ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟು ಜೂಜಾಟ ನಡೆಸುತ್ತಿದ್ದ ಸ್ಥಳದ ಮೇಲೆ ಮೂಡಿಗೆರೆ ಪೊಲೀಸರು ದಾಳಿ ನಡೆಸಿ, ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಜುಲೈ 17ರಂದು ರಾತ್ರಿ 8.10ರ ಸುಮಾರಿಗೆ ಮೂಡಿಗೆರೆ ಪೊಲೀಸ್ ಠಾಣೆಯ ಪಿಎಸ್ಐ (ತನಿಖೆ) ಶಶಿ ಟಿ.ಕೆ. ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ, ಪೊಲೀಸ್ ಸಿಬ್ಬಂದಿಯೊಂದಿಗೆ ಛತ್ರಮೈದಾನದ ವಾಟರ್ಮ್ಯಾನ್ ಲೋಕೇಶ್ ಅವರ ಮನೆಯ ಹಿಂದಿನ ಖಾಲಿ ಜಾಗದ ಮೇಲೆ ದಾಳಿ ನಡೆಸಲಾಯಿತು.
ದಾಳಿಯ ವೇಳೆ ಎಂಟು ಮಂದಿ ನೆಲದ ಮೇಲೆ ಬೆಡ್ಶೀಟ್ ಹಾಸಿಕೊಂಡು ಹಣವನ್ನು ಪಣಕ್ಕಿಟ್ಟು ಅಂದರ್-ಬಾಹರ್ ಇಸ್ಪೀಟು ಜೂಜಾಟ ಆಡುತ್ತಿರುವುದು ಪತ್ತೆಯಾಗಿದೆ. ಪೊಲೀಸರು ಸ್ಥಳದಲ್ಲೇ ಆರೋಪಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು.
ಕಾರ್ಯಾಚರಣೆಯಲ್ಲಿ ಜೂಜಾಟಕ್ಕೆ ಬಳಸಲಾಗಿದ್ದ 52 ಇಸ್ಪೀಟು ಎಲೆಗಳು, ₹920 ನಗದು, ಒಂದು ಪಿಂಕ್-ಬೂದು ಬಣ್ಣದ ಬೆಡ್ಶೀಟ್ ಹಾಗೂ ಬೆಳಕಿಗೆ ಬಳಸುತ್ತಿದ್ದ ಚಾರ್ಜರ್ ಲೈಟ್ ಅನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸ್ವತ್ತುಗಳನ್ನು ಪಂಚರ ಸಮಕ್ಷಮದಲ್ಲಿ ಮಹಜರು ನಡೆಸಿ ಸೀಲ್ ಮಾಡಲಾಗಿದೆ.
ಪ್ರಕರಣದಲ್ಲಿ ಲೋಕೇಶ್, ಅಬೂಬಕರ್, ಇಬ್ರಾಹಿಂ, ಅನಿಲ್ ಕುಮಾರ್, ಇರ್ಫಾನ್, ಮುಸ್ತಾಕ್, ಅಶ್ವಥ್ ಹಾಗೂ ತೇಜಸ್ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಆರೋಪಿಗಳನ್ನಾಗಿ ದಾಖಲಿಸಲಾಗಿದೆ. ಪ್ರಕರಣ ದಾಖಲಾದ ನಂತರ ಠಾಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಲಾಗಿದ್ದು, ಸ್ಥಳದಲ್ಲಿಯೇ ಬಿಡುಗಡೆ ಮಾಡಲಾಗಿದೆ.
ಪೊಲೀಸರು ಮೊದಲಿಗೆ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 87ರಡಿ ಅಸಂಜ್ಞೇಯ (ಎನ್ಸಿ) ಪ್ರಕರಣ ದಾಖಲಿಸಿ ನ್ಯಾಯಾಲಯದ ಅನುಮತಿ ಕೋರಿದ್ದರು. ಬಳಿಕ ನ್ಯಾಯಾಲಯದಿಂದ ಅನುಮತಿ ದೊರೆತ ಹಿನ್ನೆಲೆಯಲ್ಲಿ ಜುಲೈ 18ರಂದು ಆರೋಪಿಗಳ ವಿರುದ್ಧ ನಿಯಮಾನುಸಾರ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Police raid on illegal Andar-Bahar gambling in Mudigere
Leave a comment