ಚಿಕ್ಕಮಗಳೂರು: ಕಾಂಗ್ರೆಸ್ ಮುಖಂಡ ಡಿ.ಎಸ್.ಚಂದ್ರೇಗೌಡ ಅವರ ಅಕಾಲಿಕ ನಿಧನದಿಂದ ಪಕ್ಷ ಹಾಗೂ ಸಮಾಜಕ್ಕೆ ನಷ್ಟ ಉಂಟಾಗಿದೆ. ಅವರು ಹಣವಷ್ಟೇ ಅಲ್ಲದೆ ಜನರನ್ನೂ ಸಂಪಾದನೆ ಮಾಡಿದ್ದರು ಎಂದು ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಬಿ.ಎಲ್.ಶಂಕರ್ ಹೇಳಿದರು.
ಇತ್ತೀಚೆಗೆ ಅಪಘಾತದಲ್ಲಿ ನಿಧನರಾಗಿದ್ದ ಡಿ.ಎಸ್.ಚಂದ್ರೇಗೌಡ ಸೇರಿದಂತೆ ಅವರ ಪತ್ನಿ ಸರೋಜ ಹಾಗೂ ಸಂಬಂಧಿ ಜಯಲಕ್ಷ್ಮಿ ಅವರಿಗೆ ನಗರದ ಕನಕ ಸಮುದಾಯ ಭವನದಲ್ಲಿ ಜಿಲ್ಲಾ ಕುರುಬರ ಸಂಘ, ತಾಲ್ಲೂಕು ಕುರುಬರ ಸಂಘ, ನಾಗರೀಕ ವೇದಿಕೆ, ಜಿಲ್ಲಾ ಸಂಗೋಳಿ ರಾಯಣ್ಣ ವೇದಿಕೆ, ಕನಕಶ್ರೀ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಗರಸಭೆ ಮಾಜಿ ಸದಸ್ಯರು, ಸಿಡಿಎ ಮಾಜಿ ಅಧ್ಯಕ್ಷರೂ ಆಗಿದ್ದ ಚಂದ್ರೇಗೌಡ ಅವರು, ರಾಜಕಾರಣದಲ್ಲಿ ಬಹಳ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದವರಲ್ಲ. ಆದರೆ, ಪಕ್ಷಕ್ಕಾಗಿ ಶ್ರಮಿಸಿದ್ದರು. ಯಾವುದೇ ಚುನಾವಣೆ ಸಂದರ್ಭದಲ್ಲಿ ಪಕ್ಷದ ಗೆಲುವಿಗೆ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಎಲ್ಲಾ ಪಕ್ಷದಲ್ಲೂ ಅವರ ವಿಶ್ವಾಸಿಗಳಿದ್ದರು ಎಂದು ಹೇಳಿದರು.
ಚಂದ್ರೇಗೌಡ ಅವರು, ರಾಜಕಾರಣಿಯಾಗಿ ಅಜಾತ ಶತೃವಾಗಿ ಜೀವನ ರೂಪಿಸಿಕೊಂಡಿದ್ದರು. ಆದರೆ, ಅನಿರೀಕ್ಷಿತ ಘಟನೆಯಲ್ಲಿ ಅವರು ಪತ್ನಿ ಹಾಗೂ ಸಂಬಂದಿ ಸಮೇತ ನಮ್ಮನ್ನಗಲಿದ್ದಾರೆ. ಅವರಿಗೆ ದೇವರು ಚಿರಶಾಂತಿ ಕರುಣಿಸಲಿ, ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕೋರಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಚಂದ್ರೇಗೌಡ ಅವರ ಅಗಲಿಕೆಯಿಂದ ಅವರ ಕುಟುಂಬಕ್ಕಷ್ಟೇ ಅಲ್ಲದೆ ಇಡೀ ಕುರುಬ ಸಮಾಜ ಹಾಗೂ ಜಿಲ್ಲೆಯ ಜನತೆಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ನಷ್ಟ ಉಂಟಾಗಿದೆ. ಚಂದ್ರೇಗೌಡ ಅವರ ಮಾತು ನಿಷ್ಠುರವಾಗಿರುತ್ತಿತ್ತು. ಆದರೆ ಅವರ ಹೃದಯ ಅಷ್ಟೇ ಮೃಧುವಾಗಿತ್ತು. ನಗರಸಭೆ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಮೊಟ್ಟ ಮೊದಲ ವ್ಯಕ್ತಿ ಚಂದ್ರೇಗೌಡರಾಗಿದ್ದರು. ಸಮಾಜ ಹಾಗೂ ಪಕ್ಷದ ನಡುವೆ ಸಮಾಜಮುಖಿಯಾಗಿ ಕೆಲಸ ಮಾಡಿದ ಪರಿಣಾಮ ಅಪಾರ ಜನ ಬೆಂಬಲವನ್ನು ಪಡೆದಿದ್ದರು ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಚಂದ್ರೇಗೌಡ ಅವರು ನೇರನುಡಿಯ ವ್ಯಕ್ತಿ. ಅವರ ಮನಸಿನಲ್ಲಿ ಕಲ್ಮಷ ಇರಲಿಲ್ಲ. ಯಾವುದೇ ಕೆಲಸವನ್ನು ವಹಿಸಿದರೂ ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದರು. ಅವರ ಅಕಾಲಿಕ ಅಗಲಿಕೆ ತೀವ್ರ ದುಃಖ ತಂದಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಸ್.ಶಾಂತೇಗೌಡ, ಪ್ರಧಾನ ಕಾರ್ಯದರ್ಶಿ ಹಂಪಾಪುರ ಪುಟ್ಟೇಗೌಡ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಮಣೇನಹಳ್ಳಿ ರಾಜು, ಮುಖಂಡರುಗಳಾದ ಡಾ. ಡಿ.ಎಲ್.ವಿಜಯಕುಮಾರ್, ಎಂ.ಎಲ್.ಮೂರ್ತಿ, ಎಚ್.ಎಚ್.ದೇವರಾಜ್, ಕೆ.ಟಿ.ರಾಧಾಕೃಷ್ಣ, ಎ.ಎನ್.ಮಹೇಶ್. ನಗರಸಭೆ ಅಧ್ಯಕ್ಷೆ ಶೀಲಾದಿನೇಶ್ ಲಾಯರ್ ಪುಟ್ಟೇಗೌಡ, ಹಂಪಾಪುರ ಮಂಜೇಗೌಡ ಇತರರು ಭಾಗವಹಿಸಿದ್ದರು.
Congress leader D.S. Tribute to Chandra Gowda
Leave a comment