ಚಿಕ್ಕಮಗಳೂರು: ಸಮಾಜದಲ್ಲಿ ಶಾಂತಿ, ಸ್ವಾಸ್ಥ್ಯ ಮತ್ತು ಉತ್ತಮ ವಾತಾವರಣ ನಿರ್ಮಾಣವಾಗಬೇಕಾದರೆ ಪ್ರತಿಯೊಬ್ಬರೂ ವ್ಯಸನಗಳಿಂದ ದೂರವಿರಬೇಕು. ವ್ಯಸನಮುಕ್ತ ಸಮಾಜ ನಿರ್ಮಾಣದಿಂದ ಮಾತ್ರ ಸುಂದರ ಭವಿಷ್ಯ ಸಾಧ್ಯ ಎಂದು ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್ ಹೇಳಿದರು.
ನಗರದ ಡಿಎಸಿಜಿ ಸರ್ಕಾರಿ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಮಹಾಂತ ಶಿವಯೋಗಿಗಳ ಜನ್ಮದಿನ ಅಂಗವಾಗಿ ಶನಿವಾರ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿ ೧೯೭೫ರಲ್ಲಿ ಇಳಕಲ್ ಮಠದ ಶ್ರೀಗಳು ‘ಜೋಳಿಗೆ ಚಳವಳಿ’ ಮೂಲಕ ಸಮಾಜದಲ್ಲಿ ವ್ಯಸನಮುಕ್ತಿಯ ಜಾಗೃತಿ ಮೂಡಿಸಿದ ಕಾರ್ಯವನ್ನು ಸ್ಮರಿಸಿದರು. ಧಾನ್ಯ ಅಥವಾ ಹಣ ಕೇಳದೆ, ಜನರ ದುರ್ವ್ಯಸನಗಳನ್ನು ತ್ಯಜಿಸುವಂತೆ ಕರೆ ನೀಡಿದ ಶ್ರೀಗಳ ಸಮಾಜಮುಖಿ ಕಾರ್ಯ ಕ್ರಾಂತಿಕಾರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ದೇಶದ ಶಕ್ತಿಯಾಗಿರುವ ಯುವಜನರು ವ್ಯಸನಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ವ್ಯಸನ ಎಂದರೆ ಕೇವಲ ಮದ್ಯ ಅಥವಾ ಮಾದಕ ವಸ್ತುಗಳಷ್ಟೇ ಅಲ್ಲ, ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣವೂ ಗಂಭೀರ ಸಮಸ್ಯೆಯಾಗಿದೆ ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಮಾತನಾಡಿ, ಯುವಜನರು ದುಶ್ಚಟಗಳಿಗೆ ಬಲಿಯಾಗದೆ ಸಮಾಜ ಸೇವೆಯಂತಹ ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ನಿವೃತ್ತ ಉಪನ್ಯಾಸಕ ಬಿ. ತಿಪ್ಪೇರುದ್ರಪ್ಪ ಮಾತನಾಡಿ, ಬಸವಾದಿ ಶರಣರು ಸಮಾಜದಲ್ಲಿ ವೈಚಾರಿಕ ಮತ್ತು ಸಾಮಾಜಿಕ ಕ್ರಾಂತಿ ಮೂಡಿಸಿದಂತೆ, ಡಾ. ಮಹಾಂತ ಶಿವಯೋಗಿಗಳೂ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರ ಜನ್ಮದಿನವನ್ನು ‘ವ್ಯಸನಮುಕ್ತ ದಿನ’ವಾಗಿ ಆಚರಿಸುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೆ.ಮಂಜೇಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಕೆ.ಮಂಜುನಾಥ್, ಡಿ.ಎ.ಸಿ.ಜಿ.ಸರ್ಕಾರಿ ಪಾಲಿಟೆಕ್ನಿಕ್ನ ಉಪಪ್ರಾಂಶುಪಾಲ ಶ್ರೀಧರ್ ಆಚಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಿ.ಎ.ಸಿ.ಜಿ. ಪಾಲಿಟೆಕ್ನಿಕ್ ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಸ್ವಾಗತ, ಜಿಲ್ಲಾ ನಿವೃತ್ತ ಗ್ರಂಥಾಲಯಾಧಿಕಾರಿ ಮಹೇಶಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
A beautiful future is possible only by building an addiction-free society.
Leave a comment