ಕಡೂರು: ವಿದ್ಯುತ್ ತಂತಿ ತಗುಲಿ ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದುರದೃಷ್ಟಕರ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮರಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ತೋಟದಲ್ಲಿದ್ದ ವಿದ್ಯುತ್ ತಂತಿ ತಗುಲಿ 43 ವರ್ಷದ ರೈತ ಹನುಮಂತಪ್ಪ ದುರ್ಮರಣಕ್ಕೀಡಾಗಿದ್ದಾರೆ.
ಈ ಸಾವಿಗೆ ಪಕ್ಕದ ತೋಟದ ಮಾಲೀಕ ರಮೇಶ್ ಅವರ ಅಕ್ರಮ ವಿದ್ಯುತ್ ಸಂಪರ್ಕವೇ ಕಾರಣ ಎಂದು ತಿಳಿದುಬಂದಿದೆ. ರಮೇಶ್ ತಮ್ಮ ತೆಂಗು ಮತ್ತು ಅಡಿಕೆ ತೋಟಕ್ಕೆ ಅಕ್ರಮವಾಗಿ ವಿದ್ಯುತ್ ಲೈನ್ ಎಳೆದಿದ್ದು, ಈ ವಿಷಯ ಮೆಸ್ಕಾಂ ಜೆ.ಇ ಬಸವರಾಜ್ ಅವರ ಗಮನಕ್ಕೆ ಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಮೆಸ್ಕಾಂ ಅಧಿಕಾರಿಗಳ ಇಂತಹ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯವೇ ರೈತನ ಪ್ರಾಣಕ್ಕೆ ಕಂಟಕವಾಗಿದೆ ಎಂದು ಮರಡಿಹಳ್ಳಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡ ನೂರಾರು ಗ್ರಾಮಸ್ಥರು ಕಡೂರಿನ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ, ಕಚೇರಿ ಮುಂಭಾಗದಲ್ಲೇ ಮೃತರ ಶವವನ್ನಿಟ್ಟು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಅಕ್ರಮವಾಗಿ ವಿದ್ಯುತ್ ಲೈನ್ ಎಳೆದ ತೋಟದ ಮಾಲೀಕ ರಮೇಶ್ ಹಾಗೂ ಕರ್ತವ್ಯ ಲೋಪ ಎಸಗಿದ ಜೆ.ಇ ಬಸವರಾಜ್ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.
ಇಂಧನ ಸಚಿವ ಕೆ.ಜೆ ಜಾರ್ಜ್ ಅವರ ಉಸ್ತುವಾರಿ ಇರುವ ಜಿಲ್ಲೆಯಲ್ಲೇ ಇಂತಹ ಘೋರ ನಿರ್ಲಕ್ಷ್ಯ ನಡೆದಿರುವುದು ಸಾರ್ವಜನಿಕರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ. “ನಮಗೆ ನ್ಯಾಯ ಬೇಕು” ಎಂದು ರಸ್ತೆಗಿಳಿದಿರುವ ಗ್ರಾಮಸ್ಥರು ಮೆಸ್ಕಾಂ ವಿರುದ್ಧ ಸರಣಿ ಘೋಷಣೆಗಳನ್ನು ಕೂಗಿದ್ದಾರೆ.
ಮೃತ ಹನುಮಂತಪ್ಪ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಮತ್ತು ಈ ಇಡೀ ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸಾರ್ವಜನಿಕರು ಮತ್ತು ರೈತ ಸಂಘಟನೆಗಳು ಆಗ್ರಹಿಸಿವೆ.
Farmer dies after being electrocuted by electric wire
Leave a comment