ಚಿಕ್ಕಮಗಳೂರು: ಬಡವರಿಗಾಗಿ ೨೦೧೬ ರಲ್ಲಿ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ದಂತಭಾಗ್ಯ ಯೋಜನೆ ಇಂದು ಅನೇಕ ಬಡವರಿಗೆ ಆಸರೆಯಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾಸ್ಪತ್ರೆ, ನಿಟ್ಟೆ ಎ.ಬಿ. ಶೆಟ್ಟಿ ಡೆಂಟಲ್ ಕಾಲೇಜು ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ದಂತಜೋಡಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ೬೦ ವರ್ಷ ಮೇಲ್ಪಟ್ಟ ವಯೊಮಾನದವರಿಗೆ ೨೦೧೬ ರಲ್ಲಿ ಸಿದ್ರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ದಂತಭಾಗ್ಯ ಯೋಜನೆ ತಂದಿದ್ದಾರೆ.
ಬಿಪಿಎಲ್ ಕಾರ್ಡ್ ಹೊಂದಿರುವ ೬೦ ವರ್ಷ ಮೇಲ್ಪಟ್ಟವರು ಈ ಯೋಜನೆ ಲಾಭ ಪಡೆಯಬಹುದಿತ್ತು. ಈಗ ವಯೋಮಾನದ ಮಿತಿಯನ್ನು ೪೫ ವರ್ಷಕ್ಕೆ ಇಳಿಸಿದ್ದು ಇದರಿಂದ ಸಾಕಷ್ಟು ಬಡವರಿಗೆ ಅನುಕೂಲ ಆಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ದಂತ ಜೋಡಣೆಗೆ ೬೦-೭೦ ಸಾವಿರ ರೂ. ಪಾವತಿಸಬೇಕು. ಇಲ್ಲಿ ಉಚಿತವಾಗಿ ಸೌಲಭ್ಯ ನೀಡುತ್ತಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.
ಜಿಲ್ಲಾಸ್ಪತ್ರೆ ದಂತ ರೋಗ ವೈದ್ಯಾಕಾರಿ ಡಾ.ಪ್ರೇಂಕುಮಾರ್ ಪ್ರಾಸ್ತಾವಿಕ ಮಾತನಾಡಿ, ಉಚಿತ ಕೃತಕ ದಂತಪಂಕ್ತಿ ಜೋಡನಾ ಶಿಬಿರವನ್ನು ಕರ್ನಾಟಕ ಸರಕಾರ ದಂತಭಾಗ್ಯ ಯೋಜನೆ ಹೆಸರಲ್ಲಿ ಜಾರಿಗೆ ತಂದಿದೆ. ೩ ಹಲ್ಲುಗಳಿಗಿಂತ ಹೆಚ್ಚು ಹಲ್ಲುಗಳು ಹೋಗಿದ್ದರೆ ಅಂತವರು ಈ ಯೋಜನೆ ಲಾಭ ಪಡೆಯಬಹುದು ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಹಲ್ಲುಗಳ ಜೋಡಣೆ ಹಾಕಿಸಿಕೊಳ್ಳಲು ಬಡಜನರಿಗೆ ಹೆಚ್ಚು ಹಣ ವ್ಯಯಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ದಂತಭಾಗ್ಯ ಯೋಜನೆ ಮೂಲಕ ಹಲ್ಲುಸೆಟ್ಟು ಕಟ್ಟಿಸಿಕೊಳ್ಳಲು ಅನುಕೂಲ ಕಲ್ಪಿಸಿರುವುದು ತುಂಬಾ ಜನರಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.
ಜಿಲ್ಲಾಸರ್ಜನ್ ಡಾ. ಚಂದ್ರಶೇಖರ್ ಸ್ವಾಗತಿಸಿದರು. ಡಿಎಚ್ಒ ಡಾ.ಅಶ್ವತ್ಬಾಬು, ಡಿಎಸ್-೨ ಚಂದ್ರಶೇಖರಸಾಲಿಮಠ, ನಿಟ್ಟೆ ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜಿನ ಡಾ.ಚೇತನ ಹೆಗ್ಡೆ, ವಿವಿಧ ತಾಲೂಕಿನಿಂದ ಆಗಮಿಸಿದ್ದ ದಂತವೈದ್ಯರು, ಅಧಕಾರಿ ಸಿಬ್ಬಂದಿ ಕಾರ್ಯಕ್ರಮದಲ್ಲಿದ್ದರು.
Danthabhagya Yojana a support for the poor
Leave a comment