ಕಡೂರು: ವ್ಯಾಪಾರಕ್ಕಾಗಿ ಕಡಿಮೆ ಬೆಲೆಯಲ್ಲಿ ಬಟ್ಟೆಗಳನ್ನು ಖರೀದಿಸಿ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹17.58 ಲಕ್ಷ ಪಡೆದು, ₹8 ಲಕ್ಷ ಮೌಲ್ಯದ ಬಟ್ಟೆಗಳನ್ನು ಮಾತ್ರ ಕಳುಹಿಸಿ ಉಳಿದ ಬಟ್ಟೆಗಳನ್ನು ನೀಡದೆ ಹಾಗೂ ವೈಯಕ್ತಿಕವಾಗಿ ಪಡೆದ ₹2.61 ಲಕ್ಷ ಹಣವನ್ನು ವಾಪಸ್ ನೀಡದೆ ವಂಚಿಸಿರುವ ಆರೋಪದಡಿ ನಾಲ್ವರು ವ್ಯಕ್ತಿಗಳ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡೂರು ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ, ಅಕೌಂಟೆಂಟ್ ಆಗಿರುವ ಜಬಿವುಲ್ಲಾ ಎಂಬುವರು ದೂರು ನೀಡಿದ್ದಾರೆ. ಬೆಂಗಳೂರಿನ ಮನ್ಸೂರ್ ಅಹಮ್ಮದ್ ಎಂಬುವರು ಸುಮಾರು ಏಳು ವರ್ಷಗಳಿಂದ ಪರಿಚಯವಿದ್ದು, ಕಡಿಮೆ ಬೆಲೆಯಲ್ಲಿ ಹೈದರಾಬಾದ್ನಿಂದ ಬಟ್ಟೆಗಳನ್ನು ತರಿಸಿಕೊಡುವುದಾಗಿ ಹೇಳಿ ನಂಬಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮನ್ಸೂರ್ ಅವರು ಹೈದರಾಬಾದ್ನ ಬಟ್ಟೆ ಸಗಟು ವ್ಯಾಪಾರಿಗಳಾದ ಮಹಮ್ಮದ್ ಶಾಯಿದ್ದುದ್ದೀನ್, ಮಹಮ್ಮದ್ ಮೋಹಿನುದ್ದೀನ್ ಹಾಗೂ ಮಹಮ್ಮದ್ ಅಬ್ದುಲ್ ಹುಸಾಂ ಅವರ ಪರಿಚಯವಿದೆ ಎಂದು ಹೇಳಿ, ಬಟ್ಟೆಗಳ ವಿಡಿಯೋಗಳನ್ನು ವಾಟ್ಸ್ಆಪ್ ಮೂಲಕ ಕಳುಹಿಸಿದ್ದರು. ಬಳಿಕ ಜಬಿವುಲ್ಲಾ ಹೈದರಾಬಾದ್ಗೆ ತೆರಳಿ ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸಿ, ಒಂದು ಬಟ್ಟೆಗೆ ₹80ರಂತೆ ಒಟ್ಟು 22,756 ಬಟ್ಟೆಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದರು ಎನ್ನಲಾಗಿದೆ.
ಮುಂಗಡ ಹಣದ ಹೆಸರಿನಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹17.58 ಲಕ್ಷ ವರ್ಗಾವಣೆ ಮಾಡಲಾಗಿದೆ. ನಂತರ ₹18.20 ಲಕ್ಷದ ಬಟ್ಟೆಗಳ ಪೈಕಿ ₹8 ಲಕ್ಷ ಮೌಲ್ಯದ ಬಟ್ಟೆಗಳನ್ನು ಮಾತ್ರ ಲಾರಿಯ ಮೂಲಕ ಕಡೂರಿನ ಅಂಗಡಿಗೆ ಕಳುಹಿಸಲಾಗಿದೆ. ಉಳಿದ ₹9.58 ಲಕ್ಷ ಮೌಲ್ಯದ ಬಟ್ಟೆಗಳನ್ನು ಕಳುಹಿಸದೆ ವಿಳಂಬ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದಲ್ಲದೆ, ಮನ್ಸೂರ್ ಅಹಮ್ಮದ್ ವೈಯಕ್ತಿಕ ಹಣದ ಅವಶ್ಯಕತೆಯಿದೆ ಎಂದು ಹೇಳಿ ಜಬಿವುಲ್ಲಾ ಹಾಗೂ ಅವರ ಪತ್ನಿಯ ಫೋನ್ಪೇ ಖಾತೆಗಳಿಂದ ₹3.31 ಲಕ್ಷ ಪಡೆದಿದ್ದು, ಅದರಲ್ಲಿ ₹50 ಸಾವಿರ ಮಾತ್ರ ವಾಪಸ್ ನೀಡಲಾಗಿದೆ. ಉಳಿದ ₹2.61 ಲಕ್ಷವನ್ನು ನೀಡಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಡಿಮೆ ಬೆಲೆಯಲ್ಲಿ ಬಟ್ಟೆ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಬಟ್ಟೆ ನೀಡದೆ ಹಾಗೂ ಪಡೆದ ವೈಯಕ್ತಿಕ ಹಣವನ್ನು ವಾಪಸ್ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿ ಮನ್ಸೂರ್ ಅಹಮ್ಮದ್, ಮಹಮ್ಮದ್ ಶಾಯಿದ್ದುದ್ದೀನ್, ಮಹಮ್ಮದ್ ಅಬ್ದುಲ್ ಹುಸಾಂ ಮತ್ತು ಮೊಹಮ್ಮದ್ ಮೊಹಿನುದ್ದೀನ್ ವಿರುದ್ಧ ಜಬಿವುಲ್ಲಾ ದೂರು ನೀಡಿದ್ದಾರೆ. ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Accused of cheating ₹20.19 lakh by promising to provide clothes at a low price
Leave a comment