ಚಿಕ್ಕಮಗಳೂರು: ನಗರದ ರಸ್ತೆಗಳಲ್ಲಿ ನಿಗದಿತ ಅವಧಿಗಿಂತ ಹೆಚ್ಚು ಕಾಲ ವಾಹನಗಳನ್ನು ನಿಲುಗಡೆ ಮಾಡುತ್ತಿರುವ ಕ್ರಮಕ್ಕೆ ಕಡಿವಾಣ ಹಾಕುವಂತೆ ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆ ನಗರಸಭೆಯನ್ನು ಒತ್ತಾಯಿಸಿದೆ.
ಸಂಘಟನೆಯ ರಾಜ್ಯಾಧ್ಯಕ್ಷ ಸೋಮು ನಾಯಕ್ ಅವರ ನೇತೃತ್ವದಲ್ಲಿ ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮತ್ತು ಉಪಾಧ್ಯಕ್ಷೆ ಲಲಿತಾ ರವಿನಾಯ್ಕ್ ಅವರನ್ನು ಶನಿವಾರ ಭೇಟಿ ಮಾಡಿದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಇತ್ತೀಚಿನ ವರ್ಷಗಳಲ್ಲಿ ದಿನೇ ದಿನೇ ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು ನಗರದ ರಸ್ತೆಗಳು ಸದಾಕಾಲ ಪ್ರವಾಸಿಗರ ವಾಹನಗಳಿಂದ ತುಂಬಿರುತ್ತವೆ, ಇದರ ನಡುವೆ ಆ ರಸ್ತೆಗಳ ಕೆಲ ಸ್ಥಳೀಯರು ತಮ್ಮ ವಾಹನಗಳನ್ನು ರಸ್ತೆ ಬದಿಯಲ್ಲಿ ಖಾಯಂ ಆಗಿ ನಿಲ್ಲಿಸುವುದರಿಂದ ಉಳಿದ ವಾಹನಗಳಿಗೆ ನಿಲುಗಡೆಗೆ ಸ್ಥಳ ಸಿಗದೇ ಪರದಾಡುವಂತಾಗಿದೆ ಎಂದು ಆರೋಪಿಸಿದರು.
ಸ್ಥಳೀಯರು ತಮ್ಮ ವಾಹನಗಳನ್ನು ತಮ್ಮ ಖಾಸಗೀ ಜಾಗದಲ್ಲಿ ನಿಲ್ಲಿಸಿದರೆ ನಗರದ ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಹಾಗೂ ನಿಲುಗಡೆಗೆ ಸ್ಥಳ ದೊರೆಯುತ್ತದೆ ಎಂದ ಪದಾಧಿಕಾರಿಗಳು ಈ ಹಿನ್ನೆಲೆಯಲ್ಲಿ ಯಾವುದೇ ವ್ಯಕ್ತಿ ಏಳು ದಿನಗಳ ಕಾಲ ರಸ್ತೆಯಲ್ಲಿ ವಾಹನವನ್ನು ನಿಲ್ಲಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಆಗ್ರಹಿಸಿದರು.
ನಗರದ ರಸ್ತೆ ಬದಿಗಳಲ್ಲಿ ಮತ್ತು ಪಾದಾಚಾರಿಗಳಿಗೆ ಮೀಸಲಿಟ್ಟ ರಸ್ತೆಗಳ ಮೇಲೆ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿರುವುದನ್ನು ತಡೆಗಟ್ಟುವಂತೆ ಒತ್ತಾಯಿಸಿದರು. ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆಯ ಪದಾಧಿಕಾರಿಗಳಾದ ಒ ಆ ಓ ಭಾಷಾ, ಮಾಕೇನಹಳ್ಳಿಸುಕೇಶ್, ಖಲಂದರ್, ರೂಪೇಶ್ ಹಾಜರಿದ್ದರು.
Demand for action against long-term parking
Leave a comment