ಚಿಕ್ಕಮಗಳೂರು: ಹಿಂದುತ್ವ ಜಪಿಸುತ್ತಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರಿಗೆ ಸೋಲಿನ ಬಳಿಕ ದಲಿತತ್ವ ನೆನಪಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಎಂ.ಮಲ್ಲೇಶಸ್ವಾಮಿ ಟೀಕಿಸಿದರು.
ಇಪ್ಪತ್ತು ವರ್ಷ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿರುವ ಸಿ.ಟಿ.ರವಿ ಅವರು ದಲಿತ ಸಂಘಟನೆಗಳ ನಾಯಕರನ್ನು ನಗರ ನಕ್ಸಲರು ಎಂದು ಕರೆದು ಅಪಮಾನ ಮಾಡಿದ್ದರು. ದಲಿತ ಸಂಘಟನೆಗಳ ನಾಯಕರನ್ನು ಭೀಮೋತ್ಸವ ಕಾರ್ಯಕ್ರಮಕ್ಕೆ ಬರುವಂತೆ ಕರೆದಿರುವುದು ದಲಿತರ ಶಕ್ತಿ ಏನೆಂಬುದು ಅರ್ಥವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ದಲಿತರ ಮತಕ್ಕಾಗಿ ಭೀಮೋತ್ಸವದ ಹೆಸರಿನಲ್ಲಿ ರಾಜಕೀಯ ಮಾಡಲು ಸಿ.ಟಿ.ರವಿ ಹೊರಟಿದ್ದಾರೆ. ಆರ್ಎಸ್ಎಸ್ ಸಂಘಟನೆ ಅವರಿಗೆ ಅಂಬೇಡ್ಕರ್ ಸಿದ್ಧಾಂತಗಳ ಬಗ್ಗೆ ಅರಿವು ಮೂಡಿಸಲಿ. ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾಯಿಸುವ ಬಗ್ಗೆ ಮಾತನಾಡಿದಾಗ ಸಿ.ಟಿ.ರವಿ ಎಲ್ಲಿ ಅಡಗಿ ಕುಳಿತಿದ್ದರು’ ಎಂದು ಪ್ರಶ್ನಿಸಿದರು.
ಕೆಪಿಸಿಸಿ ನೀತಿ ಸಂಶೋಧನಾ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಶಿವಕುಮಾರ್ ಮಾತನಾಡಿ, ‘ಹಿಂದೂ ನಾವೆಲ್ಲ ಒಂದು ಎನ್ನುವ ಹಿಂದುತ್ವವಾದಿಗಳಿಂದ ದಲಿತರ ಮೇಲೆ ದೌರ್ಜನ್ಯ ನಡೆದಾಗ ಸಿ.ಟಿ.ರವಿ ಅವರ ಬಾಯಿಗೆ ಬೀಗ ಹಾಕಿಕೊಂಡಿರುತ್ತಾರೆ.
ಹಿಂದುತ್ವದ ಜಾತಿ ಹೆಸರಿನಲ್ಲಿ ಸಮಾಜದಲ್ಲಿ ನಿರ್ಮಾಣಗೊಂಡ ಶ್ರೇಣಿಕೃತ ವ್ಯವಸ್ಥೆಯ ವಿರುದ್ಧವೇ ಬಾಬಾ ಸಾಹೇಬ್ ಅಂಬೇಡ್ಕರ್ ಬದುಕಿನುದ್ದಕ್ಕೂ ಹೋರಾಟ ಮಾಡಿದ್ದಾರೆ. ಅದೇ ಹಿಂದುತ್ವ ಪರಿಪಾಲಿಸುವ ಬಿಜೆಪಿಯವರು ಇಂದು ಮತಕ್ಕಾಗಿ ಅಂಬೇಡ್ಕರ್ ಚಿತ್ರ ಇಟ್ಟುಕೊಂಡಿದ್ದಾರೆ ಎಂಬುದನ್ನು ಜನ ಅರಿತಿದ್ದಾರೆ’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಆಲ್ಲೂರು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹುಣಸೇಮಕ್ಕಿ ಲಕ್ಷ್ಮಣ, ತಾಲ್ಲೂಕು ಕೆಡಿಪಿ ಸದಸ್ಯ ಲಕ್ಕಾ ಸಂತೋಷ್, ಮುಖಂಡ ದಿವಾಕರ್ ಉಪಸ್ಥಿತರಿದ್ದರು.
C.T. Ravi remembers Dalitism after defeat
Leave a comment