೀಶ್ ಸ್ಪಷ್ಟಪಡಿಸಿದ್ದಾರೆ.
ಚಿರತೆ ಮರಿಗಳು ಸಿಕ್ಕಿವೆ ಎಂಬ ವದಂತಿಯಿಂದ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಅರಣ್ಯ ಇಲಾಖೆ ತಿಳಿಸಿದೆ. ಯಾವುದೇ ಕಾಡುಪ್ರಾಣಿಗಳು ಅಥವಾ ಮರಿಗಳು ಕಂಡುಬಂದಲ್ಲಿ ಅವುಗಳ ಬಳಿ ತೆರಳಿ ಮುಟ್ಟುವುದು, ಹಿಡಿಯುವುದು ಅಥವಾ ಗೊಂದಲ ಸೃಷ್ಟಿಸುವ ಬದಲು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಕಾಡುಪ್ರಾಣಿಗಳ ಸುರಕ್ಷತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಅರಣ್ಯ ಇಲಾಖೆ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸುವಂತೆ ಸ್ಥಳೀಯರಿಗೆ ಮನವಿ ಮಾಡಲಾಗಿದೆ.
Fears of leopard cubs; wild cat cubs found
Leave a comment