ಚಿಕ್ಕಮಗಳೂರು:ಭದ್ರಾ ಅಭಯಾರಣ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಮೌನವಹಿಸಿದ್ದಾರೆಂದು ದಲಿತ ಸಂಘರ್ಷಸಮಿತಿ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಮಾತನಾಡಿ,ಜಿಲ್ಲೆಯಲ್ಲಿ ಕಳೆದ ೨೬ ವರ್ಷಗಳಿಂದ ಭದ್ರಾಅಭಯಾರಣ್ಯ ಘೋಷಣೆಯಾಗಿರುವುದು ಸರಿಯಷ್ಟೆ ಈ ಯೋಜನೆಯಿಂದ ದಟ್ಟವಾದ ಅರಣ್ಯ, ಜೀವಸಂಕುಲ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯೊಂದಿಗೆ ಜಿಲ್ಲೆ ಹೆಸರುವಾಸಿಯಾಗುತ್ತದೆ ಎಂಬುದು ಸ್ಥಳೀಯರ ಕನಸಾಗಿತ್ತು. ದುರಂತವೆಂದರೆ ಅಭಿವೃದ್ಧಿಯ ಬದಲಾಗಿದೆ. ಅಭಯಾರಣ್ಯ ಪ್ರತಿನಿತ್ಯ ಭ್ರಷ್ಟಾಚಾರದ ಕೂಡಾಗುತ್ತಿದೆ ಎಂದು ದೂರಿದರು.
ಈ ಕುರಿತು ಭದ್ರಾಹುಲಿ ಸಂರಕ್ಷಿತ ಕಚೇರಿಯ ಉಪಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮತ್ತು ಅರಣ್ಯ ಸಚಿವರಿಗೆ ಮನವಿ ಪತ್ರವನ್ನು ಕಳುಹಿಸಿಕೊಡಲಾಗಿದೆ. ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿ ಮತ್ತು ನೌಕರರನ್ನು ಅಮಾನತುಪಡಿಸಬೇಕೆಂದು ಒತ್ತಾಯಿಸಲಾಗಿದೆ ಎಂದರು.
ಮತ್ತೋಡಿ ಅಭಯಾರಣ್ಯದಲ್ಲಿ ನಡೆಯುತ್ತಿರುವ ಸಫಾರಿಗೆ ನಗದು ಪಡೆದುಕೊಳ್ಳಲಾಗುತ್ತಿದ್ದು, ನಿಗದಿತ ಅವಧಿಗೂ ಮೀರಿಸಫಾರಿ ನಡೆಯುತ್ತಿದ್ದು, ಸಫಾರಿಗೆ ಬರುವ ಪ್ರವಾಸಿಗರಿಂದ ಖಾಸಗಿ ವ್ಯಕ್ತಿಯ ಮೊಬೈಲ್ ಸ್ಕ್ಯಾನರ್ಗೆ ಹಣಹೋಗುತ್ತಿದ್ದು, ಸರ್ಕಾರಕ್ಕೆ ಹಣವನ್ನು ಜಮೆಮಾಡದೆ ವಂಚಿಸಲಾಗುತ್ತಿದೆ.ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ನಗದು ಪಡೆದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಪ್ರವಾಸಿಗರನ್ನು ಸಫಾರಿಗೆ ಕರೆದುಕೊಂಡು ಹೋಗಲು ಕೆಲವು ವಾಹನದಲ್ಲಿ ಬಳಸಿಕೊಳ್ಳಲಾಗುತ್ತಿದೆ.ಈ ವಾಹನವನ್ನು ೪ ಕಿ.ಮೀ. ದೂರದಲ್ಲಿರುವ ಸಿರವಾಸೆಗೆ ತೆಗೆದುಕೊಂಡುಹೋಗಿ ಮದ್ಯವನ್ನು ಖರೀದಿಸಿ ತರಲಾಗುತ್ತಿದೆ. ಈ ಕುರಿತು ಪ್ರಶ್ನಿಸಿದರೆ ಉತ್ತರಿಸಿದೆ ವಾಹನದಲ್ಲಿ ತೆರಳುತ್ತಾರೆಂದು ದೂರಿದರು.
ಸಫಾರಿ ವಾಹನಗಳನ್ನು ಕೆಲವರು ಮನೆಗೆ ತೆಗೆದುಕೊಂಡುಹೋಗುತ್ತಾರೆ. ಈ ಕುರಿತು ಅಧಿಕಾರಿಗಳನ್ನು ಕೇಳಿದರೆ ಮೇಲಾಧಿಕಾರಿಗಳಿಗೆ ಹೇಳಿದ್ದಾರೆನ್ನುತ್ತಾರೆ.ವಾರಕ್ಕೊಮ್ಮೆ ಪೋನ್ಪೇ, ಗೂಗಲ್ಪೇ ಮೂಲಕ ಬಂದ ಸಫಾರಿ ಹಣವನ್ನು ಚಾಲಕರು ಮತ್ತು ನೌಕರರು ಹಂಚಿಕೊಳ್ಳುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದರು.
ಯಾವುದೇ ಯಂತ್ರೋಪಕರಣಗಳನ್ನು ಅಭಯಾರಣ್ಯದೊಳಗೆ ಬಳಸುವಂತಿಲ್ಲ ಆದರೆ ಅರಣ್ಯದೊಳಗೆ ಕುರುಚಲು ಗಿಡಗಳನ್ನು ಕತ್ತರಿಸಲು ೧೫ಕ್ಕೂ ಹೆಚ್ಚು ಪೆಟ್ರೋಲ್ ವೈಡ್ಕಟಿಂಗ್ ಯಂತ್ರಗಳನ್ನು ಬಳಸಲಾಗುತ್ತಿದೆ. ರಸ್ತೆ ನಿರ್ಮಿಸಲು ಜೆಸಿಬಿಗಳನ್ನು ಬಳಸಲಾಗುತ್ತಿದೆ.ಯಂತ್ರಗಳ ಶಬ್ದಕ್ಕೆ ಬೆದರುವ ಪ್ರಾಣಿಗಳು ಕಾಡುತೊರೆದು ನಾಡಿಗೆ ಬರಲು ಕಾರಣವಾಗಿದೆ ಎಂದು ತಿಳಿಸಿದರು.
ಪ್ರತಿವರ್ಷ ಬೆಂಕಿಯನ್ನು ನಂದಿಸಲು ತಂಡವನ್ನು ರಚಿಸಿಕೊಂಡು ಫೈರ್ಲೈನ್ ಮಾಡಲಾಗುತ್ತದೆ ಆದರೆ ಮಾರ್ಚ್ ತಿಂಗಳು ಕಳೆದರೂ ಅಂದಾಜು ಪಟ್ಟಿಯಲ್ಲಿರುವಂತೆ ಫೈರ್ಲೈನ್ಗಳ ಕಾರ್ಯಮುಕ್ತಾಯಗೊಂಡಿಲ್ಲ ಎಂದು ಹೇಳಿದ ಅವರು, ಈ ದೂರುಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಸರ್ಕಾರಕ್ಕೆ ವಂಚಿಸಿರುವ ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸಲು ಅಧಿಕಾರಿಗಳು ಮುಂದಾಗಬೇಕೆಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪುಟ್ಟಸ್ವಾಮಿ, ವೆಂಕಟೇಶ್ ಇದ್ದರು.
Corruption in Bhadra Sanctuary
Leave a comment