ತರೀಕೆರೆ: ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತರೀಕೆರೆ, ಅಜ್ಜಂಪುರ ತಾಲ್ಲೂಕಿನ ಪರವಾನಗಿ ಭೂಮಾಪಕರ ಸಂಘದ ಪದಾಧಿಕಾರಿಗಳು ಭೂದಾಖಲೆಗಳ ಸಹಾಯಕ ನಿರ್ದೇಶಕ ಮಂಜುನಾಥ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.
ಸರ್ಕಾರಿ ಭೂಮಾಪಕರಿಗೂ, ಪರವಾನಗಿ ಭೂಮಾಪಕರಿಗೂ ವೇತನದಲ್ಲಿ ಬಹಳ ತಾರತಮ್ಯವಿದೆ. ದರ್ಖಾಸ್ತು, ಕೆರೆ, ದೇವಸ್ಥಾನ, ಕೋರ್ಟ್ ಪ್ರಕರಣ ಇತ್ಯಾದಿ ಅಳತೆ ಕೆಲಸಗಳನ್ನು ಪರವಾನಗಿ ಭೂಮಾಪಕರು ನಿರ್ವಹಿಸುತ್ತಿದ್ದಾರೆ. ಆಕಾರ್ಬಂದು ಗಣಕೀಕರಣ, ನಕ್ಷಾ ಯೋಜನೆ ಸೇರಿದಂತೆ ವಿವಿಧ ರೀತಿಯಲ್ಲಿ ಭೂಮಾಪನ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನಮಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ. ಕನಿಷ್ಠ ಸವಲತ್ತುಗಳಿಂದಲೂ ವಂಚಿತರಾಗಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಅಳತೆ ಕೆಲಸಕ್ಕೆ, ನೋಟಿಸ್ ಮಾಡುವುದಕ್ಕೆ ಅಗತ್ಯವಿರುವ ಬಾಂದು ಜವಾನರನ್ನು ನೀಡಿರುವುದಿಲ್ಲ. ಆದರೆ ಸಂಬಳ ನಿಗದಿ ಮಾಡಿರುವುದಿಲ್ಲ. ಆರೋಗ್ಯ ವಿಮೆ, ಭವಿಷ್ಯ ನಿಧಿ ಸೌಲಭ್ಯ ನೀಡಬೇಕು. ತಾಂತ್ರಿಕ ದೋಷಗಳಿಂದ ಆಗುವ ಸಮಸ್ಯೆಗಳಿಗೆ ಮೇಲಧಿಕಾರಿಗಳಿಂದ ನೋಟಿಸ್ ಪಡೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತಿದೆ. ಸರ್ಕಾರಿ ಭೂಮಾಪಕರಿಗೆ ನೀಡುವ ವೇತನ ಮತ್ತಿತರೆ ಸೌಲಭ್ಯಗಳನ್ನು ನಮಗೂ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಭೂದಾಖಲೆಗಳ ಕಚೇರಿ ಅಧೀಕ್ಷಕ ಮಹೇಶ್, ಪರವಾನಗಿ ಭೂಮಾಪಕರ ಸಂಘದ ಅಧ್ಯಕ್ಷ ಮಂಜುನಾಥ್, ಶ್ರೀನಿವಾಸ್, ದರ್ಶನ್ ಜೊತೆಗಿದ್ದರು.
Demand for health insurance-provident fund facility
Leave a comment