ಅಜ್ಜಂಪುರ: ಕರ್ತವ್ಯಕ್ಕೆ ತೆರಳುತ್ತಿದ್ದ ಸ್ಕೂಟಿಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪಶುವೈದ್ಯಕೀಯ ಇಲಾಖೆಯ ಅಟೆಂಡರ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಜ್ಜಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗಿರಿಯಾಪುರದ ಜ್ಞಾನ ದೀಪ ಶಾಲೆ ಮುಂಭಾಗದ ಟಾರು ರಸ್ತೆಯಲ್ಲಿ ಆ.20ರಂದು ನಡೆದಿದೆ.
ಮೃತರನ್ನು ಕಡೂರು ತಾಲೂಕು ಕಾಮನಕೆರೆ ಗ್ರಾಮದ ಶಿವೇಗೌಡ ಆರ್.ಎಸ್. (59) ಎಂದು ಗುರುತಿಸಲಾಗಿದೆ. ಅವರು ಚಿಕ್ಕಬಳ್ಳೇಕೆರೆಯ ಪಶುವೈದ್ಯಕೀಯ ಇಲಾಖೆಯಲ್ಲಿ ಅಟೆಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಶಿವೇಗೌಡ ಅವರು ಎಂದಿನಂತೆ ಆ.20ರಂದು ಬೆಳಗ್ಗೆ ತಮ್ಮ ಸ್ಕೂಟಿ (ಕೆಎ-66-ಎಲ್-5615)ಯಲ್ಲಿ ಕರ್ತವ್ಯಕ್ಕೆ ತೆರಳಿದ್ದರು. ಸಂಜೆ ಇಲಾಖೆಗೆ ಸಂಬಂಧಿಸಿದ ಉಪಕರಣಗಳನ್ನು ಕಡೂರಿನಿಂದ ತರಲು ಸ್ಕೂಟಿಯಲ್ಲಿ ತೆರಳುತ್ತಿದ್ದಾಗ, ಗಿರಿಯಾಪುರದ ಜ್ಞಾನ ದೀಪ ಶಾಲೆ ಮುಂಭಾಗದಲ್ಲಿ ಹಿಂದಿನಿಂದ ಬಂದ ಕೆಎ-65-5050 ಸಂಖ್ಯೆಯ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ಬಳಿಕ ಲಾರಿ ಚಾಲಕ ವಾಹನವನ್ನು ನಿಯಂತ್ರಿಸಲಾಗದೆ ಅದರ ಎಡಭಾಗದ ಮುಂದಿನ ಹಾಗೂ ಹಿಂದಿನ ಚಕ್ರಗಳು ಶಿವೇಗೌಡ ಅವರ ಮೇಲೆ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಪಘಾತಕ್ಕೆ ಕಾರಣವಾದ ಲಾರಿಯ ಚಾಲಕನನ್ನು ಸೀತಾರಾಮ ಎಂದು ಗುರುತಿಸಲಾಗಿದೆ. ಘಟನೆ ಕುರಿತು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕನ ವಿರುದ್ಧ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಮೃತದೇಹವನ್ನು ಕಡೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
Veterinary Department staff dies in lorry collision
Leave a comment