ಮೂಡಿಗೆರೆ: ‘ಪರಿಶಿಷ್ಟ ಪಂಗಡದ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಒಳಮೀಸಲಾತಿ ಜಾರಿಗೊಳಿಸಲು ಅಧ್ಯಯನ ನಡೆಸುವ ಸಲುವಾಗಿ ಸರ್ಕಾರ ಆಯೋಗವೊಂದನ್ನು ರಚಿಸಿ, ಅದರ ವರದಿಯ ಆಧಾರದ ಮೇಲೆ ಶೀಘ್ರವಾಗಿ ಒಳಮೀಸಲಾತಿ ಜಾರಿಗೊಳಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.
ಗಿರಿಜ್ಯೋತಿ ಗಿರಿಜನ ಸಂಘದಿಂದ ಪಟ್ಟಣದ ಲ್ಯಾಂಪ್ಸ್ ಸಹಕಾರ ಸಂಘದ ಭವನದಲ್ಲಿ ಶುಕ್ರವಾರ ನಡೆದ ಶ್ರೀಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ವಾಲ್ಮೀಕಿ ಹೊರತು ಪಡಿಸಿದರೆ, ಪ. ಪಂಗಡದ 49 ಬುಡಕಟ್ಟು ಸಮುದಾಯಗಳಿವೆ. 2024ರಲ್ಲಿ ಸರ್ಕಾರ ಪ. ಜಾತಿಗೆ ಒಳಮೀಸಲಾತಿ ಘೋಷಿಸಿದೆ. ಅದನ್ನು ಪ. ಪಂಗಡದ ಸಮುದಾಯಗಳಿಗೂ ವಿಸ್ತರಿಸಬೇಕು. ಅರಣ್ಯ ಹಕ್ಕು ಕಾಯ್ದೆಯಂತೆ ಪ್ರತಿ ಆದಿವಾಸಿಗೆ ಜಮೀನು ಒದಗಿಸಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯ ಕೊರತೆಯಿಂದಾಗಿ ಆದಿವಾಸಿಗಳ ಕಾಲೆಳೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದಿವಾಸಿಗಳು ಪಡೆದಿರುವುದಕ್ಕಿಂತ ಹೆಚ್ಚು ಸಮಾಜಕ್ಕೆ ಕೊಟ್ಟಿದ್ದಾರೆ. ರೋಗಗಳಿಗೆ ಗಿಡಮೂಲಿಕೆ ಔಷಧಗಳನ್ನು ನೀಡಲು ಆರಂಭಿಸಿದವರು ಆದಿವಾಸಿಗಳು ಎಂಬುದನ್ನು ಆಳುವ ವರ್ಗ ಅರ್ಥಮಾಡಿಕೊಳ್ಳಬೇಕು ಎಂದರು.
ಆಧ್ಯಾತ್ಮಿಕತೆ, ಪೂಜೆ, ಪುನಸ್ಕಾರಗಳನ್ನು ಕಲಿತಿದ್ದಾರೆ. ಮನುಷ್ಯನಿಗೆ ಜ್ಞಾನ, ಶಿಕ್ಷಣ, ಆಧ್ಯಾತ್ಮಿಕ ಶಕ್ತಿ, ಸಂಘಟನಾ ಶಕ್ತಿ ಮತ್ತು ಸಾಮರ್ಥ್ಯ ಇವೆಲ್ಲವೂ ಬೇಕು. ಎಲ್ಲಾ ರಂಗದಲ್ಲಿ ಆದಿವಾಸಿಗಳು ಬಲಿಷ್ಠರಾಗಿದ್ದಾರೆ. ಪ್ರತಿಯೊಬ್ಬರಿಗೂ ನಿವೇಶನ, ಮನೆ ದೊರಕಿದಾಗ ಮಾತ್ರ ಶಿಕ್ಷಣ ಮತ್ತು ಸ್ವಾತಂತ್ರ್ಯ ಸಿಗುತ್ತದೆ’ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಮುಖಂಡ ಬಿ.ಬಿ. ನಿಂಗಯ್ಯ, ‘300 ಸರ್ಕಾರಿ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಖಾಸಗೀಕರಣಗೊಳಿಸಿದ್ದರಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇದರಿಂದ ನೇರವಾಗಿ ಪ.ಜಾತಿ ಹಾಗೂ ಪಂಗಡದ ಸಮುದಾಯಗಳ ಉದ್ಯೋಗಿಗಳ ಮೇಲೆ ಸವಾರಿ ಮಾಡಿದಂತಾಗಿದೆ. ರಾಜಕೀಯ ಕುತಂತ್ರದಿಂದಾಗಿ ಪ.ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತರು ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅಂಬೇಡ್ಕರ್ ಹಾಗೂ ಬಿರ್ಸಾ ಮುಂಡಾ ಅವರ ಆಶಯವನ್ನು ಈಡೇರಿಸಲು ಸರ್ಕಾರಗಳು ಸಿದ್ಧವಾಗಿಲ್ಲ. ಹಾಗಾಗಿ ನಮಗೆ ಯಾವುದೆ ರಾಜಕೀಯ ಪಕ್ಷದ ಅಗತ್ಯವಿಲ್ಲ. ಉತ್ತಮ ಅಭ್ಯರ್ಥಿಯನ್ನು ಒಗ್ಗಟ್ಟಾಗಿ ಆಯ್ಕೆ ಮಾಡಬೇಕು. ರಾಜಕೀಯವಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ, ಸಾಮಾಜಿಕವಾಗಿ ಇನ್ನೂ ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದರು.
ಗಿರಿಜ್ಯೋತಿ ಗಿರಿಜನ ಸಂಘದ ಅಧ್ಯಕ್ಷ ವಿಜೇಂದ್ರ, ಕಾಂಗ್ರೆಸ್ ಮುಖಂಡ ಎಂ.ಪಿ. ಕುಮಾರಸ್ವಾಮಿ, ರಾಜ್ಯ ಲ್ಯಾಂಪ್ಸ್ ಮಹಾ ಮಂಡಳಿ ಮಾಜಿ ಅಧ್ಯಕ್ಷ ಮುತ್ತಪ್ಪ, ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಆರ್. ಕೃಷ್ಣ, ತಾಲ್ಲೂಕು ಹಸಲರು ಸಂಘದ ಅಧ್ಯಕ್ಷ ಕೆ.ಟಿ. ಪೂವಪ್ಪ, ಹಳೆಮೂಡಿಗೆರೆ ಗ್ರಾ.ಪಂ. ಸದಸ್ಯ ಚಂದ್ರೇಶ್, ಸತ್ತಿಹಳ್ಳಿ ಗ್ರಾ.ಪಂ. ಸದಸ್ಯ ವಿಶ್ವ, ಮುಖಂಡರಾದ ಹರೀಶ್ ಸಬ್ಬೇನಹಳ್ಳಿ, ಚಂದ್ರಶೇಖರ್, ಪುಷ್ಪ, ಸುನಿತಾ, ಮಹೇಶ್, ಗಿರಿಜನ ಅಭಿವೃದ್ಧಿ ಇಲಾಖೆ ಅಧಿಕಾರಿ ನವೀನ್, ಸಮಾಜ ಕಲ್ಯಾಣ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸೋಮಶೇಖರ್, ಲ್ಯಾಂಪ್ಸ್ ಸೊಸೈಟಿ ಸಿಇಒ ಎಚ್.ಕೆ. ಕೃಷ್ಣಪ್ಪ ಇದ್ದರು.
‘Create a Scheduled Tribes Reservation Commission’
Leave a comment