ಚಿಕ್ಕಮಗಳೂರು : ಕಳೆದ ಎಂಟು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸಿದ್ದ ಕೇಬಲ್ ನೆಟ್ವರ್ಕ್ ಉದ್ಯಮಿ ಉಪ್ಪಳ್ಳಿಯ ಮಹಮದ್ ಅನ್ವರ್ ಕೊಲೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಂತೆ ಮೃತನ ಸಹೋದರ ಅಬ್ದುಲ್ ಕಬೀರ್ ಆಗ್ರಹಿಸಿದರು.
ಅವರು ಸೋಮವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ೨೦೧೮ರ ಜೂ.೨೨ ರಂದು ನಗರದ ಗೌರಿ ಕಾಲುವೆ ಬಡಾವಣೆ ಗುಡ್ಮಾರ್ನಿಂಗ್ ಶಾಪ್ ಬಳಿ ದುಷ್ಕರ್ಮಿಗಳು ಡ್ರ್ಯಾಗನ್ ಮತ್ತು ಚಾಕುವಿನಿಂದ ಇರಿದು ಭರ್ಬರವಾಗಿ ಕೊಲೆ ಮಾಡಿದ್ದರೆಂದು ಹೇಳಿದರು.
ಕೊಲೆ ನಡೆದು ೮ ವರ್ಷಗಳು ತುಂಬಿದ್ದರೂ ಪೊಲೀಸ್ ಇಲಾಖೆ, ಸಿಐಡಿ ಇಲಾಖೆ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸದೆ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ವಿಫಲರಾಗಿರುವುದರಿಂದ ಕುಟುಂಬವು ಕಂಗಾಲಾಗಿ ಚಿಂತಾಜನಕ ಸ್ಥಿತಿಯಲ್ಲಿದೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ಶೀಟ್ ಸಲ್ಲಿಕೆಯಾಗಿಲ್ಲ. ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಲು ಹೋರಾಟ ಮಾಡುತ್ತಿದ್ದೇವೆ. ಕೊಲೆಗಾರರನ್ನು ಜೈಲಿಗೆ ತಳ್ಳುವವರೆಗೂ ವಿಶ್ರಮಿಸದೆ ಹೋರಾಟ ಮುಂದುವರೆಸುತ್ತೇನೆ. ಈಗಾಗಲೇ ಶಂಕಿತ ೭ ಆರೋಪಿಗಳ ಪೈಕಿ ಮೂವರು ಮಂಪರು ಪರೀಕ್ಷೆಗೆ ಒಪ್ಪಿಗೆ ನೀಡಿದ್ದು, ನ್ಯಾಯಾಲಯ ಅಧಿಕೃತವಾಗಿ ಆದೇಶ ನೀಡುತ್ತಿಲ್ಲ ಎಂದು ವಿವರಿಸಿದರು.
ಮೃತನ ಕುಟುಂಬಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ತನಿಖಾ ಸಂಸ್ಥೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕೊಲೆ ಪ್ರಕರಣ ನಡೆದು ಇದುವರೆಗೂ ತನಿಖೆ ಪೂರ್ಣಗೊಳ್ಳದಿರುವ ಬಗ್ಗೆ ಕಾರಣವೇನೆಂದು ಪ್ರಶ್ನಿಸಿದ ಅವರು ೫ ವರ್ಷಗಳಿಂದ ಸಿಐಡಿ ತನಿಖೆ ನಡೆಸಿದರೂ ಫಲಿತಾಂಶ ಪ್ರಕಟಿಸುವಲ್ಲಿ ವಿಳಂಭವೇಕೆ ಎಂದರಲ್ಲದೆ, ಕೂಡಲೆ ಸಿಬಿಐ ತನಿಖೆ ನಡೆಸಿ ಸಮಗ್ರ ತನಿಖೆ ನಡೆಸುವ ಮೂಲಕ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬೆನಡಿಕ್ಟ್ ಜೇಮ್ಸ್, ಅಬ್ದುಲ್ ಮಜೀದ್, ನಜೀರ್ ಉಪಸ್ಥಿತರಿದ್ದರು.
Demand for CBI investigation into Mohammad Anwar murder case
Leave a comment